ಕರ್ನಾಟಕ

karnataka

ಉಕ್ರೇನ್ ಸಮಾರಂಭದ ಮನೆ ಅಲ್ಲ: ವಿದ್ಯಾರ್ಥಿ ಹೇಳಿಕೆ ಪೂರ್ವಾಗ್ರಹ ಪೀಡಿತ ಎಂದ ಸಚಿವ ಕೋಟ

By

Published : Mar 5, 2022, 10:37 PM IST

ನಾವು ಭಾರತದಲ್ಲಿದ್ದವರಾಗಿದ್ದರೆ ನಮಗೆ ರಕ್ಷಣೆ ಸಿಗುತ್ತಿತ್ತು. ನಾವ್ಯಾಕೆ ಭಾರತದಲ್ಲಿ ಹುಟ್ಟಿಲ್ಲ ಎಂಬ ನೋವಿದೆ ಎಂಬುದನ್ನ ಇತರೆ ದೇಶಗಳ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಯಾರೋ ಒಬ್ಬ ವಿದ್ಯಾರ್ಥಿ ಏನೋ ಮಾತನಾಡಿದ್ದಾನೆಂದು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಾರವಾರ: ಯುದ್ಧಪಿಡಿತ ಉಕ್ರೇನ್​​​ನಲ್ಲಿ ಸಿಲುಕಿದವರನ್ನು ತಾಯ್ನಾಡಿಗೆ ಕರೆತರುವಲ್ಲಿ ಭಾರತ ಮೊದಲಿಗನಾಗಿದ್ದು, ಇತರೆ ದೇಶಗಳು ಇದೀಗ ನಮ್ಮ ದೇಶವನ್ನು ಹೊಗಳುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಉಕ್ರೇನ್‌ನ ಖಾರ್ಕೀವ್‌ನಿಂದ ಹೊರಬರಲು ಭಾರತೀಯ ರಾಯಭಾರಿಗಳು ಸಹಾಯ ಮಾಡಿಲ್ಲ ಎಂದು ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಯೋರ್ವ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಉಕ್ರೇನ್ ಅನ್ನೋದು ಸಮಾರಂಭದ ಮನೆಯಲ್ಲ. ಅದು ಯುದ್ಧಭೂಮಿ. ಎಲ್ಲಿ ಯಾವಾಗ ಬಾಂಬ್ ಬೀಳುತ್ತೆ ಅನ್ನೋದು ಗೊತ್ತಿಲ್ಲ. ಅದು ಬಡಿದಾಡುವ ನೆಲ. ಆ ನೆಲದಿಂದ ತೆಗೆದುಕೊಂಡು ಬಂದ ಯಾವುದೋ ಒಬ್ಬ ವಿದ್ಯಾರ್ಥಿ ‌ಯಾವುದೋ ಪೂರ್ವಗ್ರಹದಿಂದ ಏನೋ ಹೇಳಿದ್ದಾನೆ ಅನ್ನೋದನ್ನು ಬಿಟ್ಟರೆ, ಇವತ್ತು ಪ್ರಪಂಚದ ಎಲ್ಲಾ ದೇಶಗಳು ಭಾರತವನ್ನು ಹೊಗಳುತ್ತಿವೆ ಎಂದು ಹೇಳಿದ್ದಾರೆ.

ನಾವು ಭಾರತದಲ್ಲಿದ್ದವರಾಗಿದ್ದರೆ ನಮಗೆ ರಕ್ಷಣೆ ಸಿಗುತ್ತಿತ್ತು. ನಾವ್ಯಾಕೆ ಭಾರತದಲ್ಲಿ ಹುಟ್ಟಿಲ್ಲ ಎಂಬ ನೋವಿದೆ ಎಂಬುದನ್ನ ಇತರೆ ದೇಶಗಳ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಯಾರೋ ಒಬ್ಬ ವಿದ್ಯಾರ್ಥಿ ಏನೋ ಮಾತನಾಡಿದ್ದಾನೆಂದು ನಾನು ಅದರ ಬಗ್ಗೆ ಪ್ರತಿಕ್ರಿಯಿಸಲ್ಲ. ಇಡೀ ಪ್ರಪಂಚದಲ್ಲಿ ಪ್ರಥಮವಾಗಿ ಕಾರ್ಯಾಚರಣೆಗಿಳಿದು ತನ್ನ ದೇಶದವರನ್ನ ರಕ್ಷಣೆ ಮಾಡಿದೆ ಎಂದಿದ್ದರೆ ಅದು ಭಾರತ, ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದರು.

ಹಾವೇರಿಯ ನವೀನ್ ಮೃತದೇಹ ತರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸ್ವಾಭಾವಿಕವಾಗಿ ಇಂಥ ಅನಾಹುತಗಳಾದಾಗ ಅಲ್ಲಿನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ವಿಳಂಬಗಳಾಗುತ್ತವೆ. ಆದರೂ ಆತನ ಮೃತದೇಹ ತರಬೇಕು ಎಂಬುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಇಚ್ಛೆಯಾಗಿದೆ, ತರುತ್ತೇವೆ. ಮೃತ ನವೀನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಬಿಡುಗಡೆಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು‌ ಘೋಷಣೆ ಮಾಡಿದ್ದಾರೆ ಎಂದರು.

ಇಡೀ ಪ್ರಪಂಚದಲ್ಲಿ ಉಕ್ರೇನ್​​ನಲ್ಲಿದ್ದವರನ್ನು ಮೊದಲು ತಾಯ್ನಾಡಿಗೆ ಕರೆತಂದ ಯಾವುದಾದರೂ ಒಂದು ದೇಶವಿದ್ದರೆ ಅದು ಭಾರತ. ಇದನ್ನು ಪ್ರಪಂಚವೇ ಹೇಳುತ್ತಿದೆ. ಯಾರು ನಮ್ಮನ್ನು ದ್ವೇಷಿಸುತ್ತಿದ್ದರೋ, ಅಂಥ ಪಾಕಿಸ್ತಾನದ ವಿದ್ಯಾರ್ಥಿಗಳು ತಾವು ಭಾರತೀಯರಾಗಿದ್ದರೆ ಒಳ್ಳೆಯದಿತ್ತು ಎಂಬ ಉದ್ಘಾರ ಮಾಡಿದ್ದಾರೆ ಎಂದರು.

ಭಾರತದ ತ್ರಿವರ್ಣ ಧ್ವಜದಲ್ಲಿ ಬಂದು ಅವರು ಸುರಕ್ಷಿತವಾಗಿ ತಮ್ಮ ದೇಶ ತಲುಪಿದ್ದಾರೆ ಎಂದ ಅವರು, ಕನ್ನಡಿಗರು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುತ್ತದೆ. ನಿಖರ ಅಂಕಿ- ಅಂಶಗಳಲ್ಲಿ ಶೇ.70ರಷ್ಟು ಜನರನ್ನು ಈಗಾಗಲೇ ಕರೆತರಲಾಗಿದೆ. ಇನ್ನೂ ಸಾಕಷ್ಟು ಜನ ಅಲ್ಲಿದ್ದು, ಕೊನೆಯ ಭಾರತೀಯನನ್ನೂ ಕರೆತರುತ್ತೇವೆ ಎಂದು ಭರವಸೆ ನೀಡಿದರು.

ABOUT THE AUTHOR

...view details