ಕರ್ನಾಟಕ

karnataka

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು...

By

Published : Dec 30, 2022, 2:34 PM IST

Updated : Dec 30, 2022, 5:22 PM IST

ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ಇತ್ತೀಚೆಗೆ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಹಾಗಾಗಿ ಇದು ಮೃತ್ಯು ಕೂಪವಾಗುತ್ತಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಕಳೆದ ಆರು ತಿಂಗಳಲ್ಲಿ 77 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 28 ಜನರು ಸಾವಿಗೀಡಾಗಿದ್ದಾರೆ.

ಬೆಂಗಳೂರು ಮೈಸೂರು ಹೆದ್ದಾರಿ
ಬೆಂಗಳೂರು ಮೈಸೂರು ಹೆದ್ದಾರಿ

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಬಾಬು

ರಾಮನಗರ: ನೂತನ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿರುವುದರಿಂದ ಅದು ಮೃತ್ಯು ಕೂಪವಾಗಿ ಪರಿಣಮಿಸಿದೆ. ಬೆಂಗಳೂರು ಮೈಸೂರು ತೆರಳುವವರಿಗೆ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಆದರೆ ಎರಡು ಪ್ರಮುಖ ನಗರಗಳನ್ನು ಬೆಸೆಯುವ ಎಕ್ಸ್ಪ್ರೆಸ್ ಹೈವೇ ಇದೀಗ ಮೃತ್ಯು ಕೂಪವಾಗಿ ಪರಿಣಮಿಸುತ್ತಿದೆ.

ಮೃತ್ಯುಕೂಪವಾದ ಹೆದ್ದಾರಿ:ನೂತನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಅತಿ ವೇಗದಿಂದ ನಿತ್ಯ ಒಂದಲ್ಲ ಒಂದು ಕಡೆ ಅಪಘಾತಗಳು ಸಂಭವಿಸಿ, ಸಾವು ನೋವುಗಳು ಉಂಟಾಗುತ್ತಿವೆ. ಹೀಗಾಗಿ ಇದು ಅಪಾಯಕಾರಿ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಬಹು ಕೋಟಿ ವೆಚ್ಚದಲ್ಲಿ ದಶಪಥ ಹೆದ್ದಾರಿ ನಿರ್ಮಾಣಗೊಂಡಿದೆ. ಹೆದ್ದಾರಿ ಉದ್ಘಾಟನೆಗೂ ಮೊದಲೇ ಮೃತ್ಯುಕೂಪವಾಗಿ ಪರಿಣಮಿಸಿದ್ದು, ದಿನದಿಂದ ದಿನಕ್ಕೆ ಅಪಘಾತಗಳ ಹಾಗೂ ಮೃತಪಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಶೇ.80 ರಷ್ಟು ಕಾಮಗಾರಿ ಪೂರ್ಣ: ಬೆಂಗಳೂರಿನಿಂದ ಮೈಸೂರುವರೆಗೂ ಸುಮಾರು 130 ಕಿಲೋಮೀಟರ್ ದೂರದ ಹೆದ್ದಾರಿ ಕಾಮಗಾರಿ 80ರಷ್ಟು ಮುಗಿದಿದೆ. ಸುಂದರವಾದ ರಸ್ತೆಯಲ್ಲಿ ವಾಹನದ ವೇಗದ ಮಿತಿಗೆ ಇದುವರೆಗೂ ಕಡಿವಾಣ ಬಿದ್ದಿಲ್ಲ. ಹೀಗಾಗಿ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.

ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಳ: ಜಿಲ್ಲೆಯಲ್ಲಿ ಈ ವರ್ಷ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿರುವ ಅಪಘಾತಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ಅಂಕಿ - ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷ 1,262 ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 302 ಜನರು ಮೃತಪಟ್ಟಿದ್ದಾರೆ. 1,272 ಮಂದಿ ಗಾಯಗೊಂಡಿದ್ದಾರೆ.

ನೂತನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕಳೆದ ಆರು ತಿಂಗಳಲ್ಲಿ 77 ಅಪಘಾತ ಪ್ರಕರಣಗಳು ಸಂಭವಿಸಿವೆ. ಇದರಲ್ಲಿ 28 ಜನರು ಸಾವಿಗೀಡಾಗಿದ್ದು, 64 ಜನರು ಗಾಯಗೊಂಡಿದ್ದಾರೆ. ನೂತನ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳು ಕೂಡ ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ವಹಿಸುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಬಾಬು ಇದೇ ವೇಳೆ ತಿಳಿಸಿದರು.

ಎನ್​ಎಚ್​​ ಮತ್ತು ಪೊಲೀಸ್​ ಇಲಾಖೆ ಸಭೆ: ಮೈಸೂರು ದಶಪಥ ಹೆದ್ದಾರಿಯಲ್ಲಿ ಬ್ಲಾಕ್​ಸ್ಪಾಟ್​ ಗುರುತಿಸುವ ಬಗ್ಗೆ ಎನ್​ಎಚ್​​ ಮತ್ತು ಪೊಲೀಸ್​ ಇಲಾಖೆ ಸಭೆ ಮಾಡಿದೆ. ಈ ಸಭೆಯಲ್ಲಿ 16 ಪಾಯಿಂಟ್​ಗಳ ಬಗ್ಗೆ ಹೇಳಲಾಗಿದೆ. ಈ ವರ್ಷದ ಮಳೆ ನೋಡಿ ಚರಂಡಿ ಕೆಲಸ ಮುಗಿಸುವ ಬಗ್ಗೆ ಮತ್ತು ಎಂಟ್ರಿ ಹಾಗೂ ಎಕ್ಸಿಟ್​​ ಅನ್ನು ವೈಜ್ಞಾನಿಕವಾಗಿ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಎನ್​ ಎಚ್​ ಅವರದ್ದು 600 ಕೋಟಿಯಷ್ಟು ಪ್ರಾಜೆಕ್ಟ್​ ಇದೆ. ಕೆಲಸ ಆರಂಭಿಸಲಾಗುವುದು ಸ್ವಲ್ಪ ಸಮಯಬೇಕಾಗಬಹುದು ಎಂದು ಸಂತೋಷ ಬಾಬು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು-ಮೈಸೂರು ಹೆದ್ದಾರಿಗೆ ಕಾವೇರಿ ಎಕ್ಸ್​​ಪ್ರೆಸ್ ವೇ ಎಂದು ನಾಮಕರಣ ಮಾಡಿ : ಗಡ್ಕರಿಗೆ ಪ್ರತಾಪ್ ಸಿಂಹ ಮನವಿ

ಹೊಸದಾಗಿ ಆಗಿರುವ ಬೈಪಾಸ್​ಗಳಲ್ಲಿ 28 ಫೆಟಲ್​ ಅಪಘಾತಗಳು, 48 ನಾನ್​ ಫೆಟಲ್​ ಅಪಘಾತಗಳು ಆಗಿವೆ. 23 ಜನ ಸತ್ತಿದ್ದಾರೆ. ರೆಗ್ಯೂಲರ್​ ನ್ಯಾಷನಲ್​​ ಹೈವೇನಲ್ಲಿ 26 ಫೆಟಲ್​ ಅಪಘಾತಗಳು ಸಂಭವಿಸಿವೆ. ಹೆಚ್ಚಾದ ವೇಗದಿಂದ ಅಪಘಾತಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

Last Updated : Dec 30, 2022, 5:22 PM IST

ABOUT THE AUTHOR

...view details