ಕರ್ನಾಟಕ

karnataka

'ಜನ ಮತಹಾಕಿ ವಿಶ್ವಾಸ ತೋರಿಸಿದ್ದಾರೆ, ಭರವಸೆಗಳನ್ನು ಬೇಗ ಈಡೇರಿಸುವ ಜವಾಬ್ದಾರಿ ಇದೆ'

By

Published : May 13, 2023, 5:52 PM IST

ನನ್ನ 40 ವರ್ಷಗಳ ರಾಜಕಾರಣದ ಇತಿಹಾಸದಲ್ಲಿ ಇವತ್ತು ಐತಿಹಾಸಿಕ ದಿನ. ಈ ದಿನವನ್ನು ಮರೆಯುವುದಿಲ್ಲ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

d-k-shivakumar-first-reaction-in-ramanagara
ಡಿಕೆ ಶಿವಕುಮಾರ್​

ಕಾಂಗ್ರೆಸ್‌ ಜಯಭೇರಿ: ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯೆ

ರಾಮನಗರ: "ಜಿಲ್ಲೆಯ ಎಲ್ಲ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ನನ್ನ ಮೇಲೆ, ನಮ್ಮ ಅಭ್ಯರ್ಥಿಗಳು ಹಾಗೂ ಮುಖಂಡರ ಮೇಲೆ ನಂಬಿಕೆ ಇಟ್ಟು ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದೀರಿ. ನನಗೆ 1,22,392 ಮತಗಳನ್ನು ನೀಡಿದ್ದೀರಿ. ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನು 10,715 ಮತಗಳಿಂದ ಗೆಲ್ಲಿಸಿದ್ದೀರಿ. ಬಾಲಕೃಷ್ಣ ಅವರನ್ನು 12,648 ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ. ಇದು ಕೇವಲ ನಮ್ಮ ಮೂವರ ವಿಜಯವಲ್ಲ. ರಾಮನಗರ ಜಿಲ್ಲೆ, ಕಾರ್ಯಕರ್ತರ ಗೆಲುವು. ಜನ ಮತಹಾಕಿ ವಿಶ್ವಾಸ ತೋರಿಸಿದ್ದಾರೆ, ಭರವಸೆಗಳನ್ನು ಬೇಗ ಈಡೇರಿಸುವ ಜವಾಬ್ದಾರಿ ಇದೆ" ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ರಾಮನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಕನಕಪುರ ಗೆದ್ದರೆ ನಾಯಕರಾಗುವುದಿಲ್ಲ ಎಂದು ಅನೇಕರು ಮಾತನಾಡುತ್ತಿದ್ದರು. ಈ ಭಾಗದಲ್ಲಿ ಕೆಲವರು ಬಹಳ ಕೀಳಾಗಿ ಮಾತನಾಡುತ್ತಿದ್ದರು. ನಾನು ಅವರ ಹೆಸರು ಹೇಳುವುದಿಲ್ಲ. ಜಿಲ್ಲೆಯ ಜನ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ. ನೀವು ತೋರಿದ ಪ್ರೀತಿ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನೀವು ಕೊಟ್ಟಿರುವ ಅವಕಾಶದಲ್ಲಿ ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ. ಕಾಂಗ್ರೆಸ್ ಜಯ, ಜನರ ಜಯ" ಎಂದರು.

"ಜನರ ಮುಂದೆ ನಾವು ಸಾಲಗಾರರಾಗಿದ್ದೇವೆ. ಅವರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳಬೇಕು. ನುಡಿದಂತೆ ನಡೆಯುತ್ತೇವೆ. ಈ ಗೆಲುವನ್ನು ಶಾಂತಿಯುತವಾಗಿ ಸಂಭ್ರಮಾಚರಣೆ ಮಾಡಬೇಕು. ಎಲ್ಲೂ ಗಲಾಟೆ ಮಾಡಬಾರದು. ಅದನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಇನ್ನೇನಿದ್ದರೂ ಕೊಟ್ಟಿರುವ ಭರವೆಸೆಗಳನ್ನು ಈಡೇರಿಸುವ ಮೂಲಕ ಜನರ ವಿಶ್ವಾಸ ಗೆಲ್ಲಬೇಕು. ಕಾಂಗ್ರೆಸ್​​ಗೆ ಮತ ದೇಶಕ್ಕೆ ಹಿತ. ನಿಮ್ಮ ಮತದ ಮೂಲಕ ರಾಷ್ಟ್ರಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಪ್ರತಿ ಬೆವರಿನ ಹನಿ, ಪ್ರಾರ್ಥನೆಗೆ ಮತದಾರರು ಪ್ರೀತಿ, ವಿಶ್ವಾಸವನ್ನು ಉತ್ತರವಾಗಿ ನೀಡಿದ್ದಾರೆ" ಎಂದು ತಿಳಿಸಿದರು.

ಇದನ್ನೂ ಓದಿ:ಪಕ್ಷದ ಹಿನ್ನಡೆ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details