ಕರ್ನಾಟಕ

karnataka

ಶಾಲಾರಂಭಕ್ಕೆ ದಿನಗಣನೆ: ಉ.ಕನ್ನಡದಲ್ಲಿ ಶಿಥಿಲಾವಸ್ಥೆ ತಲುಪಿದ ನೂರಾರು ಸರ್ಕಾರಿ ಶಾಲೆಗಳು

By

Published : May 10, 2022, 2:30 PM IST

ಉತ್ತರ ಕನ್ನಡದಲ್ಲಿ 500ಕ್ಕೂ ಅಧಿಕ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಪೋಷಕರ ಚಿಂತೆಗೆ ಕಾರಣವಾಗಿದೆ.

Govt school building in dilapidated condition in Uttara Kannada
ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡಗಳು

ಕಾರವಾರ:ರಾಜ್ಯದಲ್ಲಿ ಮೇ 15 ರಿಂದಲೇ ಶಾಲೆಗಳ ಪುನರಾರಂಭಕ್ಕೆ ಶಿಕ್ಷಣ ಇಲಾಖೆ ದಿನ ನಿಗದಿ ಮಾಡಿದೆ. ಆದರೆ ಮಳೆಗಾಲ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡಗಳ ಕುರಿತು ಸರ್ಕಾರ ಚಿಂತನೆ ನಡೆಸಿಲ್ಲ. ಅದರಲ್ಲಿಯೂ ಉತ್ತರ ಕನ್ನಡದಲ್ಲಿ 500ಕ್ಕೂ ಅಧಿಕ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಪೋಷಕರ ಚಿಂತೆಗೆ ಕಾರಣವಾಗಿದೆ.

ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ದುರಸ್ಥಿ ಗೆ ಆಗ್ರಹ

ಉತ್ತರ ಕನ್ನಡ ಜಿಲ್ಲೆಯಲ್ಲಿ 2,169 ಸರ್ಕಾರಿ ಶಾಲಾ ಕಟ್ಟಡಗಳಿದ್ದು, ಅದರಲ್ಲಿ ಸುಮಾರು 800ಕ್ಕೂ ಹೆಚ್ಚು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಜೊತೆಗೆ, 600ಕ್ಕೂ ಹೆಚ್ಚು ಕಟ್ಟಡಗಳು ಮಣ್ಣಿನ ಗೋಡೆಗಳ ಶಾಲೆಗಳಿವೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ. ಕಳೆದ ಮೂರು ವರ್ಷಗಳಿಂದ ನೆರೆಯ ಪರಿಸ್ಥಿತಿ ಸಹ ಎದುರಾಗುತ್ತಿದ್ದು ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳು ಯಾವಾಗ ಕುಸಿದು ಬೀಳುತ್ತವೆ ಎಂದು ಹೇಳುವುದು ಸಾಧ್ಯವಿಲ್ಲ. ಹೀಗಾಗಿ ಶಿಥಿಲಾವಸ್ಥೆ ತಲುಪಿರುವ ಶಾಲೆಗಳಿಗೆ ಮಕ್ಕಳನ್ನ ಹೇಗೆ ಕಳಿಸೋದು ಎನ್ನುವ ಆತಂಕ ಪಾಲಕರದ್ದಾಗಿದೆ.

ಈ ಬಾರಿ ಮಳೆಗಾಲ ಆರಂಭಕ್ಕೆ ಮುನ್ನವೇ ಶಾಲೆಗಳನ್ನ ಆರಂಭಿಸಲು ಸರ್ಕಾರ ಮುಂದಾಗಿದೆ. ಆದರೆ ಶಾಲಾ ಕಟ್ಟಡಗಳ ಸ್ಥಿತಿಯ ಕುರಿತು ಚಿಂತನೆ ಮಾಡಿಲ್ಲ. ಹೀಗಾಗಿ ಸರ್ಕಾರ ಮೊದಲು ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳ ದುರಸ್ಥಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಡಿ ಜಿಲ್ಲೆ ಉತ್ತರಕನ್ನಡದ ಕಾರವಾರ ತಾಲೂಕಿನಲ್ಲಿ ಮರಾಠಿ, ಕೊಂಕಣಿ ಭಾಷೆಯ ಪ್ರಾಬಲ್ಯ ಹೆಚ್ಚಿದೆ. ಹೀಗಾಗಿ ಕನ್ನಡ ಶಾಲೆಗಳತ್ತ ಮಕ್ಕಳು ಬರುವ ಸಂಖ್ಯೆ ಕಡಿಮೆಯಿದೆ. ಹೀಗಿರುವಾಗ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದರೆ ಪಾಲಕರು ಸಹ ತಮ್ಮ ಮಕ್ಕಳನ್ನ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿಯಿದೆ. ಸ್ಥಳೀಯ ಆಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ.

ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು ಪ್ರತಿಕ್ರಿಯಿಸಿ, ಈಗಾಗಲೇ ಸರ್ಕಾರಿ ಶಾಲಾ ಕಟ್ಟಡಗಳ ಸ್ಥಿತಿ ಬಗ್ಗೆ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಶಿಥಿಲಾವಸ್ಥೆ ತಲುಪಿರುವ ಶಾಲಾ ಕಟ್ಟಡಗಳನ್ನ ಗುರುತಿಸಲಾಗುತ್ತಿದೆ. ಹೀಗಾಗಿ ಶಿಥಿಲಗೊಂಡಿರುವ ಕಟ್ಟಡಗಳನ್ನ ತೆರವುಗೊಳಿಸಿ ಅಗತ್ಯಕ್ಕೆ ತಕ್ಕಂತೆ ಕೊಠಡಿಗಳನ್ನ ನಿರ್ಮಿಸಲು ಶಾಲಾ ಎಸ್‌ಡಿಎಂಸಿ ಹಾಗೂ ತಾಲೂಕು ಪಂಚಾಯತ್ ಹಂತದಲ್ಲೇ ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details