ಕರ್ನಾಟಕ

karnataka

ಕಾಂಗ್ರೆಸ್​​ನವರು ವೋಟ್ ಬ್ಯಾಂಕ್​ನ ಗುಲಾಮ ಆಗಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ

By

Published : May 5, 2023, 10:49 PM IST

ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಮತ ಹಾಕಿದರೆ ಅಸ್ಥಿರ ಸರ್ಕಾರಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

narendra-modi-reaction-on-congress
ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಮತ ಹಾಕಿದರೆ ಅಸ್ಥಿರ ಸರ್ಕಾರಕ್ಕೆ ಕಾರಣವಾಗಲಿದೆ: ಪ್ರಧಾನಿ ಮೋದಿ

ತುಮಕೂರು:ಇಂದು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಬಿಜೆಪಿ ಅಭ್ಯರ್ಥಿಗಳ ಪರ ರೋಡ್​ ಶೋ ನಡೆಸಿ ಮತಯಾಚಿಸಿದರು. ನಂತರ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಜರಂಗ ಬಲಿ ಘೋಷಣೆ ಕೂಗಿ, ಈ ಘೋಷಣೆ ದೆಹಲಿ ತಲುಪಬೇಕು. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠಕ್ಕೆ ನಮಸ್ಕಾರ. ಕಲ್ಪತರು ನಾಡಿನ ನನ್ನ ಸಹೋದರ, ಸಹೋದರಿಯರಿಗೆ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ಹೆಲಿಪ್ಯಾಡ್​ನಿಂದ ಬರುವಾಗ ಜನ ತುಂಬಾ ಸೇರಿದ್ದರು. ರೋಡ್ ಶೋ ಪ್ಲಾನ್ ಇರಲಿಲ್ಲ ಆದರೆ ನಾನು ರೋಡ್ ಶೋ ಮಾಡಿದೆ. ಕಾಂಗ್ರೆಸ್​​ನವರಿಗೆ ಜೈ ಬಜರಂಗ ಬಲಿ ಎಂದು ಕೂಗಿದರೂ ತೊಂದರೆ ಆಗಿದೆ. ಕಾಂಗ್ರೆಸ್ ನವರು ವೋಟ್ ಬ್ಯಾಂಕ್​ನ ಗುಲಾಮ್ ಆಗಿದ್ದಾರೆ ಎಂದು ಟೀಕಿಸಿದರು.

ನನಗೆ ತುಮಕೂರಿನಲ್ಲಿ ಅಭಿವೃದ್ಧಿಯ ಕಾಮಗಾರಿಗಳಿಗೆ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿತ್ತು, ಕಳೆದ 9 ವರ್ಷಗಳಿಂದ ರೈತರಿಗೆ, ಬಡ ಜನರಿಗೆ ಎಷ್ಟು ಅಭಿವೃದ್ಧಿ ಆಗಿದೆ. ಆದರೆ ಅಷ್ಟು ಅಭಿವೃದ್ಧಿ ಕಳೆದ 70 ವರ್ಷದಲ್ಲಿ ಆಗಿಲ್ಲ. ಕಾಂಗ್ರೆಸ್ ಕರ್ನಾಟಕದ ಅಭಿವೃದ್ಧಿಯನ್ನು ಯಾವತ್ತೂ ಮಾಡಲ್ಲ. ಇನ್ನು ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಆಟ ನಡೆಯಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಮತ ಹಾಕಿದರೆ ಅದು ಅಸ್ಥಿರ ಸರ್ಕಾರಕ್ಕೆ ಕಾರಣವಾಗಲಿದೆ. ಹಾಗಾಗಿ ಒಂದೇ ಸಂಕಲ್ಪ ಮಾಡಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದ ಮೋದಿ, ಶಿವಕುಮಾರ ಶ್ರೀಗಳ ಸಾನಿಧ್ಯ ತ್ರಿವಿಧ ದಾಸೋಹ ನೆನೆದರು. ಅನ್ನ ಅಕ್ಷರ ದಾಸೋಹದಂತೆ ಕರ್ನಾಟಕ ಸರ್ಕಾರ ಕೂಡ ಅಭಿವೃದ್ಧಿ ಸಂಕಲ್ಪ ಮಾಡಿದೆ. ಬಿಜೆಪಿ ಸರ್ಕಾರದಿಂದ ಜನರ ಜೀವನ ಸುಧಾರಿಸಿದೆ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಬದುಕು ಹಸನಾಗಿದೆ ಎಂದು ಹೇಳಿದರು.

ಈ ಯೋಜನೆಯ ಲಾಭ 2.5 ಲಕ್ಷ ಕೋಟಿ ರೈತರಿಗೆ ತಲುಪಿದೆ. ಬಿಜೆಪಿ ಸರ್ಕಾರದ ಶ್ರಮದಿಂದ 9 ಕೋಟಿ ಮಹಿಳೆಯರಿಗೆ ಉಜ್ವಲ ಯೋಜನೆಯಿಂದ ಅಡುಗೆ ಅನಿಲ ಸಿಕ್ಕಿದೆ. ಇವತ್ತು ದೇಶದ ಹಳ್ಳಿಗಳಲ್ಲಿ ದವಸ ಧಾನ್ಯಗಳ ಸ್ಟೋರೇಜ್ ಸೌಲಭ್ಯ ಮಾಡಲಾಗಿದೆ. ರೈತರ ರಸಗೊಬ್ಬರ ದರ ಕಡಿಮೆ ಮಾಡಲಾಗಿದೆ. ಈಗ ಎಲ್ಲವೂ ಬದಲಾಗಿದೆ. ದೇಶದ ಹಳ್ಳಿಹಳ್ಳಿಗೂ ವಿದ್ಯುತ್ ತಲುಪಿದೆ. 2014ರ ಮುಂಚೆ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ತಲುಪಿದೆ ಎಂದು ತಿಳಿಸಿದರು.

ಈಗ ನಲ್ಲಿ ಮೂಲಕ ಶುದ್ಧ ನೀರು ಸಿಗುತ್ತದೆ, ತುಮಕೂರಿನಲ್ಲಿ ಒಂದೂವರೆ ಲಕ್ಷ ಕುಟುಂಬಕ್ಕೆ ಜಲ ಜೀವನ್ ಮಿಷನ್ ಮೂಲಕ ನೀರು ಸಿಗುತ್ತಿದೆ. ಫುಡ್ ಪಾರ್ಕ್ ಮೂಲಕ ರೈತರಿಗೆ ಅನುಕೂಲ ಆಗಿದೆ, ಉದ್ಯೋಗ ಸಿಕ್ಕಿದೆ. ಕೊಬ್ಬರಿಗೆ ಬೆಂಬಲ ಬೆಲೆ ಕೊಡಲಾಗಿದೆ, ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿಲ್ಲ. ಕಾಂಗ್ರೆಸ್, ಜೆಡಿಎಸ್​​ನವರು ಯಾವುದನ್ನೂ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬಂದರೆ ಈ ಎಲ್ಲಾ ಯೋಜನೆಗಳು ಸತ್ತುಹೋಗುತ್ತವೆ. ಡಬಲ್ ಇಂಜಿನ್ ಸರ್ಕಾರ ಬಂದರೆ ಅಭಿವೃದ್ಧಿ ಆಗುತ್ತದೆ ಎಂದರು.

ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ನಾಳೆ ಮೋದಿ ರೋಡ್ ಶೋ: 34 ರಸ್ತೆಗಳು ಬಂದ್

ABOUT THE AUTHOR

...view details