ಕರ್ನಾಟಕ

karnataka

ರಾಯಚೂರು: ಮಂದಿರದ ಧ್ವನಿವರ್ಧಕದಲ್ಲಿ ಕೊರೊನಾ ಜಾಗೃತಿ ಸಂದೇಶ

By

Published : May 24, 2021, 9:19 PM IST

ಕೊರೊನಾ ಸರಪಳಿ ತಡೆಯಲು ಸರ್ಕಾರದ ಜೊತೆಯಲ್ಲಿ ರಾಯಚೂರಿನ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಕೈ ಜೋಡಿಸಿವೆ.

temple
ಮಂದಿರ

ರಾಯಚೂರು: ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಸ್ಥಳಗಳಲ್ಲಿ ಇರುವ ಧ್ವನಿವರ್ಧಕಗಳು ಧಾರ್ಮಿಕ ಕಾರ್ಯಗಳ ಜೊತೆಗೆ ಕೊರೊನಾ ಜಾಗೃತಿ ಸಂದೇಶಗಳನ್ನು ಸಾರುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸುತ್ತಿವೆ.

ದೇವಸ್ಥಾನ, ಮಸೀದಿ, ಚರ್ಚ್​ಗಳಲ್ಲಿರುವ ಧ್ವನಿವರ್ಧಕಗಳು ಸಾಮಾನ್ಯವಾಗಿ ಪುರಾಣ, ಪ್ರವಚನ, ಧಾರ್ಮಿಕ ಗೀತೆ ಹಾಗೂ ಧಾರ್ಮಿಕ ಸಂದೇಶಗಳಿಗೆ ಬಳಕೆಯಾಗುತ್ತಿದ್ದವು. ಹೆಚ್ಚುತ್ತಿರುವ ಕೊರೊನಾ ಪ್ರಭಾವದಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಲಾಕ್​ಡೌನ್​ ಘೋಷಣೆ ಹಿನ್ನೆಲೆ ಧಾರ್ಮಿಕ ಸ್ಥಳಗಳಿಗೆ ಸಾರ್ವಜನಿಕ ನಿರ್ಬಂಧ ಹಾಕಲಾಗಿದ್ದು, ಕೊರೊನಾ ಸರಪಳಿ ತಡೆಯಲು ಸರ್ಕಾರದ ಜೊತೆಯಲ್ಲಿ ಸಂಘ ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಕೈ ಜೋಡಿಸಿವೆ.

ಕೊರೊನಾ ಜಾಗೃತಿ ಸಂದೇಶದ ಕುರಿತು ತಂಡದ ಸದಸ್ಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ

ನಗರದಲ್ಲಿ V4U ಎಂಬ ಸಮಾನ ಮನಸ್ಕರ ಯುವಕರ ತಂಡ ಕೊರೊನಾ ಜಾಗೃತಿಗಾಗಿ ವಿಭಿನ್ನವಾಗಿ ಯೋಚಿಸಿ, ಜನರು ಧಾರ್ಮಿಕ ಸ್ಥಳಗಳ ಮೇಲೆ ಶ್ರದ್ಧೆ, ಭಕ್ತಿ ಇರುವುದರಿಂದ ಇಲ್ಲಿನಿಂದ ಬರುವ ಸಂದೇಶಗಳನ್ನು ಪಾಲಿಸುತ್ತಾರೆ ಎನ್ನುವ ಅಭಿಲಾಷೆಯೊಂದಿಗೆ ನಗರದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಇವರು ಧ್ವನಿವರ್ಧಕದಲ್ಲಿ ಜಾಗೃತಿ ಸಂದೇಶ ಸಾರುತ್ತಿದ್ದಾರೆ.

ಕೋವಿಡ್​ ನಿಯಮಗಳ ಕುರಿತು ಒಂದು ನಿಮಿಷದ ದ್ವನಿ ಸುರುಳಿ ಮಾಡಿಕೊಂಡು, ದೇವಸ್ಥಾನ, ಮಸೀದಿ, ಚರ್ಚ್​ಗಳ ಮುಖ್ಯಸ್ಥರಿಗೆ ಜಾಗೃತಿ ಸಂದೇಶ ಪ್ರಸಾರ ಮಾಡಲು ಮಾಡಿದ ಮನವಿ ಫಲಪ್ರದವಾಗಿದ್ದು, ನಗರದ ಪ್ರಮುಖ ದೇವಸ್ಥಾನಗಳು ಸೇರಿದಂತೆ ಇತರೆ 10ಕ್ಕೂ ಅಧಿಕ ಧಾರ್ಮಿಕ ಸ್ಥಳಗಳಲ್ಲಿ ಪ್ರತಿ ಜಾಗೃತಿ ಸಂದೇಶ ಸಾರಲಾಗುತ್ತಿದ್ದು, ಧಾರ್ಮಿಕ ಸ್ಥಳದಲ್ಲಿನ ಧ್ವನಿವರ್ಧಕದಿಂದ ಬರುತ್ತಿರುವ ಜಾಗೃತಿ ಸಂದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಗ್ಗೆ V4U ತಂಡದ ಮುಖ್ಯಸ್ಥ ಅಮಿತ್ ದಂಡಿನ್ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಿ ಹಲವಾರು ರೀತಿಯಲ್ಲಿ ಜಾಗೃತಿ ಕಾರ್ಯಮಾಡುತ್ತಿದ್ದು, ಈ ಕಾರ್ಯದಲ್ಲಿ V4U ತಂಡದ ಅಳಿಲು ಸೇವೆ ಇರಲಿ ಎನ್ನುವ ಉದ್ದೇಶದಿಂದ ವಿಭಿನ್ನವಾಗಿ ಯೋಚಿಸಿ ಕೊರೊನಾ ಜಾಗೃತಿ ಸಂದೇಶವನ್ನು ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಸಾರಲಾಗುತ್ತಿದೆ. ಸಾರ್ವಜನಿಕರು ಸರ್ಕಾರದ ಕೊವೀಡ್ ನಿಯಮಗಳನ್ನು ಪಾಲಿಸಿ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಶಂಕರ್ ಮಠದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಹೆಬಸೂರು ಮಾತನಾಡಿ, ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮಾರ್ಗಸೂಚಿ ಹೊಂದಿರುವ ಒಂದು ನಿಮಿಷದ ಧ್ವನಿ ಸುರುಳಿಯನ್ನು ಮಠದ ಮೈಕ್ ಸೆಟ್ ನಲ್ಲಿ ಪ್ರಸಾರ ಮಾಡಲು V4U ಸಂಘದ ಸದಸ್ಯರು ಮನವಿ ಮಾಡಿದ್ದು, ಅದರಂತೆ ನಾವು ಕೊರೊನಾ ಜಾಗೃತಿ ಸಂದೇಶದ ಧ್ವನಿ ಸುರುಳಿ ಪ್ರಸಾರ ಮಾಡಿ ಮಠದ ಸುತ್ತಮುತ್ತಲಿನ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಕೊರೊನಾ ರೋಗಿಗಳಿಗೆ ಉಚಿತ ಊಟ: V4U ತಂಡ ಜನರಲ್ಲಿ ಕೊರೊನಾ ಕುರಿತು ವಿಭಿನ್ನವಾಗಿ ಜಾಗೃತಿ ಗೊಳಿಸುತ್ತಿರುವುದಲ್ಲದೆ, ನಗರದಲ್ಲಿ ಕೋವಿಡ್​ ಕಾಲ್ ಸೆಂಟರ್ ಆರಂಭಿಸಿದ್ದು, ನುರಿತ ವೈದ್ಯರಿಂದ ದಿನದ 10 ಗಂಟೆ ಸಮಾಲೋಚನೆಗೆ ವ್ಯವಸ್ಥೆ, ಚುಚ್ಚುಮದ್ದು ಕೇಂದ್ರಗಳ ಮಾಹಿತಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಹಾಸಿಗೆಯ ವ್ಯವಸ್ಥೆ ಕುರಿತು ಮಾಹಿತಿ ನೀಡುತ್ತಿದ್ದಾರೆ.

ಜಿಲ್ಲೆಯಲ್ಲಿ ಲಾಕ್​ಡೌನ್​ ಜಾರಿಯಲ್ಲಿರುವುದರಿಂದ ಕೊರೊನಾ ರೋಗಿಗಳು ಹಾಗೂ ಸಂಬಂಧಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಉಚಿತವಾಗಿ ಉಟದ ವ್ಯವಸ್ಥೆಯನ್ನು ದಾನಿಗಳ ಸಹಕಾರದಿಂದ ಮಾಡಿದ್ದು, ಮೊದಲಿಗೆ ಇಬ್ಬರು ರೋಗಗಳಿಂದ ಆರಂಭವಾದ ಸೇವೆ ಇಂದು 45 ಜನರಿಗೆ ತಲುಪಿದೆ.

ಓದಿ:ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ಫೋನ್: ಸುರೇಶ್ ಕುಮಾರ್

TAGGED:

ABOUT THE AUTHOR

...view details