ಕರ್ನಾಟಕ

karnataka

ವಿರೋಧ ಪಕ್ಷದವರಿಗೆ ಮಾತ್ರ ಇಡಿ ನೋಟಿಸ್ ನೀಡುತ್ತಿದೆ: ಡಿಕೆಶಿ

By

Published : Feb 8, 2023, 3:45 PM IST

ವಿರೋಧ ಪಕ್ಷದವರಿಗೆ ಮಾತ್ರ ಇಡಿ ನೋಟಿಸ್​ ನೀಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಡಿ.ಕೆ ಶಿವಕುಮಾರ್​
ಡಿ.ಕೆ ಶಿವಕುಮಾರ್​

ಶಿವಮೊಗ್ಗ: "ನನಗೆ ಫೆ.22 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್​ ನೀಡಿದೆ. ನಾನು ಪ್ರಜಾಧ್ವನಿ ಸಮಾವೇಶ ನಡೆಸಬೇಕಾ ಅಥವಾ ಇಡಿ ಮುಂದೆ ಹಾಜರಾಗಬೇಕಾ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಜಿಲ್ಲೆಯಲ್ಲಿಂದು ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

"ಇಡಿ ವಿರೋಧ ಪಕ್ಷದವರಿಗೆ ಮಾತ್ರ ನೋಟಿಸ್ ನೀಡುತ್ತದೆ. ಆಡಳಿತ ಪಕ್ಷದವರಿಗೆ ನೋಟಿಸ್ ನೀಡಲ್ಲ. ನನ್ನ ಮಗಳಿಗೂ ನೋಟಿಸ್ ನೀಡಿದ್ದಾರೆ. ನಿಮ್ಮ ಕಾಲೇಜಿನಲ್ಲಿ ಎಷ್ಟು ಶುಲ್ಕ ಕಟ್ಟಲಾಗಿದೆ, ವಿದ್ಯಾರ್ಥಿಗಳು ಪರೀಕ್ಷೆಯ ರಿಸಲ್ಟ್​​ ಕುರಿತು ಕೇಳಿದ್ದಾರೆ.​ ನನಗೆ ಫೆಬ್ರವರಿ 22 ರಂದು ಹಾಜರಾಗುವಂತೆ ತಿಳಿಸಿದ್ದಾರೆ. ಪ್ರತಿ ಬಾರಿ ವಿಚಾರಣೆಗೆ ಹೋದಾಗ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಬರುತ್ತಿದ್ದೇನೆ. ಆದರೂ ಮತ್ತೆ ನೋಟಿಸ್ ನೀಡುತ್ತಿದ್ದಾರೆ" ಎಂದು ಹೇಳಿದರು.

"ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶಿವಮೊಗ್ಗದಲ್ಲಿ ಕಾರ್ಮಿಕರು, ರೈತರು, ಜನ‌ಸಾಮಾನ್ಯರು ಸೇರಿದಂತೆ ಯಾರೂ ಸಹ ಬದುಕಲಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಭದ್ರಾವತಿಯಲ್ಲಿ ಎಂಪಿಎಂ ಕಾರ್ಖಾನೆ ಮುಚ್ಚಿದರು. ಈಗ ವಿಐಎಸ್ಎಲ್ ಕಾರ್ಖಾನೆ ಮುಚ್ಚುತ್ತಿದ್ದಾರೆ. ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ವಿಮಾನ ನಿಲ್ದಾಣ ಪ್ರಾರಂಭ ಮಾಡಲು ಇವರ ಬಳಿ ಹಣ ಇದೆ. ಆದರೆ ಕಾರ್ಖಾನೆಯನ್ನು ಉಳಿಸಲು ಹಣ ಇಲ್ಲವೇ ಎಂದು ಪ್ರಶ್ನಿಸಿದರು. ಬಜೆಟ್​ನಲ್ಲಿ ಯಾಕೆ ಒಂದು ರೂಪಾಯಿಯನ್ನು ವಿಐಎಸ್ಎಲ್ ಕಾರ್ಖಾನೆಗೆ ನೀಡಿಲ್ಲ?, ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಕಾರ್ಖಾನೆ ಸರ್ಕಾರದ ಕಾರ್ಖಾನೆಯಾಗಿದ್ದು ಇದನ್ನು ಉಳಿಸಬೇಕಿದೆ. ಖಾಸಗಿ ಕಾರ್ಖಾನೆಗಳು ಲಾಭದಲ್ಲಿ ನಡೆಯುತ್ತಿವೆ. ಆದರೆ ಸರ್ಕಾರಿ ಕಾರ್ಖಾನೆಗಳು ಯಾಕೆ ನಷ್ಟದಲ್ಲಿವೆ" ಎಂದು ಪ್ರಶ್ನಿಸಿದರು.

"ಶಿವಮೊಗ್ಗ ಜಿಲ್ಲೆಗೆ ಯಾರೂ ಬಂಡವಾಳ ಹಾಕಿ ಉದ್ದಿಮೆ ನಡೆಸಲು ಮುಂದೆ ಬರುತ್ತಿಲ್ಲ. ಕಾರಣ ಈಶ್ಬರಪ್ಪ ಹಾಗೂ ಯಡಿಯೂರಪ್ಪನವರು ಸಂಜೆ ಆಗುತ್ತಲೇ ಅಂಗಡಿ ಬಾಗಿಲು ಮುಚ್ಚಿಸುತ್ತಿದ್ದಾರೆ. ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಅವಧಿಯಲ್ಲಿಯೇ ಪೊಲೀಸ್ ನೇಮಕಾತಿಯಲ್ಲಿ ಅಖಂಡ ಭ್ರಷ್ಟಾಚಾರ ನಡೆದಿದೆ. ಇದಕ್ಕೆ ಸಾಕ್ಷಿ ಐಪಿಎಸ್ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದು" ಎಂದರು. "ಅವರು ಅಡಿಕೆ ಉಳಿಸಬೇಕೆಂದು ಹೇಳುವುದನ್ನು ಬಿಟ್ಟರೆ ಏನೂ ಮಾಡಿಲ್ಲ. ಬಿಜೆಪಿಯವರಿಗೆ ಅಧಿಕಾರ ಬೇಕೇ ವಿನಃ ಬೇರೆ ಏನೂ ಮಾಡುತ್ತಿಲ್ಲ" ಎಂದು ದೂರಿದರು. ಇದೇ ವೇಳೆ ಮುಂದೆ ಕಾಂಗ್ರೆಸ್ 140 ಸ್ಥಾನ ಪಡೆದು ಅಧಿಕಾರಕ್ಕೆ ಬಂದು ವಿಐಎಸ್ಎಲ್​ ಕಾರ್ಖಾನೆ ಉಳಿಸುತ್ತದೆ ಎಂದು ಭರವಸೆ ಕೊಟ್ಟರು.

ಕುಮಾರಸ್ವಾಮಿರವರು ಮುಂದಿನ ಸರ್ಕಾರ ನಮ್ಮದೇ ಎಂದು ಹೇಳುತ್ತಿದ್ದಾರೆ ಎಂಬ ವಿಚಾರಕ್ಕೆ, "ಅವರಿಗೆ ನಾನು ಆಲ್ ದಿ ಬೆಸ್ಟ್ ತಿಳಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ. ಇದಕ್ಕೆ ಇತ್ತೀಚೆಗೆ ಬೇರೆ ಪಕ್ಷದ ಅಭ್ಯರ್ಥಿಗಳು ಪಕ್ಷಕ್ಕೆ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ಶಿವಮೊಗ್ಗ ಜಿಲ್ಲೆಯು ಬಹಳಷ್ಟು‌ ನಾಯಕರು ಸಹ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ" ಎಂದು ತಿಳಿಸಿದರು. ಕಾಂಗ್ರೆಸ್​ ಯಾತ್ರೆಯ ಬಸ್​ ಪಂಚರ್​ ಆಗುತ್ತದೆ ಎಂದು ನಳೀನ್​ ಕುಮಾರ್​ ಕಟೀಲ್​ ಹೇಳಿಕೆಗೆ ಪ್ರತಿಕ್ರಿಯಿಸಿ, "ಕಟೀಲ್ ಅವರನ್ನು ಅವರ ಪಕ್ಷದವರೇ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಇನ್ನೂ ನಾವು ಯಾಕೆ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಕಾರಣ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಚುನಾವಣೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ" ಎಂದು ಟೀಕಿಸಿದರು.

ಇದನ್ನೂ ಓದಿ:ಹೆಚ್​ಡಿಕೆ ನಾವೆಲ್ಲಿ ಊಟ ಮಾಡ್ತೀವಿ ಅಂತ ಗೂಢಚಾರಿಕೆ ಶುರು ಮಾಡಿದ್ರಾ? ಸಚಿವ ಅಶ್ವತ್ಥನಾರಾಯಣ ಪ್ರಶ್ನೆ

ABOUT THE AUTHOR

...view details