ಕಾರವಾರ: ಭೌಗೋಳಿಕವಾಗಿ ವಿಶಾಲವಾಗಿರುವ ಪ್ರವಾಸೋದ್ಯಮ ಪೂರಕ ಜಿಲ್ಲೆ ಉತ್ತರ ಕನ್ನಡ. ಇಷ್ಟು ದೊಡ್ಡ ಜಿಲ್ಲೆಯಾಗಿದ್ದರೂ ಸಹ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಿಂದುಳಿದಿದ್ದು, ಹಲವೆಡೆ ಸೂಕ್ತ ಆ್ಯಂಬುಲೆನ್ಸ್ ವ್ಯವಸ್ಥೆ ಸಹ ಇಲ್ಲದ ಪರಿಸ್ಥಿತಿಯಿತ್ತು. ಆದರೆ ಇದೀಗ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ನೂತನ ಆ್ಯಂಬುಲೆನ್ಸ್ಗಳನ್ನ ನೀಡಿದ್ದು, ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ ಬಂದಂತಾಗಿದೆ.
ಒಂದೆಡೆ ವಿಶಾಲವಾದ ಕರಾವಳಿ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊಂದಿರುವ ವಿಶಿಷ್ಟ ಜಿಲ್ಲೆ ಉತ್ತರ ಕನ್ನಡ. ಭೌಗೋಳಿಕವಾಗಿಯೂ ವಿಭಿನ್ನತೆಯನ್ನ ಹೊಂದಿರುವ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಮಾತ್ರ ತೀರಾ ಹಿಂದುಳಿದಿದ್ದು, ಯಾವುದೇ ಸುಸಜ್ಜಿತ ಆಸ್ಪತ್ರೆಗಳನ್ನ ಹೊಂದಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನ ಕರೆದೊಯ್ಯಲು ಆ್ಯಂಬುಲೆನ್ಸ್ ಕೊರತೆ ಸಹ ಇದ್ದು, ಜನಸಾಮಾನ್ಯರು ಪರದಾಡಬೇಕಾಗಿತ್ತು. ಆದರೆ ಇದೀಗ ಜಿಲ್ಲೆಯ ಜನಪ್ರತಿನಿಧಿಗಳ ನೆರವಿನಿಂದ ಜಿಲ್ಲೆಗೆ ಇದ್ದ ಆ್ಯಂಬುಲೆನ್ಸ್ ಕೊರತೆ ನೀಗುವಂತಾಗಿದೆ.
ಜಿಲ್ಲೆಯ ಸಚಿವ ಹಾಗೂ ಶಾಸಕರು ಸೇರಿ ತಮ್ಮ ಅನುದಾನದಲ್ಲಿ ಜಿಲ್ಲೆಗೆ ಬರೋಬ್ಬರಿ 17 ಆ್ಯಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾ 3 ನೇ ಅಲೆಯ ಪೂರ್ವದಲ್ಲಿ ಜಿಲ್ಲೆಯ ಆರೋಗ್ಯ ಸ್ಥಿತಿಗತಿಯನ್ನ ಮೇಲ್ಮಟ್ಟಕ್ಕೆ ಏರಿಸುವ ಗುರಿಯನ್ನ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.