ಕರ್ನಾಟಕ

karnataka

ಮಾಜಿ ಶಾಸಕ ಬೋಸರಾಜುಗೆ ಒಲಿದ ಸಚಿವ ಸ್ಥಾನ

By

Published : May 27, 2023, 10:47 AM IST

ಈ ಹಿಂದೆ ಕಾಂಗ್ರೆಸ್‌ಗೆ ಮಾಡಿರುವ ಸೇವೆಯನ್ನು ಪರಿಗಣಿಸಿ ಎನ್‌.ಎಸ್‌ ಬೋಸರಾಜು ಸಚಿವ ಸ್ಥಾನ ನೀಡಲಾಗಿದೆ. ಇದೊಂದು ಅಚ್ಚರಿಯ ಆಯ್ಕೆಯಾಗಿದೆ. ಅವರ ಕುರಿತ ಮಾಹಿತಿ ಇಲ್ಲಿದೆ.

NS Boseraju
ಎನ್‌.ಎಸ್‌ ಬೋಸರಾಜು

ರಾಯಚೂರು: ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವ ಮೂಲಕ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದೆ. ಸರ್ಕಾರ ರಚನೆಗೆ ಮುಂದಾದ ಕಾಂಗ್ರೆಸ್​​ ಹೈಕಮಾಂಡ್​ಗೆ ಯಾರನ್ನು ಸಾರಥಿಯಾಗಿ ಮಾಡಬೇಕು ಎನ್ನುವ ದೊಡ್ಡ ತಲೆ ನೋವು ಎದುರಾಗಿತ್ತು. ಕೆಲವು ದಿನಗಳ ಮಾತುಕತೆ, ಹೈಕಮಾಂಡ್​ ಚರ್ಚೆ, ಹಗ್ಗಜಗ್ಗಾಟದ ನಂತರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ​ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನದ ಹಂಚಿಕೆ ಬಿಕ್ಕಟು ಎದುರಾಗಿತ್ತು. ಅಂತಿಮವಾಗಿ ಅಳೆದು ತೂಗಿ 24 ಜನರನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ 23 ಜನ ಶಾಸಕರಾಗಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜು ಅವರಿಗೆ ಸಚಿವ ಸ್ಥಾನ ಲಭಿಸಿದೆ.

ಎಐಸಿಸಿ ಕಾರ್ಯದರ್ಶಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾಗಿರುವ ಎನ್.ಎಸ್ ಬೋಸರಾಜು ಅವರು ತಮ್ಮ ವರ್ಚಿಸ್ಸಿನ ಮೂಲಕ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು, ಇಂದು ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ.

ಬೋಸರಾಜು ಕಿರು ಪರಿಚಯ:ಆಂಧ್ರ ಮೂಲದ ಎನ್.ಎಸ್ ಬೋಸರಾಜು ಅವರು 1972 ರಿಂದ 1976ರವರೆಗೆ ಯೂತ್ ಕಾಂಗ್ರೆಸ್​​ ರಾಯಚೂರು ಜಿಲ್ಲಾಧ್ಯಕ್ಷರಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ಪಕ್ಷ ಸಂಘಟನೆ ಮೂಲಕ ಯೂತ್ ಜಿಲ್ಲಾಧ್ಯಕ್ಷ ಸ್ಥಾನದ ನಂತರ 1976 ರಿಂದ 1980ರವರೆಗೆ ಕಾಂಗ್ರೆಸ್ ತಾಲೂಕು ಅಧ್ಯಕ್ಷರಾಗಿ, 1980 ರಿಂದ 1991ರವರೆಗೆ ರಾಯಚೂರು ಜಿಲ್ಲೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, 1991-2002 ಅವಿಭಜಿತ ರಾಯಚೂರು ಹಾಗೂ ಕೊಪ್ಪಳದ ಜಿಲ್ಲಾಧ್ಯಕ್ಷರಾಗಿ, 2017 ರಿಂದ 2018ರವರೆಗೆ ಕೆಪಿಸಿಸಿ ಉಪಾಧ್ಯಕ್ಷರಾಗಿ, 2018ರಿಂದ ಎಐಸಿಸಿ ಕಾರ್ಯದರ್ಶಿಯಾಗಿದ್ದು, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ.

ರಾಜಕೀಯ ಜೀವನ: 1985ರಲ್ಲಿ ಮೊದಲ ಬಾರಿಗೆ ಮಾನ್ವಿ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ, 3700 ಮತಗಳ ಅಂತರದಿಂದ ಸೋಲು ಅನುಭವಿಸಿದರು. ನಂತರ 1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 24 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ, ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಜೀವನ ಆರಂಭಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 10,800 ಮತಗಳ ಅಂತರದಿಂದ ವಿಜಯಶಾಲಿಯಾದರು. ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಬಳಿಕ ಮಾನ್ವಿ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಯಿತು. ಹೀಗಾಗಿ ಪಕ್ಷದಲ್ಲಿ ತಮ್ಮ ವರ್ಚಸ್ಸಿನಿಂದ 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ (ಎಂಎಲ್​ಸಿ) ಆಯ್ಕೆಯಾಗಿದ್ದರು.

ಮಾಜಿ ಸಿಎಂ ಬಂಗಾರಪ್ಪ ಮತ್ತು ವೀರಪ್ಪ ಮೊಯ್ಲಿ ಅಧಿಕಾರವಾಧಿಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ(ಕಾಡಾ) ಅಧ್ಯಕ್ಷರಾಗಿ, ಮಾಜಿ ಸಿಎಂ ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯ(ಹೆಚ್​ಕೆಡಿಬಿ) ಅಧ್ಯಕ್ಷರಾಗಿ, ಮಾಜಿ ಸಿಎಂ ದಿ.ಧರ್ಮಸಿಂಗ್ ಅವಧಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮೊದಲ ಬಾರಿಗೆ ಸಚಿವ ಸ್ಥಾನ: ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಎಂಎಲ್​​ಸಿ ಆಗಿದ್ದ ಎನ್.ಎಸ್ ಬೋಸರಾಜು ಅವರಿಗೆ ಈವರೆಗೆ ಮಂತ್ರಿ ಸ್ಥಾನ ದೊರಕಿರಲಿಲ್ಲ. ಇದೀಗ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಅಲ್ಪಸಂಖ್ಯಾತ ಸಮುದಾಯದವರಿಗೆ ಮಣೆ ಹಾಕಿತ್ತು. ಇದಕ್ಕೆ ಪ್ರತಿಯಾಗಿ ಸರ್ಕಾರ ರಚನೆ ವೇಳೆ ಸೂಕ್ತ ಸ್ಥಾನಮಾನದ ಭರವಸೆಯನ್ನು ಹೈಕಮಾಂಡ್ ನೀಡಿತ್ತು. ನಂತರ ಮಾನ್ವಿ ಕ್ಷೇತ್ರದ ತಮ್ಮ ಪರಮಾಪ್ತ ಜಿ.ಹಂಪಯ್ಯನಾಯಕರಿಗೆ ಟಿಕೆಟ್ ಕೊಡಿಸಿ, ಅವರನ್ನು ಗೆಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಹೈಕಮಾಂಡ್​ಗೆ ರವಾನೆ ಮಾಡಿದ್ದರು.

ಎದುರಾಳಿಗಳಿಗೆ ಟಕ್ಕರ್:ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿದ್ದಾರೆ ಎಂದು ಆಯ್ಕೆಯಾದ ಕಾಂಗ್ರೆಸ್ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್ ಹಾಗೂ ಕೆಪಿಸಿಸಿ ಮುಖಂಡರಾದ ವಸಂತಕುಮಾರ್, ಆಸ್ಲಂ ಪಾಶಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರವನ್ನು ಬರೆದಿದ್ದರು. ಆದರೂ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಿಎಂ ಆದಾಗ ರಾಯಚೂರು ಜಿಲ್ಲೆಗೆ ಯಾವುದೇ ಸಚಿವ ಸ್ಥಾನವನ್ನು ನೀಡಿರಲಿಲ್ಲ. ಇದೀಗ ಎರಡನೇ ಬಾರಿ ಸಿಎಂ ಆಗಿರುವ ಸಿದ್ಧರಾಮಯ್ಯ ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡಿದ್ದಾರೆ.

ಇದನ್ನೂ ಓದಿ:ಸಾಮಾಜಿಕ ನ್ಯಾಯ ಪಾಲಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ: ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ..

ABOUT THE AUTHOR

...view details