ಕರ್ನಾಟಕ

karnataka

ಮಂಗನ ಕಾಯಿಲೆ ತಡೆಗಟ್ಟಲು ಇಲಾಖೆಗಳ ನಡುವೆ ಸಮನ್ವಯ ಅತ್ಯಂತ ಅಗತ್ಯ: ಡಿಸಿ ಕೆ.ಬಿ.ಶಿವಕುಮಾರ್

By

Published : Oct 6, 2020, 7:18 PM IST

ಕಳೆದ ವರ್ಷ ಮಲೆನಾಡ ಭಾಗದಲ್ಲಿ ಮಂಗನ ಖಾಯಿಲೆ ಎಂಬ ಮಹಾಮಾರಿ ಮರಣ ಮೃದಂಗ ಬಾರಿಸಿದ್ದು, ಈ ಬಾರಿ ಜಿಲ್ಲಾದ್ಯಂತ ಈ ಕಾಯಿಲೆ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಲು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್​ ಸೂಚನೆ ನೀಡಿದ್ದಾರೆ.

Shimoga Deputy Commissione
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ: ಮಂಗನ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಈ ರೋಗ ತಡೆಯಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಖಾಯಿಲೆ ನಿಯಂತ್ರಣಕ್ಕಾಗಿ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ 5,128 ಶಂಕಿತ ಮಂಗನ ಕಾಯಿಲೆ ಪ್ರಕರಣಗಳ ಪೈಕಿ 185 ಪ್ರಕರಣಗಳಲ್ಲಿ ಕೆಎಫ್‍ಡಿ ದೃಢಪಟ್ಟಿದೆ. ಇದರಲ್ಲಿ ತೀರ್ಥಹಳ್ಳಿ ತಾಲೂಕು 147, ಸಾಗರ 37 ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿದ್ದು, ಮೃತಪಟ್ಟ ಎರಡು ಮಂಗಳಲ್ಲಿ ಪಾಸಿಟಿವ್ ದೃಢಪಟ್ಟಿದೆ. ಶೇ.79 ಪ್ರಕರಣಗಳು ತೀರ್ಥಹಳ್ಳಿ ತಾಲೂಕಿನಲ್ಲಿ ಹಾಗೂ ಶೇ.20 ಪ್ರಕರಣಗಳು ಸಾಗರ ತಾಲೂಕಿನಲ್ಲಿ ವರದಿಯಾಗಿದೆ. ಆದ್ದರಿಂದ ಈ ಬಾರಿ ಮಂಗನ ಖಾಯಿಲೆ ಹರಡದಂತೆ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮಂಗನ ಕಾಯಿಲೆ ಹರಡುವ ಸಾಧ್ಯತೆ ಇರುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಎಲ್ಲರಿಗೂ ಲಸಿಕೆ ಹಾಕಬೇಕು. ಒಟ್ಟು ಮೂರು ಡೋಸ್ ಲಸಿಕೆ ಹಾಕಲಾಗುತ್ತಿದ್ದು, ಈ ಎಲ್ಲ ಮೂರು ಡೋಸ್‍ಗಳನ್ನು ಸಹ ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕು. ಕಳೆದ ವರ್ಷ ಮೂರು ಡೋಸ್ ತೆಗೆದುಕೊಂಡ ಯಾವುದೇ ಪ್ರಕರಣಗಳಲ್ಲಿ ಸಾವು ಸಂಭವಿಸಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಪ್ರಸ್ತುತ 32,500 ಲಸಿಕೆ ಹಾಗೂ 35ಸಾವಿರ ಡಿಎಂಪಿ ತೈಲ ಲಭ್ಯವಿದ್ದು, ಅಗತ್ಯವಿರುವಷ್ಟು ಲಸಿಕೆ ಹಾಗೂ ತೈಲವನ್ನು ತರಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಾನುವಾರುಗಳಿಗೆ ಲಸಿಕೆ: ಮಂಗನ ಖಾಯಿಲೆ ಹರಡುವ ಸಾಧ್ಯತೆಗಳಿರುವ ವ್ಯಾಪ್ತಿಯ ಎಲ್ಲ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಬೇಕು. ಈಗಾಗಲೇ ಒಂದು ಹಂತದ ಲಸಿಕೆ ಹಾಕಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ಎರಡನೇ ಹಂತದ ಲಸಿಕೆ ಹಾಕಬೇಕು. ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡಬಾರದು. ಜಾನುವಾರುಗಳನ್ನು ಪ್ರತಿದಿನ ತೊಳೆಯಬೇಕು ಎಂದು ಸೂಚಿಸಿದರು.

ಪ್ರವೇಶ ನಿರ್ಬಂಧ:ಕಳೆದ ವರ್ಷ ಕೆಲವು ನಿಗದಿತ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ನವೆಂಬರ್​​ನಿಂದ ಮೇ ಅವಧಿಯಲ್ಲಿ ಅರಣ್ಯದೊಳಗೆ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿತ್ತು. ಮಂಗನ ಕಾಯಿಲೆಗೆ ಮೂರು ಲಸಿಕೆ ಪಡೆದಿರುವ ಬಗ್ಗೆ ದೃಢೀಕರಣ ಪಡೆದಿರುವವರನ್ನು ಮಾತ್ರ ಈ ಬಾರಿಯೂ ಅರಣ್ಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅರಣ್ಯ ಪ್ರದೇಶದಲ್ಲಿ ಮಂಗ ಸತ್ತಿರುವುದು ಕಂಡು ಬಂದ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಪಿಡಿಒಗೆ ಮಾಹಿತಿಯನ್ನು ನೀಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೂಲ ಸೌಕರ್ಯ ಕಲ್ಪಿಸಿ: ತಾಲೂಕು ಮಟ್ಟದಲ್ಲಿ ಸಹ ಅಂತರ್ ಇಲಾಖಾ ಸಮನ್ವಯ ಸಮಿತಿ ರಚಿಸಿ ಸಭೆ ನಡೆಸಬೇಕು. ಮಂಗನ ಖಾಯಿಲೆ ಕಾಣಿಸಿಕೊಳ್ಳುವ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಸೌಲಭ್ಯ ಸಜ್ಜುಗೊಳಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೆಎಫ್‍ಡಿ ವಾರ್ಡ್ ಸಜ್ಜುಗೊಳಿಸಬೇಕು ಎಂದು ಇದೇ ವೇಳೆ ತಿಳಿಸಿದರು.

ABOUT THE AUTHOR

...view details