ಕರ್ನಾಟಕ

karnataka

ಮೈಸೂರು ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

By ETV Bharat Karnataka Team

Published : Oct 26, 2023, 3:38 PM IST

Updated : Oct 26, 2023, 4:27 PM IST

ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಮುಕ್ತಾಯಗೊಂಡಿದ್ದು ಇಂದು ಗಜಪಡೆಗಳು ತಮ್ಮ ಶಿಬಿರಗಳಿಗೆ ತೆರಳಿದವು. ಇದಕ್ಕೂ ಮುನ್ನ ಅರಮನೆ ಮುಂಭಾಗ ಸಾಂಪ್ರದಾಯಿಕ ಬೀಳ್ಕೊಡುಗೆ ನೀಡಲಾಯಿತು.

ಗಜಪಡೆಗೆ
ಗಜಪಡೆಗೆ

ಜಂಬೂಸವಾರಿ ಯಶಸ್ವಿಗೊಳಿಸಿದ ಗಜಪಡೆಗೆ ಸಾಂಪ್ರದಾಯಿಕ ಬೀಳ್ಕೊಡುಗೆ

ಮೈಸೂರು:ಪ್ರಸಿದ್ಧ ದಸರಾಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮಾವುತರು ಹಾಗು ಕಾವಾಡಿಗರನ್ನು ಇಂದು ಸನ್ಮಾನಿಸಲಾಯಿತು. ಈ ಮೂಲಕ ಅರಮನೆಯ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಆತ್ಮೀಯ ಬೀಳ್ಕೊಡುಗೆ ನೀಡಿತು. ಕಳೆದ 56 ದಿನಗಳಿಂದ ಅರಮನೆ ಆವರಣದಲ್ಲಿ ಗಜಪಡೆ ಹಾಗೂ ಅದರೊಂದಿಗೆ ಬಂದಿದ್ದ ಮಾವುತರು, ಕಾವಾಡಿಗರ ಕುಟುಂಬದವರು ಬೀಡುಬಿಟ್ಟಿದ್ದರು. ಮಾವುತ, ಕಾವಾಡಿಗರಿಗೆ ಗೌರವ ಧನದ ಚೆಕ್ ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ಗಜಪಯಣದ ಮೂಲಕ 14 ಆನೆಗಳು ಅರಮನೆಗೆ ಆಗಮಿಸಿದ್ದವು. ಅಕ್ಬೋಬರ್ 24ಕ್ಕೆ ಜಂಬೂಸವಾರಿ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ ಅಭಿಮನ್ಯು ಮತ್ತು ತಂಡ ಇಂದು ಒಲ್ಲದ ಮನಸ್ಸಿನಿಂದ ಮರಳಿ ಕಾಡಿಗೆ ತೆರಳಿದವು. ಕೆಲವು ಆನೆಗಳು ಮರಳಿ ಶಿಬಿರಕ್ಕೆ ಹೋಗಲು ಲಾರಿ ಹತ್ತದೆ ಕೆಲಕಾಲ ಸತಾಯಿಸಿದ ಘಟನೆಯೂ ನಡೆಯಿತು. ಕೊನೆಗೆ ಅಭಿಮನ್ಯು ಇತರೆ ಆನೆಗಳನ್ನು ಬಲವಂತವಾಗಿ ಲಾರಿಗೆ ಹತ್ತಿಸಿ ಕಳುಹಿಸಿದ.

ರೋಹಿತ್​ ಆನೆಗೆ ಕಲ್ಲಂಗಡಿ, ಕಬ್ಬು ನೀಡಿ ಶೃತಿ ಕೀರ್ತಿದೇವಿ ಒಡೆಯರ್ ಅವರಿಂದ ಬೀಳ್ಕೊಡುಗೆ:ಗಜಪಡೆಯೊಂದಿಗೆ ಆಗಮಿಸಿದ ಆನೆ ರೋಹಿತನಿಗೆ ಕಲ್ಲಂಗಡಿ, ಕಬ್ಬು ನೀಡಿ ರಾಜವಂಸ್ಥೆ ಶೃತಿ ಕೀರ್ತಿದೇವಿ ಒಡೆಯರ್ ಪ್ರೀತಿಯಿಂದ ಬೀಳ್ಕೊಟ್ಟರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ, ಮರಿ ರೋಹಿತ​ನನ್ನು 10 ವರ್ಷದ ನಂತರ ಅರಣ್ಯ ಇಲಾಖೆಗೆ ನೀಡಿದ್ದರು.

21 ವರ್ಷದ ರೋಹಿತ್ ಮೇಲೆ ಒಡನಾಟವಿಟ್ಟುಕೊಂಡಿರುವ ವಿಶಾಲಾಕ್ಷಿದೇವಿ ಅವರ ಮಗಳು ಶೃತಿ ಕೀರ್ತಿದೇವಿ, ಅರಮನೆಗೆ ಆನೆ ಬಂದಾಗಿನಿಂದ ಅದರ ಮೇಲೆ ವಿಶೇಷ ಕಾಳಜಿ ಹೊಂದಿದ್ದರು. ರೋಹಿತನಿಗೆ ಪ್ರಿಯವಾದ ಕಲ್ಲಂಗಡಿ, ಕಬ್ಬು ನೀಡುತ್ತಿದ್ದರು. ಇಂದು ಅರಮನೆಯಿಂದ ಬಂಡೀಪುರದ ರಾಂಪುರ ಕ್ಯಾಂಪ್​ಗೆ ರೋಹಿತ್ ಹೊರಡಿದ್ದು, ಲಾರಿ ಹತ್ತುವವರೆಗೂ ಅದರ ಜೊತೆಗೇ ಇದ್ದು, ಮಾವುತರು ಹಾಗೂ ಕಾವಾಡಿಗಳಿಗೆ ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಇದನ್ನೂ ಓದಿ:ದಸರಾಗೆ ತಂದಿದ್ದ ಆನೆಯನ್ನು ವಾಪಸ್​ ಒಯ್ಯುತ್ತಿದ್ದ ವೇಳೆ ವಾಹನ ಅಪಘಾತ.. ಚಾಲಕ ಸ್ಥಳದಲ್ಲೇ ಸಾವು

Last Updated : Oct 26, 2023, 4:27 PM IST

ABOUT THE AUTHOR

...view details