ಕರ್ನಾಟಕ

karnataka

ಉತ್ತರಕನ್ನಡ: 34 ಜನರಲ್ಲಿ ಇಲಿ ಜ್ವರ ಪತ್ತೆ... ಈ ಕಾಯಿಲೆಯ ಲಕ್ಷಣಗಳೇನು?

By ETV Bharat Karnataka Team

Published : Sep 23, 2023, 6:37 AM IST

rat fever case: ಇಲಿ ಜ್ವರಕ್ಕೆ ಸಂಬಂಧಿಸಿದ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 1, ಭಟ್ಕಳ 3, ಹೊನ್ನಾವರ 8, ಜೋಯಿಡಾ 1, ಕಾರವಾರದಲ್ಲಿ 8, ಕುಮಟಾ 7, ಶಿರಸಿ 3, ಸಿದ್ದಾಪುರ 3 ಪ್ರಕರಣಗಳು ಪತ್ತೆಯಾಗಿವೆ.

rat fever cases
ಉತ್ತರಕನ್ನಡ ಜಿಲ್ಲೆಯ 34 ಜನರಲ್ಲಿ ಇಲಿಜ್ವರ ಪತ್ತೆ

ಉತ್ತರಕನ್ನಡ ಜಿಲ್ಲೆಯ 34 ಜನರಲ್ಲಿ ಇಲಿಜ್ವರ ಪತ್ತೆ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆಗೆ ಇಲಿ ಜ್ವರವೂ ಜನರಲ್ಲಿ ತೀವ್ರಗತಿಯಲ್ಲಿ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಸುಮಾರು 34 ಜನರಲ್ಲಿ ಕಾಣಿಸಿಕೊಂಡಿರುವ ಇಲಿ ಜ್ವರ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಇಲಿ ಜ್ವರದ ಬಗ್ಗೆ ಸಕಾಲದಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸದೆ ಇದ್ದಿದ್ದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಉತ್ತರಕನ್ನಡ ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿನಿಂದ ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಬಹುತೇಕ ಆಸ್ಪತ್ರೆಗಳಲ್ಲಿ ಇಲಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಒಂದು ಕಡೆ ಡೆಂಗ್ಯೂ, ಮಲೇರಿಯಾದಂತಹ ಪ್ರಕರಣಗಳು ಆತಂಕ ಮೂಡಿಸಿದರೆ, ಇದೀಗ ಇಲಿ ಜ್ವರದಂತಹ ಗಂಭೀರ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿದೆ.

ಸದ್ಯ ಜಿಲ್ಲೆಯಲ್ಲಿ ಸುಮಾರು 34 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಅಂಕೋಲಾದಲ್ಲಿ 1, ಭಟ್ಕಳ 3, ಹೊನ್ನಾವರ 8, ಜೋಯಿಡಾ 1, ಕಾರವಾರದಲ್ಲಿ 8, ಕುಮಟಾ 7, ಶಿರಸಿ 3, ಸಿದ್ದಾಪುರದಲ್ಲಿ 3 ಪ್ರಕರಣಗಳು ಕಂಡುಬಂದಿವೆ.

ಇಲಿ ಜ್ವರ ಬರಲು ಕಾರಣವೇನು, ವೈದ್ಯರು ಏನಂತಾರೆ?

ಇನ್ನು ಈ ಕಾಯಿಲೆ ಹರಡಲು ಪ್ರಮುಖವಾಗಿ ಇಲಿ ಮೂತ್ರದಿಂದ ಲೆಪ್ಟೊಸ್ಪಿರೋಸಿಸ್ ಹೊರಬಂದಾಗ ಅದು ಕುಡಿಯುವ ನೀರು ಅಥವಾ ಆಹಾರ ಪದಾರ್ಥಗಳ ಜೊತೆ ಸೇರಿದಾಗ ಅದು ಕಲುಷಿತಗೊಳ್ಳುತ್ತದೆ. ಒಂದು ವೇಳೆ ಅದನ್ನು ಮನುಷ್ಯ ಸೇವನೆ ಮಾಡಿದ್ರೆ ವೈರಸ್ ಅಟ್ಯಾಕ್ ಆಗಿ ಇಲಿ ಜ್ವರಕ್ಕೆ ತುತ್ತಾಗುತ್ತಾನೆ. ಇನ್ನೂ ಇಲಿ ಜ್ವರದ ಪ್ರಮುಖ ಲಕ್ಷಣಗಳು ಅಂದರೆ ಅತಿಯಾದ ಜ್ವರ, ಮೈ ಕೈ ನೋವು, ರಕ್ತ ಸ್ರಾವ, ಮೂಗು-ಬಾಯಿಗಳಲ್ಲಿ ರಕ್ತಸ್ರಾವವಾಗಲಿದೆ. ಅಲ್ಲದೇ 20 ದಿನಗಳಾದರೂ ಜ್ವರ ಕಡಿಮೆಯಾಗಲ್ಲ. ಇನ್ನು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯಬೇಕು ಎಂದು ಡಿಎಚ್ಒ ಡಾ ನೀರಜ್ ಬಿ.ವಿ ಮಾಹಿತಿ ನೀಡಿದ್ದಾರೆ.

ಇನ್ನು ಮನಷ್ಯನಲ್ಲಿ ಎರಡನೇ ಬಾರಿ ಇಲಿ ಜ್ವರ ಪತ್ತೆಯಾದರೆ ಅದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ‌‌. ಇದರಿಂದ ಲಿವರ್ ಡ್ಯಾಮೇಜ್, ಜಾಂಡೀಸ್, ಕಿಡ್ನಿ ವೈಫಲ್ಯ, ಮೆದಳು ಜ್ವರ ಬಂದು ಮನುಷ್ಯನ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜನರು ಸಣ್ಣ ಜ್ವರವೆಂದು ನಿರ್ಲಕ್ಷ್ಯ ಮಾಡದೆ, ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸಬೇಕು. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮುಂಜಾಗ್ರತೆ ಕ್ರಮ:ಇನ್ನು ನೀರನ್ನು ಕುದಿಸಿ ಕುಡಿಯುವುದು ಉತ್ತಮ ಮತ್ತು ಆಹಾರ ಪಾದಾರ್ಥಗಳನ್ನ ಮುಚ್ಚಿಟ್ಟು ಸೇವನೆ ಮಾಡಬೇಕು. ಪಾದ ರಕ್ಷೆಗಳಿಲ್ಲದೆ ಹೊರಗೆ ಓಡಾಡಬಾರದು ಎಂದು ವೈದ್ಯರು ತಿಳಿಸಿದ್ದಾರೆ.

ಇಲಿ ಜ್ವರ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ನಿರ್ಲಕ್ಷ್ಯವೇ ?ಇನ್ನು ಜಿಲ್ಲೆಯಲ್ಲಿ ಇಲಿ ಜ್ವರದಂತಹ ಪ್ರಕರಣಗಳು ಕಂಡುಬರುತ್ತಿರುವುದಕ್ಕೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಯಾಕೆಂದರೆ ಸೂಕ್ತ ಸಮಯದಲ್ಲಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಇಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ರಕ್ತ ಪರೀಕ್ಷೆ ಮಾಡುವ ಉಪಕರಣಗಳು ಇಲ್ಲ ಹೀಗೆ ಹತ್ತು ಹಲವು ಕಾರಣಗಳಿವೆ. ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡದೆ ಜನರ ಆರೋಗ್ಯ ಕಾಪಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಒತ್ತಾಯಿಸಿದ್ದಾರೆ.

ಇದನ್ನೂಓದಿ:ಚಾಮರಾಜನಗರ: ಚುಕ್ಕಿ ಚರ್ಮ ರೋಗದಿಂದ ಬಳಲುತ್ತಿರುವ ಮಕ್ಕಳ ಕ್ಷೇಮ ವಿಚಾರಿಸಿದ ಆರೋಗ್ಯ ಸಚಿವರು

ABOUT THE AUTHOR

...view details