ಕರ್ನಾಟಕ

karnataka

ದಸರಾ ಮಹೋತ್ಸವಕ್ಕೆ ಮೆರಗು ನೀಡಿದ ಆಕರ್ಷಕ ಸ್ತಬ್ದಚಿತ್ರಗಳು

By

Published : Oct 5, 2022, 8:35 PM IST

Updated : Oct 5, 2022, 9:15 PM IST

tablos-at-mysore-dasara

ವಿಶ್ವವಿಖ್ಯಾತ ಮೈಸೂರು ದಸರಾದ ವಿಜಯದಶಮಿ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಆಕರ್ಷಕ ಸ್ತಬ್ದಚಿತ್ರಗಳು ಗಮನ ಸೆಳೆದವು. ಅಪಾರ ಸಂಖ್ಯೆಯ ಜನರು ದಸರಾ ಮೆರವಣಿಗೆ ಕಣ್ತುಂಬಿಕೊಂಡರು.

ಮೈಸೂರು :ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಸಿದ್ಧಪಡಿಸಲಾಗಿದ್ದ ಆಕರ್ಷಕ ಸ್ತಬ್ದಚಿತ್ರಗಳು ವಿಜಯದಶಮಿ ಮೆರವಣಿಗೆಯಲ್ಲಿ ನೋಡುಗರ ಕಣ್ಮನ ಸೆಳೆದವು. ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ವತಿಯಿಂದ ಅನೇಕ ಪರಿಕಲ್ಪನೆಯಡಿ ಸಿದ್ಧಪಡಿಸಲಾಗಿದ್ದ 48 ಸ್ಥಬ್ಧ ಚಿತ್ರಗಳು ಮತ್ತು ಅರಮನೆ ವಾದ್ಯಗೋಷ್ಠಿಯೂ ನೋಡುಗರನ್ನು ಆಕರ್ಷಿಸಿತ್ತು.

ಕಣ್ಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ದಚಿತ್ರ : ಮೈಸೂರು ಜಿಲ್ಲೆಯ ವತಿಯಿಂದ ಸಿದ್ಧಪಡಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ಜಿಯೋಗ್ರಾಫಿಕಲ್ ಇಂಡಿಕೇಶನ್ ಬೆಳೆಗಳಾದ ಮೈಸೂರು ವೀಳ್ಯದೆಲೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ ರಚಿಸಲಾಗಿತ್ತು. ಮೈಸೂರು ಪಾಕ್, ಮೈಸೂರು ಪೇಟ, ಮೈಸೂರು ರೇಷ್ಮೆ ಸೀರೆ, ಅಗರಬತ್ತಿ, ಸ್ಯಾಂಡಲ್ ಸೋಪು, ದೊಡ್ಡಗಡಿಯಾರ, ಜೆಟ್ಟಿ ಕಾಳಗ ಮತ್ತು ಸೋಮನಾಥಪುರ ಚನ್ನಕೇಶವ ದೇವಸ್ಥಾನ ಎಲ್ಲರ ಗಮನ ಸೆಳೆಯಿತು.

ಮೈಸೂರು ವಿಶ್ವವಿದ್ಯಾನಿಲಯದ ಸ್ತಬ್ದ ಚಿತ್ರವು ಕ್ರಾಫರ್ಡ್ ಹಾಲ್, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿತ್ರಗಳ ಜೊತೆಗೆ ಶೈಕ್ಷಣಿಕ ಪದವಿಯ ಮಹತ್ವ ತಿಳಿಸಿತು. ವಿಜಯನಗರ ಜಿಲ್ಲೆಯಿಂದ ನಿರ್ಮಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ಹಂಪಿಯ ಕಲ್ಲಿನ ರಥಕ್ಕೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರಿ ಇಲಾಖೆಗಳಿಂದ ವಿವಿಧ ಸ್ತಬ್ದಚಿತ್ರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಿದ್ಧಗೊಂಡಿದ್ದ ಸ್ತಬ್ಧ ಚಿತ್ರವು ಜನರಿಗೆ ಉತ್ತಮ ಆರೋಗ್ಯ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಆಯುಷ್ಮಾನ್ ಕಾರ್ಡ್ ಸೌಲಭ್ಯ ಕುರಿತು ಅರಿವು ಮೂಡಿಸಿತು.

ಉಡುಪಿ ಜಿಲ್ಲೆಯ ಕೈಮಗ್ಗ, ಸೀರೆ ನೇಯ್ಗೆ ಹಾಗೂ ಜಿಲ್ಲೆಯ ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಮತ್ತು ಯಕ್ಷಗಾನ ಚಿತ್ರಗಳು ಉತ್ತಮವಾಗಿದ್ದವು. ಮಂಡ್ಯ ಜಿಲ್ಲೆಯ ಭೂವರಹನಾಥಸ್ವಾಮಿ ವಿಗ್ರಹ ಹಾಗೂ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಬಸರಾಳು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಒಳಗೊಂಡ ಸ್ತಬ್ದ ಚಿತ್ರವು ಎಲ್ಲರಲ್ಲಿ ಭಕ್ತಿಭಾವ ಮೂಡಿಸಿತ್ತು.

ದಸರಾ ಮಹೋತ್ಸವಕ್ಕೆ ಮೆರಗು ನೀಡಿದ ಆಕರ್ಷಕ ಸ್ತಬ್ದಚಿತ್ರಗಳು

ಕೊಪ್ಪಳ ಜಿಲ್ಲೆಯ ಆನೆಗೊಂದಿ ಕೋಟೆ, ಕಿನ್ನಾಳ ಗೊಂಬೆ ಮತ್ತು ಅಂಜನಾದ್ರಿ ಬೆಟ್ಟದ ಸ್ತಬ್ದ ಚಿತ್ರ ಹಾಗೂ ಕೋಲಾರ ಜಿಲ್ಲೆಯ ವತಿಯಿಂದ ಪದ್ಮವಿಭೂಷಣ ಶ್ರೀ ಬಿ.ಕೆ.ಎಸ್. ಐಯ್ಯಂಗಾರ್ ಅವರ ಶತಮಾನೋತ್ಸವ ನೆನಪಿನಲ್ಲಿ ಸಿದ್ಧಪಡಿಸಲಾಗಿದ್ದ ಸ್ತಬ್ದ ಚಿತ್ರದಲ್ಲಿ ದಕ್ಷಿಣ ಕಾಶಿ ಅಂತರಗಂಗೆ, ಯೋಗಾಸನ, ವ್ಯಾಯಾಮವು ನೋಡುಗರ ಮನಗೆದ್ದಿತು.

ಶಿವಮೊಗ್ಗ ಜಿಲ್ಲೆಯ ಅಕ್ಕಮಹಾದೇವಿ ದೇವಸ್ಥಾನ ಹಾಗೂ ಜೂವನ ಚರಿತ್ರೆ ಸಾರುವ ಗುಹೆ, ಅನುಭವ ಮಂಟಪ ಸ್ತಬ್ದ ಚಿತ್ರ ನೋಡುತ್ತಿದ್ದಂತೆ ಎಲ್ಲರ ಚಿತ್ತ ನೆಟ್ಟಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸ್ತಬ್ದ ಚಿತ್ರವು ಜನಸೇವಕ, ಜನಸ್ಪಂದನ, ಅಮೃತ ಗ್ರಾಮ ಪಂಚಾಯಿತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಿತು.

ಗಮನ ಸೆಳೆದ ನಟ ಪುನೀತ್​ ರಾಜಕುಮಾರ್​ ಪ್ರತಿಮೆ: ಚಾಮರಾಜನಗರ ಜಿಲ್ಲೆಯ ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ ಹಾಗೂ ದಿವಂಗತ ನಟ ಪುನೀತ್ ರಾಜ್ ಕುಮಾರ್ ಪ್ರತಿಮೆ ಕಂಡು ಸಂತೋಷಗೊಂಡರು. ರಾಮನಗರ ಜಿಲ್ಲೆಯ ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ, ಬಾಗಲಕೋಟ ಜಿಲ್ಲೆಯ ಮುಧೋಳ ಶ್ವಾನ, ಇಳಕಲ್ ಸೀರೆ, ದುರ್ಗಾಂಬ ದೇವಸ್ಥಾನ, ಬೀದರ್ ಜಿಲ್ಲೆಯ ನೂತನ ಅನುಭವ ಮಂಟಪ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತ, ಸಹಕಾರ ಇಲಾಖೆ, ಸೇರಿದಂತೆ ಅನೇಕ ಸ್ತಬ್ದಚಿತ್ರಗಳನ್ನು ನೆರೆದವರು ಕಣ್ತುಂಬಿಕೊಂಡರು.

ಇದನ್ನೂ ಓದಿ :ಶಮಿ ಪೂಜೆ ಸಲ್ಲಿಸಿದ ಮಹಾರಾಜರು: ಗಮನ ಸೆಳೆದ ಜಟ್ಟಿ ಕಾಳಗ

Last Updated :Oct 5, 2022, 9:15 PM IST

ABOUT THE AUTHOR

...view details