ಕರ್ನಾಟಕ

karnataka

ಗಲಭೆ ವೇಳೆ ಓಡುವಾಗ ಕೆರೆಗೆ ಜಾರಿ ಬಿದ್ದು ಸಾವು: ಪರೇಶ್ ಮೇಸ್ತಾ ಸಾವಿನ ರಹಸ್ಯ ಭೇದಿಸಿದ ಸಿಬಿಐ

By

Published : Oct 20, 2022, 6:55 AM IST

ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ನಾಪತ್ತೆಯಾಗಿದ್ದ ಪರೇಶ್ ಮೇಸ್ತಾ ಎರಡು ದಿನಗಳ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಇದರಿಂದ ಜಿಲ್ಲೆಯಲ್ಲಿ ಎಂದೂ ಕಂಡರಿಯದ ಪ್ರತಿಭಟನೆ ನಡೆದು ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು.

paresh-mesta-died-after-slipping-into-lake-cbi-report
ಗಲಭೆ ವೇಳೆ ಓಡುವಾಗ ಕೆರೆಗೆ ಜಾರಿ ಬಿದ್ದು ಸಾವು: ಪರೇಶ್ ಮೇಸ್ತಾ ಸಾವಿನ ರಹಸ್ಯ ಭೇದಿಸಿದ ಸಿಬಿಐ

ಕಾರವಾರ:ಹೊನ್ನಾವರದ ಮೀನುಗಾರ ಯುವಕ ಪರೇಶ್ ಮೇಸ್ತಾನದ್ದು ಆಕಸ್ಮಿಕ ಸಾವು. ಯಾವುದೇ ಕೋಮು ಗಲಭೆಯಿಂದ ನಡೆದ ಹತ್ಯೆಯಲ್ಲ. ಆತ ಗಲಭೆ ವೇಳೆ ಓಡುವಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಪರೇಶ್ ಮೇಸ್ತಾ ಸಾಯುವುದಕ್ಕೂ ಮೊದಲು ಕುಮಟಾದಲ್ಲಿ ನಡೆದ ಆಗಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೂ ಹೋಗಿ ಬಂದಿದ್ದ. ಸುಮಾರು 25 ಕಿ.ಮೀ. ಪ್ರಯಾಣಿಸಿ ಸ್ನೇಹಿತರೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಮನೆಗೆ ಬಂದಿದ್ದ. ನಂತರ ಮನೆಯಿಂದ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಬಿಐ ಅಧಿಕಾರಿಗಳು ಪರೇಶ್ ಮೇಸ್ತಾ ಒಡನಾಡಿಗಳು, ಆತನ ಸ್ನೇಹಿತರು, ಘಟನೆ ನಡೆದ ಸಿಸಿಟಿವಿ ಕ್ಯಾಮೆರಾ ಸೇರಿ ಸಾಕಷ್ಟು ಸಾಕ್ಷಿಗಳೊಂದಿಗೆ ನ್ಯಾಯಾಲಯಕ್ಕೆ ವಿಸ್ತ್ರತ ವರದಿ ಸಲ್ಲಿಸಿದ್ದು, ವರದಿಯಲ್ಲಿ ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷಮುಕ್ತಗೊಳಿಸಬಹುದು ಎಂದು ಹೇಳಿದೆ.

ಅಲ್ಲದೆ, ಪರೇಶ್ ಮೇಸ್ತಾ ಅವರ ಆಪ್ತ ಸ್ನೇಹಿತರ ಹೇಳಿಕೆ ದಾಖಲಿಸಿದ್ದು, ಅದರ ಪ್ರಕಾರ ಪರೇಶ್ ಮೇಸ್ತಾ ಕೆಲವೊಮ್ಮೆ ಮದ್ಯ ಸೇವಿಸಿಯೂ ಮನೆಗೆ ಬಂದಿದ್ದ. ಆಗಾಗ ಸ್ನೇಹಿತನ ಮನೆಯಲ್ಲಿಯೇ ಇರುತ್ತಿದ್ದ. ಸ್ನೇಹಿತರ ಜತೆ ಸೇರಿಸಿಕೊಂಡು ಮೀನು ವ್ಯಾಪಾರ ಮಾಡುತ್ತಿದ್ದ. ಯಾವ ಹುಡುಗಿಯನ್ನೂ ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ತಂದೆಯ ಒಪ್ಪಿಗೆ ಪಡೆದುಕೊಂಡಿದ್ದ ಎನ್ನುವುದು ಸೇರಿದಂತೆ ಅನೇಕ ಮಹತ್ವದ ಸಂಗತಿಗಳನ್ನು ಸಿಬಿಐ ತನಿಖೆ ತೆರೆದಿಟ್ಟಿದೆ.

ಹೊನ್ನಾವರದಲ್ಲಿ 2017ರ ಡಿಸೆಂಬರ್ 6ರಂದು ನಡೆದ ಕೋಮುಗಲಭೆಯಲ್ಲಿ ನಾಪತ್ತೆಯಾಗಿದ್ದ ಮೇಸ್ತಾ ಎರಡು ದಿನಗಳ ಬಳಿಕ ಶೆಟ್ಟಿಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ. ಬಿಜೆಪಿ ಸೇರಿ ಹಿಂದೂಪರ ಸಂಘಟನೆಗಳು ಅನ್ಯ ಕೋಮಿನವರೇ ಪರೇಶ್​​​ ಮೇಸ್ತಾ ಅವರನ್ನು ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು.

ಇದರಿಂದ ಜಿಲ್ಲೆಯಲ್ಲಿ ಎಂದೂ ಕಂಡರಿಯದ ಪ್ರತಿಭಟನೆ ನಡೆದು ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು. ಕುಟುಂಬಸ್ಥರ ಆಗ್ರಹದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಕರಣ ಸಿಬಿಐಗೆ ವಹಿಸಿತ್ತು. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಬಿಐ ಇತ್ತೀಚೆಗೆ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಸಿತ್ತು.

ಆದರೆ, ಪರೇಶ್​ ಮೇಸ್ತಾ ಅವರ ತಂದೆ ಆ ವರದಿಗೆ ಆಕ್ಷೇಪ ಎತ್ತಿದ್ದರು. ಮಗನನ್ನು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಮುಖಂಡರು ಮರು ತನಿಖೆಗೆ ಆಗ್ರಹಿಸುವುದಾಗಿಯೂ ಹೇಳಿದ್ದರು. ಆದರೆ ಇದೀಗ ಸಿಬಿಐ ಸಲ್ಲಿಕೆ ಮಾಡಿರುವ ವರದಿಯಲ್ಲಿ ಹಲವು ವಿಷಯಗಳು ಹೊರಕ್ಕೆ ಬಂದಿದ್ದು ಸತ್ಯ ಬಯಲಾಗಿದೆ.

ಇದನ್ನೂ ಓದಿ:ಕಾನೂನು ಸುವ್ಯವಸ್ಥೆ ಇಲ್ಲದ್ದೂ ಪರೇಶ್ ಮೇಸ್ತಾ ಸಾವಿಗೆ ಕಾರಣ: ಅಶ್ವತ್ಥ ನಾರಾಯಣ

ABOUT THE AUTHOR

...view details