ಕರ್ನಾಟಕ

karnataka

ಶಿಕ್ಷಕರ ದಿನಾಚರಣೆಯಂದು ಇ- ಲೈಬ್ರರಿಗೆ ಮರು ಚಾಲನೆ: ಸಚಿವ ಮಧು ಬಂಗಾರಪ್ಪ

By

Published : Aug 15, 2023, 4:11 PM IST

ಇ- ಲೈಬ್ರರಿಯನ್ನು ಇನ್ನು ಮುಂದೆ ಮೊಬೈಲ್​ನಲ್ಲಿಯೇ ನೋಡುವಂತಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ:ಸೆಪ್ಟೆಂಬರ್​ 5 ಶಿಕ್ಷಕರ ದಿನಾಚರಣೆಯಂದು ಇ- ಲೈಬ್ರರಿಗೆ ಮರು ಚಾಲನೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ಡಿಎಆರ್ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇ-ಲೈಬ್ರರಿಯನ್ನು ಇನ್ನಷ್ಟು ಉತ್ತಮಗೊಳಿಸಲಾಗುವುದು. ಇ- ಲೈಬ್ರರಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹತ್ತಿರ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಇದರಿಂದ ಇದರಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಇ- ಲೈಬ್ರರಿಯನ್ನು ಈಗ ಗ್ರಂಥಾಲಯಯಲ್ಲಿಯೇ ಹೋಗಿ ನೋಡಬೇಕಿತ್ತು. ಇದನ್ನು ಈಗ ಮೊಬೈಲ್​ನಲ್ಲಿಯೇ ನೋಡುವಂತಹ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಖುಷಿ ತಂದಿದೆ: ಉಸ್ತುವಾರಿ ಸಚಿವನಾಗಿ ಪ್ರಥಮ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದೇನೆ. ನಗರದ ಪೊಲೀಸ್ ಡಿಎಆರ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನಡೆಸಲಾಯಿತು. ಸ್ವಾತಂತ್ರ್ಯ ಪುಕ್ಸಟ್ಟೆ ಬರಲಿಲ್ಲ. ಹೋರಾಟ, ಜೀವದಾನ ಮಾಡಿ ನೂರಾರು ವರ್ಷಗಳ ಹೋರಾಟದಿಂದ ಸ್ವಾತಂತ್ರ್ಯ ಪಡೆಯಲಾಗಿದೆ ಎಂದರು.

ಹೊಸ ಸರ್ಕಾರ ಬಂದ ನಂತರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಬೇಗ ಅರ್ಥಪೂರ್ಣವಾಗಿ ನೀಡುತ್ತಿದ್ದೇವೆ. ಇಷ್ಟು ಬೇಗ ಮಾಡುತ್ತೇವೆ ಎಂದು ವಿಪಕ್ಷಗಳಿಗೆ ಇರಲಿಲ್ಲ. ಆದರೆ, ನಮಗೆ ಆ ಗ್ಯಾರಂಟಿ ಇದ್ದ ಕಾರಣ ಅನುಷ್ಠಾನ ಮಾಡುತ್ತಿದ್ದೇವೆ. ನಮ್ಮ ತಂದೆ ಸ್ವಾತಂತ್ರ್ಯ ದಿನಾಚರಣೆ ಮಾಡಿದ ಜಾಗದಲ್ಲಿ ನಾನು ಇಂದು ಧ್ವಜಾರೋಹಣ ಮಾಡಿದ್ದು ಹೆಮ್ಮೆ ತಂದಿದೆ ಎಂದರು. ಧ್ವಜ ಹಾರಿಸುವ ಭಾಗ್ಯ ಬಂದಿದೆ. ಗ್ಯಾರಂಟಿಯಲ್ಲಿ ಎರಡು ಅಂಶಗಳು ಹತ್ತಿರವಾಗಿದೆ. ಮೊದಲೆಯದು ಗೃಹ ಜ್ಯೋತಿ, ಎರಡನೆಯದು ಗೃಹ ಲಕ್ಷ್ಮಿ. ಜನರ ಕೈಯಲ್ಲಿ ಹಣ ಇರಬೇಕು. ಆಗ ಹಣದ ವರ್ಗಾವಣೆ ನಡೆಯುತ್ತದೆ. ಇದರಿಂದ ರಾಜ್ಯದ ಅರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಮುಂದಿನ ದಿನಗಳಲ್ಲಿ ಬೇರೆ ಗ್ಯಾರಂಟಿಗಳು ಬರಲಿವೆ ಎಂದು ಹೇಳಿದರು.

ಶರಾವತಿ ಮುಳುಗಡೆ ಪ್ರದೇಶದವರಿಗೆ ಶಾಶ್ವತ ಪರಿಹಾರ: ಶರಾವತಿ ಮುಳುಗಡೆ ಪ್ರದೇಶದವರಿಗೆ ಶಾಶ್ವತ ಪರಿಹಾರವನ್ನು ನೀಡಲಾಗುವುದು. ಕಾನೂನು ಹೋರಾಟ ಮುಂದುವರೆಯಲಿದೆ. ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಶರಾವತಿ ಮುಳುಗಡೆ ಪ್ರದೇಶದವರಿಗೆ ನ್ಯಾಯ ಒದಗಿಸಲಾಗುವುದು ಎಂದು ಸಚಿವರು ಅಭಯ ನೀಡಿದರು.

ಹೈಸ್ಕೂಲ್ ಮಕ್ಕಳಿಗೆ ಮೊಟ್ಟೆ ವಿತರಣಾ ಕಾರ್ಯಕ್ರಮ: ಆಗಸ್ಟ್ 18 ರಂದು ಹೈಸ್ಕೂಲ್ ಮಕ್ಕಳಿಗೆ ವಾರದಲ್ಲಿ ಎರಡು ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಚಿಕ್ಕಿ ಹಾಗೂ ಬಾಳೆಹಣ್ಣು ನೀಡಲಾಗುವುದು. ಇದರ ಸದುಪಯೋಗವನ್ನು 60 ಲಕ್ಷ ಮಕ್ಕಳು ಪಡೆಯಲಿದ್ದಾರೆ ಎಂದು ಹೇಳಿದರು.

ಶಿಕ್ಷಣ ಇಲಾಖೆಯು ಬಹುದೊಡ್ಡ ಇಲಾಖೆಯಾಗಿದೆ. ನಮ್ಮ ಶಾಲೆಗಳಿಗೆ 1.20 ಕೋಟಿ ಮಕ್ಕಳು ಬರಲಿದ್ದಾರೆ. ಸರ್ಕಾರಿ ಶಾಲೆಗಳ ರಿಪೇರಿ ಹಾಗೂ ಉನ್ನತೀಕರಣ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಮಾಡಲಾಗುವುದು. ದ್ವಿತೀಯ ಪಿಯುಸಿವರೆಗೆ ಎರಡನೇ ಸಪ್ಲಿಮೆಂಟರಿ ಪರೀಕ್ಷೆ ನಡೆಸಲಾಗುವುದು. ಈ ಸಪ್ಲಿಮೆಂಟರಿ ಪರೀಕ್ಷೆಗೆ 95 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದರು.

ಕರ್ನಾಟಕ ಇ- ಲೈಬ್ರರಿ ಡಿಜಿಟಲ್ ಆಗಿದೆ:ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಲಾಗಿದೆ. ಇನ್ನಷ್ಟು ನಡೆಸಲಾಗುವುದು. ಎನ್​ಇಪಿಯನ್ನು ನಾವು ಒಪ್ಪಿಲ್ಲ. ರಾಜ್ಯ ಪಠ್ಯ ಪುಸ್ತಕ ಜಾರಿಯ ಬಗ್ಗೆ ಈಗಾಗಲೇ ಸಿಎಂ ಹೇಳಿದ್ದಾರೆ. ಕರ್ನಾಟಕ ಇ- ಲೈಬ್ರರಿ ಡಿಜಿಟಲ್ ಆಗಿದೆ. ಅಲ್ಲಿ 40 ಲಕ್ಷ ಪುಸ್ತಕಗಳಿವೆ. ಈಗ 3.45 ಕೋಟಿ ಸದಸ್ಯರಿದ್ದಾರೆ. ಕೆಪಿಎಸ್ ಬೇಡಿಕೆ ಇದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇರುವುದರಿಂದ ಈ ಶಾಲೆಯನ್ನು ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೆರೆಯುವ ಸಾಧ್ಯತೆಗಳಿವೆ.‌ ಕಂದಾಯ ಹಾಗೂ ಅರಣ್ಯ ಭೂಮಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚಿನ ನಿಗಾವಹಿಸಲಾಗುವುದು ಎಂದು ಹೇಳಿದರು.

ಶಿಕ್ಷಣ ಇಲಾಖೆಯಲ್ಲಿ ಶೇ. 100 ರಷ್ಟು ಬದಲಾವಣೆ ಮಾಡಲಿದ್ದೇವೆ: ಶಿಕ್ಷಕರ ಕೌನ್ಸಿಲ್​ನಲ್ಲಿ 37 ಸಾವಿರ ಶಿಕ್ಷಕರಲ್ಲಿ 30 ಸಾವಿರ ಶಿಕ್ಷಕರು ವರ್ಗಾವಣೆ ಆಗಿದ್ದಾರೆ. ಇನ್ನು ಶಿಕ್ಷಕರ ನೇಮಕಾತಿಯಲ್ಲಿ ಕೆಲವೊಂದು ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಸಮಸ್ಯೆ ಆಗಿ ಉಳಿದಿದೆ. ಕೋರ್ಟ್ ಆದೇಶ ಬಂದ ನಂತರ ಅವರಿಗೆ ನೇಮಕಾತಿಯ ಕುರಿತು ಆದೇಶ ‌ನೀಡಲಾಗುವುದು ಎಂದರು. ಇಲಾಖೆಯಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಸರಿ ಮಾಡಲು ಕಾಲಾವಕಾಶ ಬೇಕು. ಎಲ್ಲವನ್ನು ಪರಿಹರಿಸಲಾಗುವುದು. ಇಲಾಖೆಯಲ್ಲಿ ಶೇ. 100 ರಷ್ಟು ಬದಲಾವಣೆ ಮಾಡಲಿದ್ದೇವೆ ಎಂದು ಸಚಿವರು ಹೇಳಿದರು.

6 ತಿಂಗಳಲ್ಲಿ ಸರ್ಕಾರ ಬೀಳಲಿದೆ ಯತ್ನಾಳ್ ಹೇಳಿಕೆಗೆ ತೀರುಗೇಟು: ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಂದಿನ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳಲಿದೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಅವರಿಗೆ ಬಸ್ ನಿಲ್ದಾಣದಲ್ಲಿ ಜಾಗ ತೋರಿಸಿ ಗಿಳಿ ಶಾಸ್ತ್ರ ಹೇಳಲು ತಿಳಿಸಿ ಎಂದು‌ ಖಾರವಾಗಿ ಪ್ರತಿಕ್ರಿಯಿಸಿದರು.

ಯಾರು ಮಾತನಾಡಿದ್ರು ತಪ್ಪು ತಪ್ಪೆ: ಉಪೇಂದ್ರ ಅವರು ನನ್ನ ಸ್ನೇಹಿತರು. ಆದರೆ, ಯಾರು ಮಾತನಾಡಿದ್ರು ತಪ್ಪು ತಪ್ಪೆ. ಅವರು ಒಂದು ಪಕ್ಷದ ಲೀಡರ್ ಇರುವುದರಿಂದ ಅವರು ನೋಡಿಕೊಂಡು ಮಾತನಾಡುವುದು ಸೂಕ್ತವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ರು.

ಇದನ್ನೂ ಓದಿ:77th Independence Day: ಕೋಮು ಶಕ್ತಿಗಳ ವಿರುದ್ಧ ಇಂದಿನ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕು: ಡಿಸಿಎಂ ಡಿಕೆಶಿ

ABOUT THE AUTHOR

...view details