ಮೈಸೂರು: ಸಂಬಂಧಿಕರೊಬ್ಬರ ಹುಟ್ಟು ಹಬ್ಬದ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ಯುವಕನೊಬ್ಬ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ. ಕುಟುಂಬಸ್ಥರು ಮೊದಲು ಯುವಕನದ್ದು ಸಹಜ ಸಾವೆಂದು ತಿಳಿದು ಅಂತ್ಯಕ್ರಿಯೆಗೆ ಮುಂದಾಗಿದ್ದರು. ಈ ವೇಳೆ ಯುವಕನ ಮೈ ಮೇಲಿದ್ದ ಗಾಯಗಳನ್ನ ಕಂಡ ಪೋಷಕರು ಅಂತ್ಯಕ್ರಿಯೆ ನಿಲ್ಲಿಸಿ, ಅನುಮಾನಾಸ್ಪದ ಸಾವೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿನಯ್(22) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ, ಎರಡು ದಿನಗಳ ಹಿಂದೆ ಚಿಲಕುಂದ ಗ್ರಾಮದಲ್ಲಿ ಸಂಬಂಧಿಕರ ಹುಟ್ಟು ಹಬ್ಬಕ್ಕೆಂದು ತೆರಳಿದ್ದ, ತೆರಳುವಾಗ ತಾಯಿಯ ಬಳಿ ಒಂದು ಸಾವಿರ ರೂಪಾಯಿ ಪಡೆದು, ಅದೇ ಹಣದಲ್ಲಿ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದ ಎನ್ನಲಾಗುತ್ತಿದೆ. ಸಂಬಂಧಿಕರ ಹುಟ್ಟು ಹಬ್ಬ ಮುಗಿಸಿಕೊಂಡು ಎರಡು ದಿನಗಳ ನಂತರ ಮನೆಗೆ ಬಂದು ಮಲಗಿದ್ದಾನೆ. ಮಾರನೇ ದಿನ ಬೆಳಗ್ಗೆ ಯುವಕ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ, ಯುವಕನ ಶವ, ಕತ್ತಿಗೆ ಸೀರೆ ಸುತ್ತಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದು, ಅದು ಸಹಜ ಸಾವೆಂದು ತಿಳಿದುಕೊಂಡ ಕುಟುಂಬ ಸದಸ್ಯರು ಅಂತ್ಯಕ್ರಿಯೆಗೆ ಮುಂದಾಗಿದ್ದರು.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಹೊಂಗೆಕಾಯಿ ಉದರಿಸುವ ನೆಪದಲ್ಲಿ ವೃದ್ದೆಯ ಮಾಂಗಲ್ಯ ಸರ ಕದ್ದ ಕಳ್ಳರು
ದೇಹದ ಮೇಲೆ ಗಾಯದ ಗುರುತುಗಳು ಪತ್ತೆ:ಯುವಕನ ಅಂತ್ಯಕ್ರಿಯೆಗೆ ಮುಂದಾಗಿದ್ದ ಕುಟುಂಬ ಸದಸ್ಯರು ಮೃತದೇಹಕ್ಕೆ ಸಾಂಪ್ರದಾಯಿಕವಾಗಿ ಸ್ನಾನ ಮಾಡಿಸುವ ವೇಳೆ ಬೆನ್ನಿನ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿವೆ. ಜೊತೆಗೆ ಬಲಗಾಲಿನಲ್ಲಿ ಯಾರೋ ಹಲ್ಲಿನಿಂದ ಕಚ್ಚಿದ ಹಾಗೇ ಗುರುತುಗಳು ಕಂಡುಬಂದಿದ್ದು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಪೋಷಕರು ಇದೊಂದು ಅನುಮಾನಾಸ್ಪದ ಸಾವೆಂದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.