ಕರ್ನಾಟಕ

karnataka

ಬಸ್ ತಂಗುದಾಣಕ್ಕೆ ಮೀಸಲಿಟ್ಟ ಜಾಗ ಒತ್ತುವರಿ ಪ್ರಯತ್ನ ಆರೋಪ: ಹೆದ್ದಾರಿ ಪ್ರಾಧಿಕಾರದ ಮೊರೆ ಹೋದ ಗ್ರಾಮಸ್ಥರು

By ETV Bharat Karnataka Team

Published : Nov 4, 2023, 8:10 PM IST

Allegation of encroachment of space reserved for bus stand: ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡಿರುವ ಪ್ರಾಧಿಕಾರದಿಂದ ಪರಿಹಾರ ಪಡೆದಿರುವ ಶಿವರುದ್ರಯ್ಯ ಅವರು ಮತ್ತೆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಆರೋಪಿಸಿದ್ದಾರೆ.

The villagers approached the highway authority
ಹೆದ್ದಾರಿ ಪ್ರಾಧಿಕಾರದ ಮೊರೆ ಹೋದ ಗ್ರಾಮಸ್ಥರು

ಹೆದ್ದಾರಿ ಪ್ರಾಧಿಕಾರದ ಮೊರೆ ಹೋದ ಗ್ರಾಮಸ್ಥರು

ತುಮಕೂರು:ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಗಲೀಕರಣದ ಹಿನ್ನೆಲೆ ರಸ್ತೆ ಪಕ್ಕದಲ್ಲಿ ಬಸ್​ ನಿಲ್ದಾಣಕ್ಕಾಗಿ ಮೀಸಲಿಟ್ಟಿದ್ದ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೊರೆ ಹೋಗಿದ್ದಾರೆ.

"ತಾಲೂಕಿನ ಚಿಕ್ಕಳ್ಳಿ ಗ್ರಾಮದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಹಾದು ಹೋಗಿರುವಂತಹ ಜಾಗವನ್ನು ಸಹ ಪ್ರಾಧಿಕಾರದ ವತಿಯಿಂದ ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅಲ್ಲದೇ ಈ ಜಾಗಕ್ಕೆ ಪರಿಹಾರವಾಗಿ ಈಗಾಗಲೇ ಪ್ರಾಧಿಕಾರದ ವತಿಯಿಂದ ಶಿವರುದ್ರಯ್ಯ ಎಂಬುವರಿಗೆ ಪರಿಹಾರದ ಹಣವನ್ನು ಕೂಡ ಬಿಡುಗಡೆ ಮಾಡಲಾಗಿದೆ. ನಂತರ ಈ ಭೂಮಿಯನ್ನು ಬೆಳಗಾವಿ ಮೂಲದ ಶರಣಪ್ಪ ಎಂಬುವರಿಗೆ ಶಿವರುದ್ರಯ್ಯ ಮಾರಾಟ ಮಾಡಿದ್ದಾರೆ. ಅವರು ತಿವಾರಿ ಎಂಬುವರೊಂದಿಗೆ ಜಂಟಿ ವ್ಯವಹಾರದಲ್ಲಿ ಪೆಟ್ರೋಲ್ ಬಂಕ್ ಮಾಡುತ್ತಿದ್ದಾರೆ. ಆದರೆ, ಇದೀಗ ಬಸ್ ನಿಲ್ದಾಣದ ತಂಗುದಾಣದ 2.5 ಗುಂಟೆ ಜಾಗವೂ ಕೂಡ ಇದರಲ್ಲಿ ಸೇರಿದೆ ಎಂಬುದು ಬೆಳಕಿಗೆ ಬಂದಿದೆ. ಇದನ್ನು ಮರೆಮಾಚಿ ಬಸ್ ನಿಲ್ದಾಣದ ಜಾಗವನ್ನು ಶಿವರುದ್ರಯ್ಯ ಮಾರಾಟ ಮಾಡಿದ್ದಾರೆ" ಎಂದು ಸಾಮಾಜಿಕ ಹೋರಾಟಗಾರ ಜಯಣ್ಣ ಆರೋಪಿಸಿದ್ದಾರೆ.

ಬಸ್​ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನೂ ಸೇರಿಸಿಕೊಂಡು ಕನ್ವರ್ಷನ್​ಗೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಎಲ್ಲಿಯೂ ಕೂಡ ತಂಗುದಾಣದ ಜಾಗವೆಂದು ಗುರುತಿಸಿಲ್ಲ. ರಾಷ್ಟ್ರೀಯ ಹೆದ್ದಾರಿಗಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಶಿವರುದ್ರಯ್ಯ ಎಂಬುವವರಿಂದ 140 ಸ್ಕ್ವೇರ್ ಮೀಟರ್ ಜಾಗವನ್ನು ಪ್ರಾಧಿಕಾರ ಸ್ವಾಧೀನಕ್ಕೆ ತೆಗೆದುಕೊಂಡಿತ್ತು ಎಂದು ಆರೋಪಿಸಿರುವ ಗ್ರಾಮಸ್ಥರು, ಬಸ್ ನಿಲ್ದಾಣದ ಜಾಗವನ್ನು ಹಿಂದಿರುಗಿಸುವಂತೆ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಭೂ ಸ್ವಾಧೀನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಅಲ್ಲದೇ ಜಾಗವನ್ನು ಬಿಡಿಸಿಕೊಡುವ ಪ್ರಾಧಿಕಾರದ ಪ್ರಾಜೆಕ್ಟ್ ನಿರ್ದೇಶಕ ಅನೂಪ್ ಕುಮಾರ್ ಅವರಿಗೆ ಮನವಿಯನ್ನೂ ಮಾಡಲಾಗಿದೆ. ಆದರೆ ಪ್ರಾಧಿಕಾರದ ಅಧಿಕಾರಿಗಳು ಇದುವರೆಗೂ ಸ್ಥಳ ಪರಿಶೀಲನೆ ಮಾಡುವುದಾಗಲಿ ಜಾಗ ವಶಕ್ಕೆ ತೆಗೆದುಕೊಳ್ಳುವುದಾಗಲಿ ಮಾಡಿಲ್ಲ. ತಕ್ಷಣ ಅಧಿಕಾರಿಗಳು ಗಮನ ಹರಿಸಿ ಬಸ್ ನಿಲ್ದಾಣಕ್ಕೆ ಮೀಸಲಿಟ್ಟಿರುವ ಜಾಗವನ್ನು ವಶಕ್ಕೆ ತೆಗೆದುಕೊಳ್ಳಬೇಕು. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಅನುಕೂಲಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಾಧಿಕಾರ ನಿರ್ದೇಶಕರ ಸ್ಪಷ್ಟನೆ:ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತಕ್ಕೆ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ದೇಶಕ ಅನೂಪ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬಸ್ ತಂಗುದಾಣಕ್ಕಾಗಿ ಚಿಕ್ಕಳ್ಳಿ ಗ್ರಾಮದಲ್ಲಿ ಮೀಸಲಿಟ್ಟಿದ್ದ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಈಗಾಗಲೇ ಸಂಬಂಧಪಟ್ಟ ನಮ್ಮ ಇಲಾಖೆ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಲು ಸೂಚನೆ ನೀಡಲಾಗಿದೆ. ಜಾಗವನ್ನು ಯಾರೂ ಕೂಡ ಕಬಳಿಸಲು ಬಿಡುವುದಿಲ್ಲ. ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ಬಳಸಿಕೊಳ್ಳುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಶಿವರುದ್ರಯ್ಯ, ಮಧ್ಯವರ್ತಿಗಳು ಈ ರೀತಿ ಗೊಂದಲ ಸೃಷ್ಟಿಸಿ ನನಗೆ ಗೊತ್ತಿಲ್ಲದಂತೆ ಬಸ್ ತಂಗುತಾಣಕ್ಕೆ ಮೀಸಲಿಟ್ಟ ಜಾಗವನ್ನು ಸಹ ಮಾರಿಸಿಬಿಟ್ಟಿದ್ದಾರೆ. ನಾನು ಅನಕ್ಷರಸ್ತನಾಗಿದ್ದು, ಈ ಕುರಿತು ನನಗೆ ದಾಖಲೆಗಳ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಭ್ರೂಣ ಪತ್ತೆ ಸ್ಕ್ಯಾನಿಂಗ್​ ಆರೋಪ: ಆಸ್ಪತ್ರೆ ಮೇಲೆ ಎಸಿ ನೇತೃತ್ವದಲ್ಲಿ ದಿಢೀರ್ ದಾಳಿ

ABOUT THE AUTHOR

...view details