ಕರ್ನಾಟಕ

karnataka

ಅದ್ಧೂರಿ ಮೈಸೂರು ದಸರಾಗೆ ಸಂಭ್ರಮದ ತೆರೆ

By ETV Bharat Karnataka Team

Published : Oct 24, 2023, 10:52 PM IST

Updated : Oct 24, 2023, 11:03 PM IST

ಹತ್ತು ದಿನಗಳ ಕಾಲ ನಡೆದ ಮೈಸೂರು ದಸರಾಗೆ ಇಂದು ಸಂಭ್ರಮದ ತೆರೆ ಬಿತ್ತು.

ಜಂಬೂ ಸವಾರಿ
ಜಂಬೂ ಸವಾರಿ

ಮೈಸೂರು:ಹತ್ತು ದಿನಗಳ ಕಾಲ ನಡೆದ ಮೈಸೂರು ದಸರಾಗೆ ಮಂಗಳವಾರ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ತೆರೆ ಬಿದ್ದಿದೆ. ಜಂಬೂಸವಾರಿಯ ದಿನ ನಡೆದ ಪ್ರಮುಖ ಘಟನಾವಳಿಗಳ ವಿವರ ಇಲ್ಲಿದೆ.

ದಸರಾ ಮಹೋತ್ಸವದ ಕಡೆಯ ದಿನ ಅರಮನೆಯಲ್ಲಿ ಜಂಬೂಸವಾರಿಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಮಧ್ಯಾಹ್ನ 01.46 ರಿಂದ 02.08 ಗಂಟೆ, ಶುಭ ಮಕರ ಲಗ್ನದಲ್ಲಿ ಅರಮನೆ ಮುಂಭಾಗದ ಬಲರಾಮ ದ್ವಾರದ ಬಳಿ ಇರುವ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಹಂಸಲೇಖ ಸೇರಿದಂತೆ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ಸಿಎಂ ಹಾಗೂ ಡಿಸಿಎಂ ಅರಮನೆ ಮುಂಭಾಗದ ಪುಷ್ಪಾರ್ಚನೆ ಮಾಡುವ ಸ್ಥಳದಲ್ಲಿ ಕುಳಿತರು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್

ನಂತರ ನಂದಿಧ್ವಜ ಪೂಜೆಯ ನಂತರ ಕಲಾ ತಂಡಗಳು ಹಾಗೂ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಯಿತು. ಸಂಜೆ 4.40 ರಿಂದ 5 ಗಂಟೆಗೆ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಬೇಕಿತ್ತು. ಆದರೆ 5.9 ಸಿದ್ದರಾಮಯ್ಯ, ಡಿ.ಕೆ‌.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ನ್ಯಾಯಾಧೀಶರು ಭಾಗವಹಿಸಿದ್ದರು.

ಜಂಬೂಸವಾರಿ ಅರಮನೆಯ ಬಲರಾಮ ಗೇಟ್ ಮೂಲಕ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪವನ್ನು ಸುರಕ್ಷಿತವಾಗಿ ಸೇರಿತು. ಅಲ್ಲಿಂದ ಚಿನ್ನದ ಅಂಬಾರಿಯನ್ನ ಲಾರಿ ಮೂಲಕ ಅರಮನೆಗೆ ತರಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆ ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆಯನ್ನು ಮುಗಿಸಿದ್ದು. ಅಭಿಮನ್ಯು ಆನೆ ನಾಲ್ಕನೇ ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಮುಗಿಸಿತು.

ಜಂಬೂ ಸವಾರಿ

ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾಡಿಗೆ ದಸರಾದ ವಿಜಯದಶಮಿ ಶುಭಾಶಯ ಕೋರಿದರು. ಬರದ ನಡುವೆಯೂ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಾಗಿದ್ದು, ಸರ್ಕಾರ ಉಚಿತ ಬಸ್ ಸೇವೆ ಶಕ್ತಿ ಯೋಜನೆಯಿಂದ ಈ ಬಾರಿ 10 ಲಕ್ಷಕ್ಕೂ ಹೆಚ್ಚು ಮಂದಿ ಈ ಬಾರಿ ದಸರಾದಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು. ಹಿಂಗಾರು ಮಳೆ ಆದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಲಿದೆ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಜಂಬೂಸವಾರಿ: ಜಂಬೂಸವಾರಿ ಮೆರವಣಿಗೆಯಲ್ಲಿ 47 ಸ್ತಬ್ಧಚಿತ್ರಗಳು, 95 ಕಲಾತಂಡಗಳು ಹಾಗೂ ವಿವಿಧ ಇಲಾಖೆಯ ಸ್ತಬ್ಧ ಚಿತ್ರಗಳು ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಳಿಸಿದವು. ಜೊತೆಗೆ ಜಂಬೂಸವಾರಿ ಮೆರವಣಿಗೆಯ ಜೊತೆ ರಾಜ ಪರಂಪರೆಯ ರೀತಿಯ ವೈಭವದ ಧಿರಿಸನ್ನ ಧರಿಸಿ ಜಂಬೂಸವಾರಿ ಹಿಂದೆ 200 ಕ್ಕೂ ಹೆಚ್ಚು ಮಂದಿ ಸಾಗಿದ್ದು ವಿಶೇಷವಾಗಿತ್ತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಗಜಪಡೆಗಳಿಗೆ ವಿಶೇಷ ರೀತಿಯ ಅಲಂಕಾರ ಮಾಡಲಾಗಿತ್ತು. ಇದು ಜಂಬೂಸವಾರಿ ಮೆರವಣಿಗೆಗೆ ಮೆರುಗು ತಂದಿತ್ತು.

ಕಲಾತಂಡ

ಈ ಬಾರಿ ದಸರಾಗೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 6 ಸಾವಿರ ಪೊಲೀಸರನ್ನು ಜಂಬೂಸವಾರಿ ಸಾಗುವ ಮಾರ್ಗದಲ್ಲಿ ನಿಯೋಜನೆ ಮಾಡಲಾಗಿತ್ತು. ಒಬ್ಬ ಡಿಐಜಿ, 8 ಮಂದಿ ಎಸ್ಪಿಗಳು, 10 ಮಂದಿ ಅಡಿಷನಲ್ ಎಸ್ಪಿಗಳು, ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಬಿಗಿಯಾದ ಪೊಲೀಸ್​ ಬಂದೋಬಸ್ತ್ ಹಾಕಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಯಾಗಿ ಜಂಬೂಸವಾರಿ ಮೆರವಣಿಗೆ ಮುಕ್ತಾಯವಾಯಿತು. ಹೀಗೆ 10 ದಿನಗಳ ಕಾಲ ನಡೆದ ಅದ್ದೂರಿ ನವರಾತ್ರಿ ಇಂದು ಸಂಭ್ರಮದ ಜಂಬೂಸವಾರಿ ಮೆರವಣಿಗೆಯೊಂದಿಗೆ ಮುಕ್ತಾಯವಾಯಿತು.

ಇದನ್ನೂ ಓದಿ:ಜಂಬೂಸವಾರಿ ಮೆರವಣಿಗೆಗೆ ಸ್ತಬ್ಧಚಿತ್ರಗಳು, ಕಲಾತಂಡಗಳ ಮೆರುಗು: ವಿಡಿಯೋ

Last Updated : Oct 24, 2023, 11:03 PM IST

ABOUT THE AUTHOR

...view details