ಕರ್ನಾಟಕ

karnataka

ಡೆಂಗ್ಯೂ ಜ್ವರದಿಂದ ಯುವಕ ಸಾವು ಪ್ರಕರಣ: ಮಾವಿನಕುರ್ವೆ ಬಂದರಿಗೆ ಆರೋಗ್ಯ ಇಲಾಖೆ ತಂಡ ಭೇಟಿ

By ETV Bharat Karnataka Team

Published : Oct 24, 2023, 5:01 PM IST

Updated : Oct 24, 2023, 5:08 PM IST

ಮಾವಿನಕುರ್ವೆ ಬಂದರು ಸುತ್ತಮುತ್ತ ಪರಿಶೀಲನೆ ನಡೆಸಿದ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ಡೆಂಗ್ಯೂ ತಡೆಗಟ್ಟುವಿಕೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದರು.

health-department-team-visit-to-mavinakurve-port-due-to-dengue-in-bhatkal
ಡೆಂಗ್ಯೂ ಜ್ವರದಿಂದ ಯುವಕ ಸಾವು ಪ್ರಕರಣ: ಮಾವಿನಕುರ್ವೆ ಬಂದರಿಗೆ ಆರೋಗ್ಯ ಇಲಾಖೆ ತಂಡ ಭೇಟಿ

ಮಲೇರಿಯಾ ನಿಯಂತ್ರಣಾಧಿಕಾರಿ ರಮೇಶ್​ ರಾವ್ ಪ್ರತಿಕ್ರಿಯೆ

ಭಟ್ಕಳ(ಉತ್ತರ ಕನ್ನಡ): ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದಿಂದ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ರಮೇಶ್​ ರಾವ್ (ಡಿಎಂಒ) ಬಂದರು ಸುತ್ತಮುತ್ತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಮೊದಲು ಭಟ್ಕಳ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಮತ್ತು ಬಲಪಡಿಸಲು ಸಿಬ್ಬಂದಿಗೆ ತಿಳಿಸಿದರು. ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 1172 ಮನೆಗಳು ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ 3 ದಿನಗಳೊಳಗಾಗಿ ಸರ್ವೇ ಕಾರ್ಯ ಮುಗಿಸಬೇಕು. ಮನೆಗಳಿಗೆ ತೆರಳಿ ವೇಳೆ ಸ್ವಚ್ಛತೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ನಿಂತ ಕೊಳಚೆ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸುವಂತೆ ತಿಳಿಸಿದರು.

ಬಳಿಕ ಸಭೆ ಮುಗಿಸಿ ನೇರವಾಗಿ ತಾಲೂಕಿನ ಆರೋಗ್ಯ ಇಲಾಖೆ ತಂಡದೊಂದಿಗೆ ಮಾವಿನ ಕುರ್ವೆ ದಕ್ಕೆಗೆ ತೆರಳಿ ಸಣ್ಣ ಸಣ್ಣ ಚರಂಡಿಯಲ್ಲಿ ನಿಂತ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸಿದರು. ಬಂದರ್ ಬೀಚ್​ಗೆ ತೆರಳುವ ರಸ್ತೆ ಪಕ್ಕದಲ್ಲಿ ಕುಡಿಯಲು ಯೋಗ್ಯವಲ್ಲದ ಬಾವಿಯ ಪಕ್ಕದಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಸ್ಥಳೀಯ ಪಂಚಾಯಿತಿಗೆ ಬಾವಿಯನ್ನು ಮುಚ್ಚುವಂತೆ ಪತ್ರ ಬರೆಯಲು ಹೇಳಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ಭಟ್ಕಳದಲ್ಲಿ ಕಳೆದ ಹಲವಾರು ದಿನಗಳಿಂದ ನಗರ ಪ್ರದೇಶಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವುಗಳನ್ನೂ ಮಾಡಲಾಗಿದೆ. ಸದ್ಯ ಶಂಕಿತರ ಪ್ರಕರಣದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು, ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಗ್ಯ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರನ್ನು ಸೇರಿಸಿಕೊಂಡು ಶಂಕಿತ ಪ್ರಕರಣ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮುಡಿಸುತ್ತಿದ್ದೇವೆ" ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ಸವಿತಾ ಕಾಮತ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರು ಇದ್ದರು.

ಇಬ್ಬರು ಯುವಕರು ಸಮುದ್ರಪಾಲು:ಪ್ರವಾಸಕ್ಕೆ ಆಗಮಿಸಿದ್ದ ಎರಡು ಪ್ರವಾಸಿಗರ ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿರುವ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಇಬ್ಬರು ಕೂಡ ಬಾಗಲಕೋಟೆ ಜಿಲ್ಲೆಯವರೆಂದು ತಿಳಿದುಬಂದಿದೆ. ಅವರಲ್ಲಿ ಓರ್ವ ಮಂಜುನಾಥ ರಮೇಶ ಹಡಪದ (25) ಬಾಗಲಕೋಟೆ ಜಿಲ್ಲೆಯ ನೀರ ಬೂದಿಹಾಳನವನಾಗಿದ್ದು, ಹಾಲಿ ನವನಗರದಲ್ಲಿ ವಾಸವಾಗಿದ್ದನು. ಈತ ತನ್ನ ಕುಟುಂಬದವರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದು ಕುಟುಂಬ ಸದಸ್ಯರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಗಳ ರಭಸಕ್ಕೆ ಮುಳುಗಿ ಸಾವನ್ನಪ್ಪಿದ್ದಾರೆ.

ಇನ್ನೋರ್ವನನ್ನು ಬಾಗಲಕೋಟೆ ಜಿಲ್ಲೆಯ ಲೋಕಾಪುರ ನಿವಾಸಿ ಕ್ರಷ್ಣಪ್ಪ ಕರಿಯಪ್ಪ ಹರಕಂಗಿ (18) ಎಂದು ಗುರುತಿಸಲಾಗಿದೆ. ಈತ ತನ್ನ ಧಾರವಾಡ ಮೂಲದ ನಾಲ್ಕು ಜನ ಸ್ನೇಹಿತರೊಂದಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದು, ಮೊದಲು ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಆಟವಾಡುತ್ತಿದ್ದವರು ನಂತರ ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮುರುಡೇಶ್ವರ ಪೊಲೀಸ್​ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರವಾರ: 100 ಮೆಟ್ರಿಕ್ ​ಟನ್​ಗೂ ಅಧಿಕ ಅಕ್ರಮ ಮರಳು ವಶಕ್ಕೆ

Last Updated : Oct 24, 2023, 5:08 PM IST

ABOUT THE AUTHOR

...view details