ಕರ್ನಾಟಕ

karnataka

ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆ ಮಾಡಿ ಶವ ಹೂತಿಟ್ಟರು.. ಮೈಸೂರಲ್ಲಿ ಆರೋಪಿಗಳು ಅರೆಸ್ಟ್​​​

By

Published : Sep 2, 2021, 1:46 PM IST

ಆರೋಪಿಗಳು ತಾವು ಪಾರ್ಟಿ ಮಾಡುವ ಮಾಮೂಲಿ ಜಾಗವಾದ ಮೈಸೂರಿನ ಬೋಗಾದಿ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗಕ್ಕೆ ಸ್ನೇಹಿತ​​ನನ್ನು ಆಹ್ವಾನಿಸಿದ್ದಾರೆ. ಅಲ್ಲಿ ಹಣಕಾಸಿನ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

four-arrested-in-murder-case-in-mysuru
ಪಾರ್ಟಿಗೆ ಕರೆದು ಸ್ನೇಹಿತನನ್ನೇ ಹತ್ಯೆ ಮಾಡಿ ಶವ ಹೂತಿಟ್ಟ ಆರೋಪಿಗಳು ಅರೆಸ್ಟ್​​​

ಮೈಸೂರು: ಗೆಳೆಯನನ್ನು ಪಾರ್ಟಿಗಾಗಿ ಕರೆಸಿ ಮಾರಕಾಸ್ತ್ರಗಳಿಂದ ನಾಲ್ವರು ಸ್ನೇಹಿತರೇ ಸೇರಿಕೊಂಡು ಹತ್ಯೆ ಮಾಡಿರುವ ಆರೋಪ ಪ್ರಕರಣ ನಗರದ ಬೋಗಾದಿ ರಸ್ತೆಯಲ್ಲಿ ನಡೆದಿದೆ. ನಗರದ ಟಿ.ಕೆ. ಬಡಾವಣೆಯ ನಿವಾಸಿ ನಾಗರತ್ನ ಎಂಬುವರ ಮಗ ಉಮೇಶ್ (24) ಹತ್ಯೆಗೀಡಾದ ಯುವಕ ಎಂದು ತಿಳಿದುಬಂದಿದೆ.

ಮೃತನ ಸ್ನೇಹಿತರಾದ ಟಿ.ಕೆ. ಬಡಾವಣೆಯ ನಿವಾಸಿಗಳಾದ ಪೃಥ್ವಿರಾಜ್‌ (23), ವಸಂತ(24), ಮಂಜೇಶ್(23) ಹಾಗೂ ಮಾನಸ ಗಂಗೋತ್ರಿ ನಿವಾಸಿ (24) ಎಂಬುವರು ಉಮೇಶ್​ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪಿಗಳು. ಇವರನ್ನು ವಾರದ ಬಳಿಕ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

ಕೊಲೆಗೆ ಕಾರಣವಾಯ್ತು ವೈಮನಸ್ಸು:

ಉಮೇಶ್ ಹಾಗೂ ಆರೋಪಿಗಳ ನಡುವೆ ಹಣಕಾಸು ವಿಚಾರ ಸಂಬಂಧ ಇದ್ದ ವೈಮನಸ್ಸು ಕೊಲೆಗೆ ಕಾರಣವಾಗಿದೆ. ಆಗಸ್ಟ್ 25ರ ರಾತ್ರಿ ಆರೋಪಿಗಳು ತಾವು ಪಾರ್ಟಿ ಮಾಡುವ ಮಾಮೂಲಿ ಜಾಗವಾದ ಬೋಗಾದಿ ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಖಾಲಿ ಜಾಗಕ್ಕೆ ಉಮೇಶ್​​ನನ್ನು ಆಹ್ವಾನಿಸಿದ್ದಾರೆ. ಆಗ ಹಣಕಾಸಿನ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಮಾರಕಾಸ್ತ್ರಗಳಿಂದ ಉಮೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಅಲ್ಲಿಯೇ ಪೊದೆಯ ಬಳಿ ಹೊಂಡ ತೋಡಿ ಶವವನ್ನು ಹೂತು ಹಾಕಿ ತೆರಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹೂತಿಟ್ಟ ಶವವನ್ನು ಹೊರತೆಗೆದು ಪೊಲೀಸರು ಮಹಜರು ಮಾಡಿದ್ದಾರೆ. ಸರಸ್ವತಿ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Mysuru Gang Rape: ತಿರುಪೂರದಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು

ABOUT THE AUTHOR

...view details