ಕರ್ನಾಟಕ

karnataka

ಅಕ್ರಮ ನಿರ್ಮಾಣದ ನೆಪದಲ್ಲಿ ಬಡ ಮೀನುಗಾರರ ತಾತ್ಕಾಲಿಕ ಶೆಡ್ ತೆರವು, ಸ್ಥಳೀಯರ ಆಕ್ರೋಶ

By

Published : Aug 26, 2022, 10:50 PM IST

ಬಡ ಮೀನುಗಾರರ ತಾತ್ಕಾಲಿಕ ಶೆಡ್ ತೆರವು
ಬಡ ಮೀನುಗಾರರ ತಾತ್ಕಾಲಿಕ ಶೆಡ್ ತೆರವು ()

ಉಡುಪಿ ಜಿಲ್ಲೆಗೆ ಜನರನ್ನು ಸ್ವಾಗತಿಸುವ ಕಿನ್ನಿಮೂಲ್ಕಿ ಬಳಿಯ ಸುಂದರ ಸ್ವಾಗತ ಗೋಪುರ ಪಕ್ಕದಲ್ಲೇ ಕಳೆದ ನಾಲ್ಕು ದಶಕಗಳಿಂದ ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದಾರೆ.

ಉಡುಪಿ: ಬಡ ಮೀನುಗಾರ ಮಹಿಳೆಯರಿಗೆ, ಮಳೆಯಿಂದ ರಕ್ಷಣೆ ನೀಡುತ್ತಿದ್ದ ತಾತ್ಕಾಲಿಕ ಶೆಡ್​ ನಿರ್ಮಾಣ ಹಂತದಲ್ಲಿರುವಾಗಲೇ ಉಡುಪಿ ನಗರಸಭೆ ಕೆಡವಿ ಹಾಕಿದೆ. ನಗರಾಡಳಿತದ ಈ ಅಮಾನವೀಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಗೆ ಜನರನ್ನು ಸ್ವಾಗತಿಸುವ ಕಿನ್ನಿಮೂಲ್ಕಿ ಬಳಿಯ ಸುಂದರ ಸ್ವಾಗತ ಗೋಪುರ ಪಕ್ಕದಲ್ಲೇ ಕಳೆದ ನಾಲ್ಕು ದಶಕಗಳಿಂದ ಬಡ ಮೀನುಗಾರ ಮಹಿಳೆಯರು ಮೀನು ಮಾರಾಟ ನಡೆಸುತ್ತಿದ್ದಾರೆ. ಮೀನಿನ ದರ ಒಂದು ರೂಪಾಯಿ ಇದ್ದ ಕಾಲದಿಂದಲೂ ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಳೆಯಿಂದ ರಕ್ಷಣೆ ನೀಡಲು ಒಂದು ಶೆಡ್ ನಿರ್ಮಿಸಿ ಕೊಡಿ ಎಂದು ಕಳೆದ ಹಲವಾರು ದಶಕಗಳಿಂದ ಬೇಡಿಕೆ ಇಟ್ಟು ಸೋತಿದ್ದಾರೆ.

ಇದೀಗ ಸ್ಥಳೀಯ ನಗರಸಭಾ ಸದಸ್ಯೆ ತನಗೆ ಬರುವ ಗೌರವ ಧನದ ಹಣದಲ್ಲಿ ಒಂದು ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಕಳೆದ ಎರಡು ಮೂರು ದಿನಗಳಿಂದ ಈ ಪುಟ್ಟ ಶೆಡ್ ನಿರ್ಮಿಸಲಾಗುತ್ತಿತ್ತು. ಇಂದು ಯಾವುದೇ ನೋಟಿಸ್​ ನೀಡದೆ ಉಡುಪಿ ನಗರಸಭೆ ಅಧಿಕಾರಿಗಳು ಶೆಡ್ ಕೆಡವಿ ಹಾಕಿದ್ದಾರೆ.

ಬಡ ಮೀನುಗಾರರ ತಾತ್ಕಾಲಿಕ ಶೆಡ್ ತೆರವು

ನಗರಸಭಾ ಸದಸ್ಯೆ ತೀವ್ರ ಆಕ್ರೋಶ:ಇದೊಂದು ಅಕ್ರಮ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಪಕ್ಕದಲ್ಲೇ ಶೆಡ್ ಹಾಕಲಾಗಿದೆ. ಹಾಗಾಗಿ, ನಾವು ತೆರವು ಮಾಡುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು, ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲಿನ ಕಟ್ಟಡ ಸಾಮಗ್ರಿಗಳನ್ನು ಮರುಬಳಕೆ ಮಾಡಲು ಅವಕಾಶವಿಲ್ಲದಂತೆ ಪುಡಿ ಗಟ್ಟಿದ್ದಾರೆ. ತಕ್ಷಣವೇ ಅಲ್ಲಿಗೆ ಬಂದ ಸ್ಥಳೀಯರು ಮತ್ತು ನಗರಸಭಾ ಸದಸ್ಯೆ ತೀವ್ರ ಆಕ್ರೋಶ ಹೊರಹಾಕಿದರು. ನಗರಸಭಾ ಅಧಿಕಾರಿಯ ವಾಹನವನ್ನು ತೆರಳಲು ಅವಕಾಶವಿಲ್ಲದಂತೆ ತಡೆಗಟ್ಟಿದರು.

ಗೊಂದಲದ ವಾತಾವರಣ: ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಅನೇಕ ಪ್ರತಿಷ್ಠಿತ ಮಳಿಗೆಗಳು ಅಕ್ರಮ ನಿರ್ಮಾಣ ಮಾಡಿವೆ. ಶ್ರೀಮಂತರಿಗೊಂದು, ಬಡವರಿಗೊಂದು ಕಾನೂನು ಯಾಕೆ? ಎಂದು ಸಿಡಿಮಿಡಿಕೊಂಡರು. ಇದರಿಂದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪರಿಸರದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಕಣ್ಣೀರು:ಮಲ್ಪೆ ಪೊಲೀಸರು ನಗರಸಭಾ ಅಧಿಕಾರಿಯನ್ನು ಭದ್ರತೆ ನೀಡಿ ಸ್ಥಳದಿಂದ ಕರೆದೊಯ್ದರು. ಸಂತ್ರಸ್ತ ಮೀನುಗಾರರ ಮಹಿಳೆಯರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ನಗರಸಭಾ ಸದಸ್ಯೆ ಮುಂದಾಗಿದ್ದಾರೆ. ಈ ಘಟನೆಯಿಂದ ನಗರಸಭಾ ಸದಸ್ಯೆ ಅಮೃತಾಕೃಷ್ಣಮೂರ್ತಿ ಅವರ ಪತಿ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ನೊಂದು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.

ಇದನ್ನೂ ಓದಿ:ನಮ್ ಸರ್ಕಾರದಲ್ಲಿ ಯಾವ ಕಮಿಷನ್ನೂ ಇರ್ಲಿಲ್ಲ, ಇದ್ರೆ ತನಿಖೆ ಮಾಡಿಸಲಿ: ಡಿಕೆಶಿ

ABOUT THE AUTHOR

...view details