ಕರ್ನಾಟಕ

karnataka

ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಸ್ಥಿರವಾಗಿದೆ, ಸಿಎಂ ಬದಲಾವಣೆ ಇಲ್ಲ: ಆರ್.ವಿ.ದೇಶಪಾಂಡೆ

By ETV Bharat Karnataka Team

Published : Oct 29, 2023, 8:15 AM IST

ಕಾಂಗ್ರೆಸ್​ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

mla-rv-deshpande-reaction-on-change-of-cm
ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ, ಸಿಎಂ ಬದಲಾವಣೆ ಇಲ್ಲ: ಆರ್.ವಿ ದೇಶಪಾಂಡೆ

ಆರ್.ವಿ.ದೇಶಪಾಂಡೆ ಪ್ರತಿಕ್ರಿಯೆ

ಕಾರವಾರ: "ರಾಜ್ಯವು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಸರ್ಕಾರ ಬಹಳ ಸ್ಥಿರವಾಗಿದೆ. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ, ಅದರರ್ಥ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುತ್ತಾರೆ ಎಂದಲ್ಲ" ಎಂದು ಕಾಂಗ್ರೆಸ್​ನ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಸಿಎಂ ಬದಲಾವಣೆ ಕುರಿತು ಕೆಲವು ಕಾಂಗ್ರೆಸ್​ ಶಾಸಕರು ನೀಡಿರುವ ಹೇಳಿಕೆಗೆ ಶನಿವಾರ ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಾ.ಹೆಚ್​.ಸಿ.ಮಹದೇವಪ್ಪ ಭೇಟಿ ನೀಡಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿ, "ಕೆಲವರೆಲ್ಲ ಒಟ್ಟಿಗೆ ಸೇರಿ ಚರ್ಚೆ ಮಾಡಬಹುದು, ಇದು ಒಂದು ದೃಷ್ಟಿಯಲ್ಲಿ ಒಳ್ಳೆಯದೇ. ಚರ್ಚೆಗಳಿಂದ ಪಕ್ಷದ ಬೆಳವಣಿಗೆಗೆ ಒಳ್ಳೆಯ ಸಲಹೆಗಳು ಬರಬಹುದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ. ಕಾಂಗ್ರೆಸ್​ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ನಾಲ್ಕನ್ನು ಅನುಷ್ಠಾನ ಮಾಡಿದೆ" ಎಂದರು.

"ಬಿಜೆಪಿ ಸರ್ಕಾರದ ನಂತರ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ನಾವು ಅಧಿಕಾರಕ್ಕೆ ಬಂದಾಗ ಗ್ಯಾರಂಟಿಗಳಿಗೆ ಹೆಚ್ಚು ಹಣ ಮೀಸಲಿಡಬೇಕಾಯಿತು. ಹೀಗಾಗಿ ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಸಿಎಂ ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸರ್ಕಾರವನ್ನು ಬಲಪಡಿಸುವುದು ನಮ್ಮ ಕರ್ತವ್ಯ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಲವು ಜನ ಊಹಪೋಹ ಸೃಷ್ಟಿಸುತ್ತಾರೆ, ಅದಕ್ಕೆ ನಾವು ಒತ್ತು ಕೊಡುವುದಿಲ್ಲ" ಎಂದು ಹೇಳಿದರು.

"ಯಾವುದೇ ಶಾಸಕರು ಆಪರೇಶನ್ ಕಮಲಕ್ಕೆ ಒಳಗಾಗುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ" ಎಂದರು. ಮುಂದಿನ ದಿನಗಳಲ್ಲಿ ನಿಮಗೆ ಸಚಿವ ಸ್ಥಾನ ಸಿಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ, "ಅನೇಕ ಕಾರಣಗಳಿಂದ ಮಂತ್ರಿಗಳನ್ನು ಆಯ್ಕೆ ಮಾಡುತ್ತಾರೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಬೇಸರವಿಲ್ಲ. ಜಿಲ್ಲೆ ಮತ್ತು ರಾಜ್ಯ ಅಭಿವೃದ್ಧಿಯಾಗಬೇಕು" ಎಂದು ತಿಳಿಸಿದರು.

"ಉತ್ತರಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿದ್ದು ಅದನ್ನು ಅಭಿವೃದ್ಧಿ ಮಾಡುವ ಚಿಂತನೆ ಇದೆ. ಕಾರವಾರದ ಬೀಚ್​ಗಳಲ್ಲಿ ಸ್ವಚ್ಛತೆ ಇಲ್ಲ, ಹೀಗಿದ್ದರೆ ಯಾವ ಪ್ರವಾಸಿಗರು ಬರುತ್ತಾರೆ?. ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರತಿನಿತ್ಯ ಸಾಕಷ್ಟು ಪ್ರವಾಸಿಗರು ನಮ್ಮ ಜಿಲ್ಲೆಗೆ ಬರುತ್ತಾರೆ. ಬರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ" ಎಂದು ಹೇಳಿದರು.

ಇದನ್ನೂ ಓದಿ:ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ABOUT THE AUTHOR

...view details