ಕರ್ನಾಟಕ

karnataka

ಇಂತಹ ಘಟನೆಗಳಿಂದ ಬಿಜೆಪಿಗೆ ರಾಜಕೀಯ ಲಾಭ: ಹೆಚ್​ಡಿಕೆ ಆರೋಪ

By

Published : Jul 28, 2022, 8:14 PM IST

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

hd kumaraswamy criticize bjp govt over praveen murder case
ಹಿಂದೂ ಯುವಕರ ಕೊಲೆಯಾದರೆ ಬಿಜೆಪಿಗೆ ರಾಜಕೀಯ ಲಾಭ: ಹೆಚ್​ಡಿಕೆ ಆರೋಪ

ಮೈಸೂರು: ಇಂತಹ ಅಹಿತಕರ ಘಟನೆಗಳಿಂದ ಬಿಜೆಪಿಗೆ ರಾಜಕೀಯ ಲಾಭ ಹೆಚ್ಚು. ಮತ ಕ್ರೋಢೀಕರಣಕ್ಕಾಗಿ ಪ್ರವೀಣ್ ರೀತಿ ಮತ್ತಷ್ಟು ಕೊಲೆಗಳಾಗಲಿ ಎಂದು ಬಿಜೆಪಿ ಬಯಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಈ ರೀತಿಯ ಹತ್ಯೆಗಳು ಬಿಜೆಪಿಗೆ ರಾಜಕೀಯ ಫಸಲು. ಹಿಂದುತ್ವ ಕಾರ್ಡ್ ಆಧಾರದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಹೆಚ್ಚು ಹೆಚ್ಚು ಯುವಕರ ಕೊಲೆ ಪ್ರಕರಣಗಳು ನಡೆದಷ್ಟೂ ಅವರಿಗೆ ಅನುಕೂಲ. ಬಿಜೆಪಿ ನಾಯಕರು ಕೃತಕ ಸಂತಾಪ ಸೂಚಿಸುತ್ತಾರೆ ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ

ಯುವಕನ ತಾಯಿ ರೋಧಿಸುವುದನ್ನು ನೋಡಿದರೆ ನನಗೆ ನೋವಾಗುತ್ತದೆ ಎಂದು ಸಿಎಂ ಹೇಳಿದ್ದಾರೆ. ರೋಧನೆ ತಪ್ಪಿಸಲು ಸಾಧ್ಯ ಇರಲಿಲ್ಲವೇ ? ಒಬ್ಬ ಸರ್ಕಲ್ ಇನ್ಸ್​​ಪೆಕ್ಟರ್​ಗೆ 75 ಲಕ್ಷದಿಂದ 1 ಕೋಟಿ ರೂ ಪಡೆದು ಅವರಿಗೆ ಹುದ್ದೆ ನೀಡಿದರೆ ಅವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ನೀವು ಸರಿಯಾಗಿ ಆಡಳಿತ ಮಾಡಿದ್ದರೆ ಸಾವುಗಳು ಏಕೆ ಸಂಭವಿಸುತ್ತಿದ್ದವು? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಚುನಾವಣಾ ವೇಳೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳೇ ಇದಕ್ಕೆ ಉದಾಹರಣೆ. ಹಿಂದೆ ಚುನಾವಣೆ ಬಂದಾಗ ದೇಶದ ಎಲ್ಲಾ ಭಾಗದಲ್ಲೂ ಈ ರೀತಿಯಾಗಿದೆ. 2016ರಲ್ಲಿ ಉತ್ತರ ಪ್ರದೇಶದ ಚುನಾವಣೆ ಉದಾಹರಣೆ ನೀಡಿದ ಹೆಚ್.ಡಿ ಕುಮಾರಸ್ವಾಮಿ ಅಂದು ನಡೆದ ಕೋಮುಗಲಭೆ ಹಿಂದೆ ಯಾರಿದ್ದಾರೆ, ಏಕೆ ಆಯಿತು ಎಂಬುದು ಗೊತ್ತಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮೋದ್ ಮುತಾಲಿಕ್​ಗೆ ದ.ಕ ಜಿಲ್ಲಾ ಪ್ರವೇಶ ನಿಷೇಧ

ಬಿಜೆಪಿಯ ಬಣ್ಣ ಬಣ್ಣದ ಜಾಹೀರಾತನ್ನು ನೋಡಿ ಮುಂದುವರಿದರೆ ಮತ್ತಷ್ಟು ಕೆಟ್ಟ ಕಾಲ ಬರಲಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ. ಜೀವಕ್ಕೆ ಈ ಸರ್ಕಾರದಲ್ಲಿ ಬೆಲೆಯಿಲ್ಲ. ಧರ್ಮದ ಹೆಸರಿನಲ್ಲಿ ಸಾವುಗಳಾದರೆ ಹಿಂದೂ ಧರ್ಮದ ಬದ್ಧತೆ ಇರುವ ಕುಟುಂಬಗಳಲ್ಲಿ ಹತ್ಯೆಯಾದರೆ ಬಿಜೆಪಿಯವರಿಗೆ ರಾಜಕೀಯ ಫಸಲು ಸಿಕ್ಕಂತೆ. ಆದ್ದರಿಂದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details