ಕರ್ನಾಟಕ

karnataka

ಕಾರವಾರ: ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ, ಆರೋಪಿ ವಶಕ್ಕೆ

By

Published : Aug 16, 2023, 10:51 PM IST

ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್‌ ಮೇಲೆ ಯುವಕ ಹಲ್ಲೆ ಮಾಡಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ.

Assaulted police constable Devappa Hosamani
ಹಲ್ಲೆಗೊಳಗಾದ ಪೊಲೀಸ್ ಪೇದೆ ದೇವಪ್ಪ ಹೊಸಮನಿ

ಕಾರವಾರ: ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್‌ ಮೇಲೆ ಯುವಕ ಹಲ್ಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದೆ. ದೇವಪ್ಪ ಹೊಸಮನಿ ಎಂಬ ಪೊಲೀಸ್ ಕಾನ್ಸ್‌ಟೇಬಲ್‌ ಹಲ್ಲೆಗೊಳಗಾಗಿದ್ದಾರೆ.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಮಂಗಳವಾರ ಸಂಜೆ ಸಂಗೊಳ್ಳಿ ರಾಯಣ್ಣ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ನಗರದ ಕೆ.ಸಿ.ವೃತ್ತದಿಂದ ಲಿಂಕ್ ರಸ್ತೆಗೆ ಬರುತ್ತಿದ್ದಂತೆ ರಸ್ತೆಯಲ್ಲಿ ಭದ್ರತೆ ಒದಗಿಸುತ್ತಿದ್ದ ದೇವಪ್ಪ ಹೊಸಮನಿ ಎಂಬವರ ಮೇಲೆ ಯುವಕ ಕೈಯಲ್ಲಿದ್ದ ಖಡ್ಗದಿಂದ ಹಲ್ಲೆ ಮಾಡಿದ್ದಾನೆ. ದೇವಪ್ಪ ಹೊಸಮನಿ ತಲೆಗೆ ಗಾಯವಾಗಿದ್ದು ತೀವ್ರ ರಕ್ತಸ್ರಾವವಾಗಿದೆ.

ಕೂಡಲೇ ಗಾಯಾಳುವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಘಟನೆಯ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಲ್ಲೆಗೈದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಸ್ಥಳೀಯ ಸಾಯಿ ನಗರದ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದ್ದು ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಭೀಮಣ್ಣ.ಎಂ.ಸೂರಿ, ಪಿಎಸ್​​ಐಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ.ಎಸ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ.

ಅಪಘಾತ- ಬೈಕ್ ಸವಾರ ಸ್ಥಳದಲ್ಲೇ ಸಾವು:ನಿಯಂತ್ರಣ ತಪ್ಪಿ ಬೈಕ್ ಸೇತುವೆಗೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕುಮಟಾ ತಾಲೂಕಿನ ದೀವಗಿಯ ಅಘನಾಶಿನಿ ಸೇತುವೆ ಬಳಿ ನಡೆದಿದೆ. ನಿತ್ಯಾ ರಮೇಶ ನಾಯ್ಕ (28) ಮೃತರು. ಇವರು ಸಮೀಪದ ತಂಡ್ರಕುಳಿಯಲ್ಲಿ ಗ್ಯಾರೇಜ್ ಕೆಲಸ ಮಾಡುತ್ತಿದ್ದರು. ಕುಮಟಾದಿಂದ ತಂಡ್ರಕುಳಿಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸೇತುವೆಯ ತಡೆಗೊಡೆಗೆ ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹೆಸ್ಕಾಂ ನೌಕರನ ಮೇಲೆ ಹಲ್ಲೆ- ಆರೋಪಿ ಬಂಧನ: ಹುಬ್ಬಳ್ಳಿ:ಕರೆಂಟ್ ಬಿಲ್ ಕೊಡಲು ತೆರಳಿದ್ದ ಹೆಸ್ಕಾಂ ನೌಕರನ ಮೇಲೆ ಮನಬಂದಂತೆ ಹಲ್ಲೆ ಮಾಡಿರುವ ಘಟನೆ ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕರೆಂಟ್ ಬಿಲ್ ಜಾಸ್ತಿ ಬಂದಿದೆ ಎಂದು ಆರೋಪಿಸಿ ಇಲ್ಲಿನ ನಿವಾಸಿ ಅಬ್ದುಲ್ ರೆಹಮಾನ್​ ಎಂಬಾತ ಹೆಸ್ಕಾಂ ಸಿಬ್ಬಂದಿ ಮಲ್ಲಯ್ಯ ಗಣಾಚಾರಿ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಮಲ್ಲಯ್ಯ ಅವರ ತಲೆಗೆ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂಓದಿ:ಕೋಲಾರ ಹೆದ್ದಾರಿಯಲ್ಲಿ ವ್ಹೀಲಿಂಗ್​ ಹುಚ್ಚಾಟಕ್ಕೆ ಯುವತಿ ಬಲಿ; ಜೊತೆಗಿದ್ದ ಸ್ನೇಹಿತರು ಪರಾರಿ

ABOUT THE AUTHOR

...view details