ಕರ್ನಾಟಕ

karnataka

ಸಿಆರ್​ಝೆಡ್​ ನಿಯಮ‌ ಉಲ್ಲಂಘನೆ: ಕಾರವಾರ ಕಡಲ ತೀರದ ಪ್ರವಾಸಿ ತಾಣಗಳ ನೆಲಸಮ ಆತಂಕ

By

Published : Mar 14, 2023, 2:10 PM IST

ಸಿಆರ್​ಝೆಡ್ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಲಾಗಿದೆ ಎಂದು ಪ್ರವಾಸೋದ್ಯಮ ಕಾಮಗಾರಿಗಳನ್ನು ಕೆಡವಲು‌ ನ್ಯಾಯಾಲಯ ಆದೇಶ ನೀಡಿದೆ.

Rock Garden
ರಾಕ್ ಗಾರ್ಡನ್

ಕಾರವಾರ (ಉತ್ತರ ಕನ್ನಡ):ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿತ್ತು. ಆದರೀಗ ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್) ಆದೇಶ ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಮಾಡಿರುವ ಕಾಮಗಾರಿಗಳನ್ನು ಕೆಡವಲು‌ ನ್ಯಾಯಾಲಯ ಆದೇಶ ನೀಡಿದೆ. ಇದರಿಂದ ಪ್ರವಾಸಿ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಆತಂಕವಿದೆ.

ಕಡಲತೀರ ವಿಶಾಲವಾಗಿದ್ದರೂ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವ ಕಾರ್ಯಗಳನ್ನೂ ಮಾಡಿಲ್ಲ ಎನ್ನುವ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಹಲವು ವರ್ಷಗಳ ಹಿಂದೆ ಪ್ರವಾಸಿಗರನ್ನು ಸೆಳೆಯರು ಕಾರವಾರದ ಕಡಲತೀರದಲ್ಲಿ ಪುಟಾಣಿ ರೈಲು, ಹೋಟೆಲ್​ಗಳಿದ್ದವು. ನಂತರದ ದಿನದಲ್ಲಿ ಎಲ್ಲವೂ ಹಾಳಾಗಿತ್ತು. ಮತ್ತೆ ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುವಲ್ಲಿ ಸರ್ಕಾರ ಕೂಡ ಆಸಕ್ತಿ ತೋರಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು.

ಈ ನಿಟ್ಟಿನಲ್ಲಿ ಅಂದಿನ ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ, ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಎಸ್.ಎಸ್.ನಕುಲ್ ಅವರು ಕಾರವಾರದ ಪ್ರವಾಸೋದ್ಯಮ ಬೆಳವಣಿಗೆಗೆ ಕಡಲ ತೀರದಲ್ಲಿ ಫುಡ್ ಕೋರ್ಟ್, ರೆಸ್ಟೋರೆಂಟ್, ರಾಕ್ ಗಾರ್ಡನ್ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಿದ್ದರು. ಟೆಂಡರ್ ಮೂಲಕವೇ ಈ ಚಟುವಟಿಕೆಗೆ ಅವಕಾಶ ನೀಡಿದ್ದು ಇಂದು ಸಾವಿರಾರು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದೆ. ಆದರೆ ಈಗ ಸ್ಥಳೀಯರು ಕಡಲತೀರದಲ್ಲಿ ಸಿ.ಆರ್.ಜೆಡ್ ನಿಯಮ ಉಲ್ಲಂಘಿಸಿ ಕಾಮಗಾರಿ ಮಾಡಲಾಗಿದೆ ಎಂದು ರಾಷ್ಟ್ರೀಯ ಹಸಿರು ಪೀಠದ ಮೊರೆ ಹೋಗಿದ್ದು, ಅಲ್ಲಿಂದ ರಾಜ್ಯ ಸಿಆರ್​ಝೆಡ್ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎನ್ನಲಾಗಿದೆ.

ರಾಕ್ ಗಾರ್ಡನ್ ತೆರವುಗೊಳಿಸಿದರೆ ಪ್ರವಾಸೋದ್ಯಮ‌ಕ್ಕೆ ಹಿನ್ನಡೆ:ಸದ್ಯ ಸ್ಥಳೀಯ ಸಿಆರ್​ಝೆಡ್ ನವರು ಜಿಲ್ಲಾಡಳಿತಕ್ಕೆ ಕಡಲತೀರದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು ತೆರವು ಮಾಡುವಂತೆ ತಿಳಿಸಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಾಗರಾಜ ಹರಪನಹಳ್ಳಿ, ಕಾರವಾರದಲ್ಲಿ ರಾಕ್ ಗಾರ್ಡನ್ ಸೇರಿದಂತೆ ಇತರೆ ಪ್ರವಾಸಿ ತಾಣಗಳನ್ನು ಸಿಆರ್‌ಜೆಡ್ ನಿಯಮ‌ ಉಲ್ಲಂಘಿಸಿ ನಿರ್ಮಿಸಲಾಗುತ್ತಿದೆ. ಈ ಕುರಿತು ಅರಿವಿದ್ದರೂ ಕೂಡ ಆದೇಶವನ್ನು ಕತ್ತಲಲ್ಲಿಟ್ಟು ಅಧಿಕಾರಿಗಳು ಹಾಗೂ ಕಡಲತೀರ ಅಭಿವೃದ್ಧಿ ಸಮಿತಿ ಕಾಮಗಾರಿ ನಡೆಸಿತ್ತು. ಅಲ್ಲದೇ ರಾಕ್ ಗಾರ್ಡನ್ ಆದಾಯ ಯಾವುದೋ ಕಂಪನಿಗೆ ನೀಡಿದ್ದರಿಂದ ಸರ್ಕಾರಕ್ಕೆ ಇದರ ಲಾಭ ಸಿಗದಂತಾಗಿದೆ. ರಾಕ್ ಗಾರ್ಡನ್ ತೆರವುಗೊಳಿಸಿದರೆ ಪ್ರವಾಸೋದ್ಯಮ‌ ಚಟುವಟಿಕೆಗೂ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಕಾರವಾರದ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಮುಖವಾಗಿ ರಾಕ್ ಗಾರ್ಡನ್ ಫುಡ್ ಕೋರ್ಟ್, ರೆಸ್ಟೋರೆಂಟ್‌ಗಳು ಸಹಕಾರಿಯಾಗಿದ್ದವು. ಇದೀಗ ಈ ಕಾಮಗಾರಿಗಳ ಮೇಲೆ ಸಿ.ಆರ್.ಜೆಡ್ ಕರಿನೆರಳು ಬಿದ್ದಿರುವುದು ಒಂದೊಮ್ಮೆ ಈ ಕಾಮಗಾರಿ ತೆರವು ಮಾಡಿದರೆ ಕಾರವಾರದ ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಸಿಆರ್‌ಜೆಡ್ ತನ್ನ ನಿಯಮಗಳನ್ನು ಪ್ರವಾಸೋದ್ಯಮ ಅಭಿವೃದ್ದಿಗಾದರು ಸಡಿಲಗೊಳಿಸಬೇಕು. ಕಡಲ ತೀರದಲ್ಲಿ ಇರುವ ಪ್ರವಾಸಿ ಚಟುವಟಿಕೆಗಳನ್ನೇ ನಂಬಿ ಹಲವರು ಉದ್ಯೋಗ ಕಂಡುಕೊಂಡಿದ್ದು ತೆರವು ಮಾಡಿದರೆ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಜಿಲ್ಲಾಡಳಿತ, ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಕೆಲವರ ಆಗ್ರಹ.

ನ್ಯಾಯಾಲಯಕ್ಕೆ ಮನವರಿಕೆ:ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ, ರಾಷ್ಟ್ರೀಯ ಹಸಿರು ಪೀಠಕ್ಕೆ ಕಾಲಾವಕಾಶ ಕೇಳಿದ್ದೇವೆ. ಇದೀಗ ಸಿಆರ್​ಝೆಡ್ ಸಡಲಿಕೆಯನ್ನು 100 ಮೀ ನಿಂದ‌ 50 ಮೀ ಇಳಿಕೆ ಮಾಡಿ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿಯನ್ನು ತಿಳಿಸಲಿದ್ದು, ಈ ಕಾಮಗಾರಿಗಳು ಅದರೊಳಗೆ ಬರುವುದರ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಲಾಗುವುದು. ಒಂದೊಮ್ಮೆ ತೆರವು ಮಾಡಲೇ ಬೇಕು ಎಂದಾದರೆ ಮಾಡುತ್ತೇವೆ ಎಂದು ತಿಳಿಸಿದರು.

ಕಡಲತೀರದಲ್ಲಿ ಖಾಸಗಿ ಹೋಟೆಲ್​ಗಳ ನಿರ್ಮಾಣಕ್ಕೆ ಹಾಗೂ ರಾಕ್ ಗಾರ್ಡನ್ ನಿರ್ಮಾಣಕ್ಕೆ ಅವಕಾಶ ಕೊಡಲಾಗಿದೆ. ಈ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡಲಾಗಿದೆ. ಹಲವರು ಇದರಿಂದ ಉದ್ಯೋಗ ಕಂಡುಕೊಂಡಿದ್ದಾರೆ. ಆದರೆ ಸಿಆರ್​ಝೆಡ್ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಲಾಗಿದೆ ಎಂದು ನಿರ್ಮಿಸಿದ ನಂತರ ಈಗ ಕೆಡವಲು ಮುಂದಾದರೆ ಈ ಹಾನಿಗೆ ಪರಿಹಾರ ಕೊಡುವವರು ಯಾರು? ಜಿಲ್ಲಾಡಳಿತವೇ ಅವಾಂತರಕ್ಕೆ ನೇರ ಹೊಣೆಯಾಗಲಿದೆಯೇ? ಎನ್ನುವ ಚರ್ಚೆ ಸಹ ಪ್ರಾರಂಭವಾಗಿದೆ. ಜೊತೆಗೆ, ಜಿಲ್ಲಾಡಳಿತ ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಲಿದೆಯೇ ಅನ್ನುವುದನ್ನು ಕಾದು ನೋಡಬೇಕಾಗಿದೆ.

ಇದನ್ನೂ ಓದಿ:ಕರಾವಳಿಯಲ್ಲಿ ಕಳೆಗಟ್ಟಿದ ಸುಗ್ಗಿ ಕುಣಿತ: ಗುಮ್ಮಟೆ ಪಾಂಗಿನ ಸದ್ದಿಗೆ ಸಂಪ್ರದಾಯಿಕ ನೃತ್ಯ

ABOUT THE AUTHOR

...view details