ಕರ್ನಾಟಕ

karnataka

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ‘ತ್ರಿಸೂತ್ರ’

By

Published : May 16, 2021, 7:10 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಡೆಗಟ್ಟಲು ಮೂರು ನಿಯಮಗಳ ‘ತ್ರಿಸೂತ್ರ’ವನ್ನು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಘೋಷಣೆ ಮಾಡಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ನ್ಯೂಸ್, coronavirus news
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗಟ್ಟಲು ‘ತ್ರಿಸೂತ್ರ’ ನಿಯಮ ಪಾಲನೆ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗವನ್ನು ತಡೆಗಟ್ಟಲು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ‘ತ್ರಿಸೂತ್ರ’ವನ್ನು ಘೋಷಣೆ ಮಾಡಿದ್ದಾರೆ. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು, ಪೊಲೀಸರಿಗೆ ಅವರು ಸೂಚನೆ ನೀಡಿದ್ದಾರೆ.‌

ಈ ಕುರಿತು ಶಿರಸಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಜಿಲ್ಲೆಯ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಆಕ್ಸಿಜನ್ ಬೆಡ್​ಗಳನ್ನು ಹೆಚ್ಚಳ ಮಾಡುವುದು, ಹೊಸ ಮದುವೆಗೆ ಅವಕಾಶ ನೀಡದಿರುವುದು ಹಾಗೂ ಜಿಲ್ಲೆಯ 19 ಗ್ರಾಮ ಪಂಚಾಯಿತಿ ಮತ್ತು 2 ನಗರ ಪ್ರದೇಶವನ್ನು ವಿಶೇಷ ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ಕೊರೊನಾ ತಡೆಗಟ್ಟಲು ವಿಶೇಷ ಕ್ರಮಗಳನ್ನು ಅನುರಿಸಬೇಕು ಎಂದರು.

ಸಚಿವ ಶಿವರಾಮ ಹೆಬ್ಬಾರ್

ಆಕ್ಸಿಜನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ:

ಜಿಲ್ಲೆಯಲ್ಲಿ ಕೋವಿಡ್ ಪ್ರಾಬಲ್ಯ ಹೆಚ್ಚಾಗಿದೆ. ಕೊರೊನಾ ಪೀಡಿತರನ್ನು ಪರೀಕ್ಷೆಗೆ ಹೆಚ್ಚು ಒಳಪಡಿಸಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಐಸಿಯು ಹಾಸಿಗೆಗಳನ್ನು ಹೆಚ್ಚಿಸುವ ಅಗತ್ಯವಿದೆ. ಆದ್ದರಿಂದ ಕಾರವಾರದ ಕ್ರಿಮ್ಸ್​ನಲ್ಲಿ 25 ಆಕ್ಸಿಜನ್ ಹಾಸಿಗೆಗಳನ್ನು ಹೆಚ್ಚುವರಿಯಾಗಿ ಮಾಡಲಾಗುತ್ತದೆ. ಅದೇ ರೀತಿ ಘಟ್ಟದ ಮೇಲಿನ ಯಲ್ಲಾಪುರ, ಶಿರಸಿ ಹಾಗೂ ಹಳಿಯಾಳದಲ್ಲಿ ತಲಾ 10 ಆಕ್ಸಿಜನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇಷ್ಟು ದಿನಗಳ ಕಾಲ ನಗರ ಪ್ರದೇಶಕ್ಕೆ ಹಬ್ಬಿದ್ದ ಕೊರೊನಾ ಈಗ ಗ್ರಾಮೀಣ ಭಾಗದಲ್ಲಿ‌ ವಿಸ್ತರಿಸಿದೆ. ಇದಕ್ಕೆ ಮದುವೆ ಮನೆಗಳು ಮೂಲ ಕಾರಣವಾಗಿದೆ. ಆದ ಕಾರಣ ಮೇ.15 ರ ವರೆಗೆ ಮದುವೆಗೆ ಅವಕಾಶ ನೀಡಿರುವುದಕ್ಕೆ 40 ರಿಂದ 20 ಕ್ಕೆ ಜನರ ಮಿತಿ ಇಳಿಸಲಾಗಿದ್ದು, ಮುಂದಿನ ಆದೇಶ ಬರುವವರೆಗೆ ಹೊಸ ಮದುವೆಗೆ ಯಾವುದೇ ಅವಕಾಶ ನೀಡಲಾಗುವುದಿಲ್ಲ. ಈ ಕುರಿತು ಅಧಿಕೃತ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ನಿರ್ಬಂಧಿತ ವಲಯವಾಗಿ ಘೋಷಣೆ:

ಜಿಲ್ಲೆಯಲ್ಲಿ ಶೇ 50 ಕ್ಕಿಂತ ಹೆಚ್ಚಿನ ಕೊರೊನಾ ಸೋಂಕಿತರನ್ನು ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ರೋಗ ನಿಯಂತ್ರಣಕ್ಕೆ ತರಲು ನಿರ್ಬಂಧಿತ ವಲಯವಾಗಿ ಘೋಷಣೆ (ಕಂಟೈನ್ಮೆಂಟ್ ಝೋನ್) ಮಾಡಲಾಗುತ್ತಿದೆ. ಜಿಲ್ಲೆಯ ಚಿತ್ತಾಕುಲ, ಮಲ್ಲಾಪುರ, ಅಣಲೇಬೈಲ್, ಬನವಾಸಿ, ಮನ್ಮನೆ, ಕೋಲಶಿರ್ಸಿ, ಮಾವಿನಮನೆ, ಉಮ್ಮಚಗಿ, ನಂದೊಳ್ಳಿ, ಇಂದೂರು, ರಾಮನಗರ, ಅಖೇತಿ, ಅಂಬಿಕಾನಗರ, ಅಂಬೇವಾಡಿ, ಮುರ್ಕವಾಡ, ಕರ್ಕಿ, ಶಿರಾಲಿ, ಬಬ್ರುವಾಡ, ಹಿಲ್ಲೂರು ಸೇರಿ 19 ಗ್ರಾಮ ಪಂಚಾಯಿತಿಗಳನ್ನು ಹಾಗೂ ಕಾರವಾರ ಮತ್ತು ದಾಂಡೇಲಿ ನಗರವನ್ನು ವಿಶೇಷ ನಿರ್ಬಂಧಿತ ವಲಯವನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ 17 ಗ್ರಾ.ಪಂಗಳಲ್ಲಿ ವಿಶೇಷ ಕಂಟೈನ್‌ಮೆಂಟ್‌ ವಲಯ

ಕಂಟೈನ್ಮೆಂಟ್ ಝೋನ್​ನಲ್ಲಿ ಭಾನುವಾರ ಮಾತ್ರ ಅಗತ್ಯ ವಸ್ತು ಮಾರಾಟ:

ನಿರ್ಬಂಧಿತ ವಲಯದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಯ ನಂತರ 10 ದಿನಗಳ ಕಾಲ ತಳ್ಳು ಗಾಡಿಯ ಮೇಲೆ ತರಕಾರಿ, ಹಣ್ಣು, ಹಾಲು ಮತ್ತು ಔಷಧಿ ಅಂಗಡಿಗಳನ್ನು ಮಾತ್ರ ತರೆಯಲು ಅವಕಾಶವಿದ್ದು, ಬೆಳಿಗ್ಗೆ 6 ರಿಂದ 10 ರ ವರೆಗೂ ಓಡಾಡಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು ಕೊರೊನಾ ಇನ್ನಷ್ಟು ಹರಡದಂತೆ ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ಎಂದು ಸಲಹೆ ನೀಡಿದ್ದಾರೆ.

TAGGED:

ABOUT THE AUTHOR

...view details