ಕರ್ನಾಟಕ

karnataka

ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವು; 30ಕ್ಕೂ ಹೆಚ್ಚು ಮಂದಿ ಅಸ್ವಸ್ಥ

By

Published : May 26, 2023, 1:17 PM IST

Updated : May 26, 2023, 2:26 PM IST

ಕಲುಷಿತ ನೀರಿನ ಸೇವನೆಯಿಂದ ಓರ್ವ ಬಾಲಕ ಮೃತಪಟ್ಟು ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Drinking contaminated water
ಕಲುಷಿತ ನೀರು ಸೇವನೆ

ರಾಯಚೂರಿನಲ್ಲಿ ಕಲುಷಿತ ನೀರು ಸೇವನೆ

ರಾಯಚೂರು:ಕಲುಷಿತ ನೀರು ಸೇವಿಸಿ ಮಗು ಸಾವನ್ನಪ್ಪಿ, 30 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ‌ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದ ಜನರು ಕಳೆದ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಘಟನೆಗೆ ಗ್ರಾ.ಪಂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಅರಕೇರಾ, ದೇವದುರ್ಗ ಹಾಗೂ ರಾಯಚೂರಿನ ರಿಮ್ಸ್​ನಲ್ಲಿ ಅನಾರೋಗ್ಯಪೀಡಿತರು ದಾಖಲಾಗಿದ್ದಾರೆ. ರೇಕಲಮರಡಿ ಗ್ರಾಮದ ಮಗು ಕಲುಷಿತ ನೀರಿನ ಸೇವನೆಯ ಪರಿಣಾಮ ವಾಂತಿ ಭೇದಿಯಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಎಚ್‌ಓ ಡಾ.ಸುರೇಂದ್ರ ಬಾಬು, "ಮಗುವಿನ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈಗಾಗಲೇ ಗ್ರಾಮದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಕುಡಿಯುವ ನೀರಿನಿಂದಲೇ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ ಎಂದು ಗೊತ್ತಾಗಿದೆ. ರೆಕಲಮರಡಿ ಗ್ರಾಮದಲ್ಲಿ ಮುಂದಿನ 24 ಗಂಟೆಯವರೆಗೆ ವೈದ್ಯರ ತಂಡವನ್ನು ನಿಯೋಜಿಸಲಾಗಿದೆ. ಅಗತ್ಯ ವೈದ್ಯಕೀಯ ಸಲಕರಣೆ, ಔಷಧಿ ಮತ್ತು ತಾತ್ಕಾಲಿಕವಾಗಿ ಶುದ್ದ ಕುಡಿಯುವ ನೀರಿವ ವ್ಯವಸ್ಥೆ ಮಾಡಲಾಗಿದೆ. ವಾಂತಿ, ಭೇದಿಯಾದ ಕೂಡಲೇ ಚಿಕಿತ್ಸೆಗೆ ಧಾವಿಸುವಂತೆ ಮನವಿ ಮಾಡಲಾಗಿದೆ. ಕಾಯಿಸಿ, ಆರಿಸಿದ ನೀರು ಕುಡಿಯುವಂತೆ ಸೂಚನೆ ನೀಡಲಾಗಿದೆ. ಡಂಗುರ ಸಾರಿ ಜಾಗೃತಿ ಮೂಡಿಸಲಾಗುವುದು" ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರ ಆಕ್ರೋಶ:ಗ್ರಾಮಸ್ಥರು ಪ್ರತಿಕ್ರಿಯಿಸಿ, "ಚರಂಡಿ ನೀರಿನ ಪೈಪ್​ ಒಡೆದು ಕುಡಿಯುವ ನೀರಿನೊಂದಿಗೆ ಮಿಶ್ರಣಗೊಂಡಿದೆ. ಈ ನೀರು ಸೇವಿಸಿದ್ದರಿಂದ ಜನರಿಗೆ ವಾಂತಿ ಭೇದಿಯಾಗಿದೆ. ಈ ಕೂಡಲೇ ಪಂಚಾಯಿತಿಯವರು ಪೈಪ್‌ಲೈನ್​ ಬದಲಾಯಿಸಬೇಕು. ಪೈಪ್​ಲೈನ್ ಕಾಮಗಾರಿ ಬಳಿಕ ಕಾರ್ಮಿಕರು ಸರಿಯಾಗಿ ಮುಚ್ಚಬೇಕು. ಇದರಿಂದಾಗಿ ಪೈಪ್​ಲೈನ್​ ಒಡೆದ ಸಂದರ್ಭದಲ್ಲಿ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಸೇರಿ ಅನಾಹುತಗಳು ಸಂಭವಿಸುತ್ತಿವೆ" ಎಂದು ಹೇಳಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 50 ಜನ ಅಸ್ವಸ್ಥ: ಇತ್ತಿಚೇಗೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಚಪ್ಪರದಳ್ಳಿ ಗ್ರಾಮದಲ್ಲಿ ಆರತಕ್ಷತೆ ವೇಳೆ ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡು ರಟ್ಟಿಹಳ್ಳಿಯ ತಾಲೂಕಾಸ್ಪತ್ರೆಗೆ ಸೇರಿದ್ದ 50 ಕ್ಕೂ ಅಧಿಕ ಜನರ ಆರೋಗ್ಯ ಸುಧಾರಿಸಿದ್ದು, ವಾಪಸ್​ ತಮ್ಮ-ತಮ್ಮ ಮನೆ ಸೇರಿದ್ದಾರೆ. ರಟ್ಟಿಹಳ್ಳಿಯ ತಾಲೂಕು ಆಸ್ಪತ್ರೆ 35 ಬೆಡ್ ಇರುವ ಆಸ್ಪತ್ರೆಗೆ ಕಲುಷಿತ ಆಹಾರ ಸೇವನೆಯಿಂದ ಇಷ್ಟು ಜನ ಅನಾರೋಗ್ಯದಿಂದ ಬಳಲುತ್ತಿದ್ದರೂ, ಯಾವ ವೈದ್ಯರು ತಕ್ಷಣ ನಮ್ಮ ಹತ್ತಿರ ಬರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಲುಷಿತ ಆಹಾರ ಸೇವಿಸಿದವರಲ್ಲಿ ಮೂವರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಹಿರೇಕೆರೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡ ಮೂವರಲ್ಲಿ ಒಬ್ಬರು ಮಹಿಳೆ ಮತ್ತು ಇಬ್ಬರು ಗರ್ಭಿಣಿಯರು ಇದ್ದು, ಹಿರೇಕೆರೂರು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಅವರು ಚೇತರಿಸಿಕೊಂಡು ವಾಪಸ್​ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸಾರ್ವಜನಿಕರು

Last Updated :May 26, 2023, 2:26 PM IST

ABOUT THE AUTHOR

...view details