ಕರ್ನಾಟಕ

karnataka

ಉತ್ತರ ಕನ್ನಡದ ಗುಡ್ಡಗಾಡು ನಿವಾಸಿಗಳಿಗೆ ಕೋವಿಡ್‌ ಪರಿಹಾರಕ್ಕೆ ಅರ್ಜಿ ಸಲ್ಲಿಸುವುದೇ ಸವಾಲಿನ ಕೆಲಸ!

By

Published : Oct 14, 2021, 9:31 AM IST

Updated : Oct 14, 2021, 1:14 PM IST

ಕೋವಿಡ್ ಪರಿಹಾರ
ಕೋವಿಡ್ ಪರಿಹಾರ ()

ಕೋವಿಡ್​ನಿಂದ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಪರಿಹಾರ ಒದಗಿಸಲು ಸರ್ಕಾರವೇನೋ ಮುಂದಾಗಿದೆ. ಈ ಪರಿಹಾರದ ಹಣ ಪಡೆಯಲು ಜನರು ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶವಿದೆ. ಇದು ಗುಡ್ಡಗಾಡು ಪ್ರದೇಶದ ಜನರನ್ನು ತೊಂದರೆಯಲ್ಲಿ ಸಿಲುಕಿಸಿದೆ.

ಕಾರವಾರ: ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಸಾಕಷ್ಟು ಜೀವಗಳನ್ನು ಬಲಿ ಪಡೆದಿದೆ. ಹೀಗಾಗಿ, ಕೋವಿಡ್​ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಪರಿಹಾರ ಒದಗಿಸಲು ಸರ್ಕಾರ ಮುಂದಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಆದರೆ ಇದು ಉತ್ತರಕನ್ನಡ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಜನರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ರಾಜ್ಯದ ಅತೀ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಉತ್ತರಕನ್ನಡದಲ್ಲಿ ಕೊರೊನಾ ಅಬ್ಬರಕ್ಕೆ ಜನರು ತತ್ತರಿಸಿದ್ದು, 700ಕ್ಕೂ ಅಧಿಕ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಾರಕ ಸೋಂಕಿನಿಂದ ಮೃತರಾದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಘೋಷಿಸಿದ್ದು, ನವೋದಯ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದ್ರೆ ಗುಡ್ಡಗಾಡು ಪ್ರದೇಶ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ನೆಟ್​ವರ್ಕ್ ಸಮಸ್ಯೆ ಸಾಮಾನ್ಯವಾಗಿದೆ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಗುಡ್ಡಗಾಡು ಪ್ರದೇಶದ ಜನರಿಗೆ ಸವಾಲಾದ ಆನ್​ಲೈನ್​ ಅರ್ಜಿ ಸಲ್ಲಿಕೆ

ನೆಟ್​ವರ್ಕ್ ಸಮಸ್ಯೆ:

ಕರಾವಳಿ ಹಾಗೂ ಘಟ್ಟ ಸೇರಿದಂತೆ ಒಟ್ಟು 11 ತಾಲೂಕುಗಳನ್ನು ಉತ್ತರಕನ್ನಡ ಜಿಲ್ಲೆ ಒಳಗೊಂಡಿದೆ. ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳು ದಟ್ಟ ಅರಣ್ಯ, ಇಲ್ಲವೇ ಗುಡ್ಡಗಾಡು ಪ್ರದೇಶಗಳಲ್ಲಿವೆ. ಅಂತಹ ಜಾಗಗಳಲ್ಲಿ ನೆಟ್​ವರ್ಕ್ ಮರೀಚಿಕೆಯೇ ಆಗಿದೆ. ಹೀಗಾಗಿ ಕೊರೊನಾದಿಂದ ಮೃತಪಟ್ಟಿರುವ ಕುಟುಂಬಸ್ಥರು ಪರಿಹಾರ ಸಲ್ಲಿಸಲು ಅಲೆದಾಡಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನೆಟ್​ವರ್ಕ್ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ನಿಯಮಗಳನ್ನು ಸರಳೀಕರಿಸಿ, ಆಫ್‌ಲೈನ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯ.

783 ಮಂದಿ ಕೊರೊನಾಕ್ಕೆ ಬಲಿ:

ಜಿಲ್ಲೆಯಲ್ಲಿ ಇದುವರೆಗೆ 55,811 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ 54,865 ಮಂದಿ ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ 783 ಮಂದಿ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ 163 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲೇ ಕೊರೊನಾ ಸಾವುಗಳು ಸಂಭವಿಸಿದ್ದು, ಸಾಕಷ್ಟು ಕುಟುಂಬಗಳು ಮನೆಯ ಯಜಮಾನನ್ನೇ ಕಳೆದುಕೊಂಡಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಅಪರ ಜಿಲ್ಲಾಧಿಕಾರಿ, 'ಸದ್ಯಕ್ಕೆ ಜಿಲ್ಲೆಯಲ್ಲಿ 179 ಮಂದಿ ಕೋವಿಡ್​ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆಫ್‌ಲೈನ್ ಮೂಲಕ ಸಲ್ಲಿಕೆಯಾದ ಅರ್ಜಿಗಳನ್ನು ಅಧಿಕಾರಿಗಳಿಗೆ ಅಪ್‌ಲೋಡ್ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ಪರಿಷ್ಕೃತ ಆದೇಶ ಬಂದ ಬಳಿಕ ಅದರಂತೆ ಕ್ರಮ ಕೈಗೊಳ್ಳುತ್ತೇವೆ' ಎಂದು ತಿಳಿಸಿದರು.

Last Updated :Oct 14, 2021, 1:14 PM IST

ABOUT THE AUTHOR

...view details