ಕರ್ನಾಟಕ

karnataka

ಕೊಳೆ ರೋಗದ ಆತಂಕದಲ್ಲಿ ಅಡಿಕೆ ಬೆಳಗಾರರು: ಬಾಧೆಗೆ ಮೊದಲೇ ಔಷಧಿ ಸಿಂಪಡಣೆ

By

Published : Jun 13, 2020, 5:52 PM IST

ಬಹು ವಾರ್ಷಿಕ ಬೆಳೆಯಾಗಿರುವ ಅಡಿಕೆಗೆ ಕೊಳೆ ರೋಗದ ಸಮಸ್ಯೆ ಬೆಳೆಗಾರರನ್ನು ನಿದ್ದೆಗೆಡಿಸುವಂತೆ ಮಾಡುತ್ತದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಬಂದ ಕೊಳೆ ರೋಗಕ್ಕೆ ರೈತರು ತತ್ತರಿಸಿದ್ದು, ಈ ಬಾರಿ ಬೆಳೆ ಉಳಿಸಿಕೊಳ್ಳುವ ಹಂಬಲದಿಂದ ಅಡಿಕೆ ಮರಕ್ಕೆ ಔಷಧಿ ಸಿಂಪಡಣೆ ತರಾತುರಿಯಲ್ಲಿದ್ದಾರೆ.

Bud Rot in in Areca Plants
ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಿರುವುದು

ಶಿರಸಿ(ಉತ್ತರ ಕನ್ನಡ): ಕಳೆದ ವರ್ಷ ಕೊಳೆ ರೋಗದಿಂದ ಭಾಗಶಃ ಬೆಳೆ ನಾಶವಾಗಿ ತತ್ತರಿಸಿದ್ದ ಮಲೆನಾಡಿನ ಅಡಿಕೆ ಬೆಳೆಗಾರರು, ಮುಂಜಾಗ್ರತಾ ಕ್ರಮವಾಗಿ ಔಷಧಿ ಸಿಂಪಡಣೆಗೆ ಕೊನೆಗೌಡರ ಮನೆ ಬಾಗಿಲಿಗೆ ಅಲೆದಾಡುತ್ತಿದ್ದು, ತುತ್ತಾ ಸುಣ್ಣ, ಬಯೋಪೈಟ್ ಸಿಂಪಡಣೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯುವ ಭಾಗವಾದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನಲ್ಲಿ ಹಿಂದಿನ ವರ್ಷದ ಮುಸಲಧಾರೆಯ ಅಬ್ಬರಕ್ಕೆ ಅರ್ಧಕ್ಕಿಂತ ಅಧಿಕ ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿ, ಸಣ್ಣ ಹಾಗೂ ಅತಿ ಸಣ್ಣ ರೈತರು ಕೊಳೆ ರೋಗದಿಂದ ಬೆಳೆ ಉಳಿಸಿಕೊಳ್ಳಲಾಗದೇ ಪರಿತಪಿಸುವಂತಾಗಿತ್ತು. ಆದರೆ ಈ ಬಾರಿ ಮೊದಲೇ ಔಷಧಿ ಸಿಂಪಡಿಸಲು ಮುಂದಾಗಿದ್ದು, ಮರವೇರಿ ಔಷಧಿ ಸಿಂಪಡಿಸುವ ಕೊನೆಗೌಡರ ಹುಡುಕಾಟದಲ್ಲಿ ಅಡಿಕೆ ಬೆಳೆಗಾರರು ತೊಡಗಿದ್ದಾರೆ.

ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಿರುವುದು

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 32 ಸಾವಿರ ಹೆಕ್ಟೇರ್​​ಗಳಷ್ಟು ಅಡಿಕೆ ಪ್ರದೇಶವಿದ್ದು, ಶಿರಸಿ ಉಪ ವಿಭಾಗ ವ್ಯಾಪ್ತಿಯ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನಲ್ಲಿ 18,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಕೃಷಿ ಮಾಡಲಾಗುತ್ತಿದೆ. ಬಹುತೇಕ ಕೃಷಿಕರಿಗೆ ಅಡಿಕೆಯೇ ವಾಣಿಜ್ಯ ಬೆಳೆಯಾಗಿದ್ದು, ಅದನ್ನೇ ನಂಬಿದವರ ಜೀವನ ನಿರ್ವಹಣೆಯ ಮೇಲೆ ಕಳೆದ ಬಾರಿ ಕೊಳೆ ರೋಗ ಬರೆ ಎಳೆದಿತ್ತು.

ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಕೊಳೆ ರೋಗವನ್ನು ನಿಯಂತ್ರಿಸಲು ತೋಟಗಾರಿಕಾ ಇಲಾಖೆಯವರು ಔಷಧ ಸಿಂಪಡಣಾ ಸಲಹೆಗಳನ್ನು ನೀಡಿದ್ದು, ಔಷಧಗಳಿಗೆ ಪ್ರತಿ ವರ್ಷದಂತೆ ಸಹಾಯಧನವನ್ನೂ ಸಹ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details