ಕರ್ನಾಟಕ

karnataka

ಗ್ಯಾರಂಟಿಗಳ ಮೂಲಕ ಕಾಂಗ್ರೆಸ್​ ಜನರಿಗೆ ಮೋಸ ಮಾಡಿದೆ: ಕೆ.ಎಸ್.ಈಶ್ವರಪ್ಪ

By

Published : May 28, 2023, 7:04 PM IST

ಕಾಂಗ್ರೆಸ್​ ಪರವಾಗಿದ್ದ ಸುನಾಮಿ ಮಧ್ಯೆ ಎದೆಯೊಡ್ಡಿ ನಾವು ಗೆದ್ದು ಬಂದಿರುವುದು ವಿಶೇಷ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ
ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ

ಶಿವಮೊಗ್ಗ :ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿಗಳನ್ನು ಕೊಡುವುದಾಗಿ ಸುಳ್ಳು ಹೇಳಿ ಕಾಂಗ್ರೆಸ್‌ ಜನರಿಗೆ ಮೋಸ ಮಾಡಿದೆ. ಶಿವಮೊಗ್ಗದಲ್ಲಿ ನಾವು ಗೆಲ್ಲಲು ಜನರ ಆಶೀರ್ವಾದಕ್ಕಿಂತಲೂ ಬಿಜೆಪಿ ಕಾರ್ಯಕರ್ತರ ಶ್ರಮವನ್ನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಂದು ನಗರದ ಶಿವಪ್ಪನಾಯಕನ ಮಾರುಕಟ್ಟೆ ಬಳಿ ಇರುವ ನೂತನ ಶಾಸಕರ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್​ ಮತ್ತು ಲೋಕಸಭಾ ಚುನಾವಣೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ನಾವು ಯಾವ ಸಾಧನೆ ಮಾಡಿ ಗೆದ್ದಿದ್ದೇವೆ. ಅದೇ ನಿಟ್ಟಿನಲ್ಲಿ ಚುನವಣೆಯಲ್ಲಿ ಗೆಲ್ಲಲು ಪೂರ್ಣ ಪ್ರಮಾಣದಲ್ಲಿ ಶ್ರಮ ಹಾಕಬೇಕು ಎಂದು ಕರೆ ಕೊಟ್ಟರು.

ಕಾಂಗ್ರೆಸ್​ನವರು ಇದೀಗ ಅಧಿಕಾರದ ಅಮಲಿನಲ್ಲಿದ್ದಾರೆ. ಈ ಅಮಲನ್ನು ಲೋಕಸಭೆ ಚುನಾವಣೆಯಲ್ಲಿ ಇಳಿಸಬೇಕು. ಇತ್ತೀಚಿನ ದಿನಗಳಿಂದ ಈ ಅಮಲಿನಲ್ಲಿ ಅವರು ಅನೇಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಆರ್​ಎಸ್‍ಎಸ್ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದರು. ಆದರೆ ತಕ್ಷಣ ಸಿಎಂ ಸಿದ್ದರಾಮಯ್ಯ ಬುದ್ದಿವಂತರಾಗಿ ಆರ್​ಎಸ್‍ಎಸ್ ಬ್ಯಾನ್ ಮಾಡುವ ಯೋಚನೆ ನಮ್ಮ ಸರ್ಕಾರಕ್ಕೆ ಇಲ್ಲ ಎಂದು ಹೇಳಿದರು ಎಂದು ಕ್ರಾಂಗ್ರೆಸ್​ ವಿರುದ್ದ ಕಿಡಿಕಾರಿದರು.

ನಾವು ಚುನಾವಣೆಯಲ್ಲಿ 66 ಸೀಟ್​ ತೆಗೆದುಕೊಂಡು ಸೋತಿರಬಹುದು. ಆದರೆ ಓಟ್ ಶೇರಿಂಗ್‍ನಲ್ಲಿ ನಮ್ಮ ಮತಗಳು ಕಡಿಮೆ ಆಗಿಲ್ಲ. ಕಳೆದ ಬಾರಿ 30% ಮತಗಳನ್ನು ಪಡೆದುಕೊಂಡಿದ್ದು, ಸೋತಿದ್ದರೂ ಕೂಡ 0.6% ಹೆಚ್ಚು ಮತಗಳನ್ನು ಪಡೆದುಕೊಂಡಿದ್ದೇವೆ. ಜನರು ಯಾವುದೇ ಜಾತಿ ಯೋಚಿಸದೇ ಎಲ್ಲ ಜಾತಿ, ಧರ್ಮದವರು ರಾಷ್ಟ್ರೀಯ ವಿಚಾರಧಾರೆ ಹೊಂದಿರುವ ಬಿಜೆಪಿಗೆ ಮತ ನೀಡಿದ್ದಾರೆ. ಈ ದಿಕ್ಕಿನಲ್ಲಿ
ನಾವೆಲ್ಲ ಒಟ್ಟಾಗಿ ಮುಂಬರುವ ಚುನಾವಣೆಯಲ್ಲಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.

ನಂತರ ಮಾತನಾಡಿದ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚೆನ್ನಬಸಪ್ಪ, ಕಾರ್ಯಕರ್ತರ ಕಣ್ಣೀರು ಒರೆಸುವ ಕೆಲಸ ಆಗದೇ ಇದ್ದರೂ ಸಹ ಕಣ್ಣೀರು ಹಾಕಿಸುವ ಕೆಲಸ ಮಾಡಲ್ಲ. ಸಾವಿರಾರು ಕಾರ್ಯಕರ್ತರ ಶ್ರಮದಿಂದ ನಾನು ಶಾಸಕ ಸ್ಥಾನಕ್ಕೆ ಬಂದಿದ್ದೇನೆ. ಸಂಘಟನೆಯ ಶಕ್ತಿ ಮುಂದೆ ಬೇರೆ ಯಾವುದೇ ಶಕ್ತಿ ಬೆಳೆಯಲು ಸಾಧ್ಯವಿಲ್ಲ ಎಂಬುದನ್ನು ಶಿವಮೊಗ್ಗ ನಗರ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸಾಬೀತು ಮಾಡಿದ್ದಾರೆ. ಕಚೇರಿಗೆ ಯಾರೇ ಬಂದರೂ ಅವರ ಸಮಸ್ಯೆಗಳ ಪರಿಹಾರಕ್ಕೆ ಶ್ರಮ ಪಡುತ್ತೇನೆ. ಕಾರ್ಯಕರ್ತರ ಕಣ್ಣಲ್ಲಿ ಕಣ್ಣೀರು ಹಾಕಿಸುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ. ಸಂಘಟನೆಯ ಉದ್ದೇಶಗಳ ಈಡೇರಿಕೆಗೆ ಕೆಲಸ ಮಾಡುತ್ತೇನೆ ಎಂದರು.

ತಾಯಿ ಋಣವನ್ನು ಹೇಗೆ ತೀರಿಸಲು ಸಾಧ್ಯವಿಲ್ಲವೋ ಅದೇ ರೀತಿ ಸಂಘಟನೆಯ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಕೇಸರೀಕರಣ ಆಗಲು ಬಿಡುವುದಿಲ್ಲ ಎನ್ನುತ್ತಾರೆ. ಹಾಗಾದರೆ ನಿಮಗೆ ಭಯೋತ್ಪಾದಕರು ಬೇಕಾ ಎಂದು ಕೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್ ನಾಯಕ್, ಭಾನುಪ್ರಕಾಶ್, ಗಿರೀಶ್ ಪಟೇಲ್ ಮತ್ತಿತರು ಉಪಸ್ಥಿತರಿದ್ದರು.

ಇದನ್ನೂ ಓದಿ :ವಿಧಾನಸಭೆ ಸೋಲಿನ ಶಾಕ್​ನಿಂದ ಇನ್ನೂ ಹೊರಬಾರದ ಬಿಜೆಪಿ: ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ನೇಮಕ ವಿಳಂಬ

ABOUT THE AUTHOR

...view details