ಕರ್ನಾಟಕ

karnataka

ಮೈಸೂರು ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

By ETV Bharat Karnataka Team

Published : Oct 15, 2023, 7:18 PM IST

ಮೈಸೂರಿನಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಿದರು.

ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ವಿದ್ಯುಕ್ತ ಚಾಲನೆ
ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ವಿದ್ಯುಕ್ತ ಚಾಲನೆ

ಮೈಸೂರು : ಕುಸ್ತಿ ಗದೆ ಎತ್ತುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿದರು. ನಗರದ ವಸ್ತು ಪ್ರದರ್ಶನ ಪ್ರಾಧಿಕಾರದ ದೇವರಾಜು ಅರಸು ವಿವಿದೋದ್ದೇಶ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ vs ದೆಹಲಿಯ ಪೈಲ್ವಾನ್ವಿ ವಿಕಿ ಅವರ ನಡುವೆ ನಡೆದ ಕುಸ್ತಿ ಪಂದ್ಯವನ್ನು ಸಿಎಂ ವೀಕ್ಷಿಸಿದರು. ನಂತರ ಕುಸ್ತಿಪಟು ಚಿಕ್ಕಳಿಯ ಪೈಲ್ವಾನ್ ರವಿ ಮತ್ತು ಪೈಲ್ವಾನ್ ಪವನ್ ಅವರ ನಡುವೆ ಪಂದ್ಯ ನಡೆಯಿತು.

ಆರಂಭಿಕ ಕುಸ್ತಿ ಪಂದ್ಯಾವಳಿಯು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ vs ದೆಹಲಿಯ ಪೈಲ್ವಾನ್ವಿ ವಿಕಿ, ಬೆಳಗಾಂನ ಸುನಿಲ್ ಪಡುತಾರೆ vs ಪೈಲ್ವಾನ್ ರಾಹುಲ್ ರಾಟೆ ನಡುವೆ ನಡೆಯಲಿದೆ. ಬಾಲಕಿಯರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ಜಾಹ್ನವಿ vs ಮಂಡ್ಯದ ಪೈಲ್ವಾನ್ ಸ್ಫೂರ್ತಿ ಹಾಗೂ ರಮನಹಳ್ಳಿಯ ಪೈಲ್ವಾನ್ ಸಿಂಚನ vs ಮಂಡ್ಯದ ಅಮೂಲ್ಯ ನಡುವೆ ಕುಸ್ತಿ ಪ್ರಾರಂಭಗೊಂಡವು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಶಾಸಕರಾದ ಶ್ರಿವತ್ಸ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಡಿ.ರವಿಶಂಕರ್, ಕೃಷ್ಣಮೂರ್ತಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ವಿಧಾನ ಪರಿಷತ್ ಶಾಸಕರಾದ ಮಂಜೇಗೌಡ, ತಿಮ್ಮಯ್ಯ, ಮಹಾಪೌರರಾದ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಆಯುಕ್ತ ರಮೇಶ್, ಬಿ.ಸೀಮಾ ಲಾಟ್ಕರ್, ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ, ಉಪ ಮಹಾಪೌರರಾದ ಜಿ.ರೂಪ, ನಂಜನಗೂಡು ಪೊಲೀಸ್ ಅಧೀಕ್ಷಕ ಗೋವಿಂದರಾಜು ಹಾಗೂ ದಸರಾ ಕುಸ್ತಿ ಸಮಿತಿಯ ಅಧಿಕಾರಿಗಳು ಭಾಗವಹಿಸಿದ್ದರು.

ಯದುವೀರ್ ಖಾಸಗಿ ದರ್ಬಾರ್: ಶರನ್ನವರಾತ್ರಿಯ ಮೊದಲ ದಿನ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಪೂಜೆ ಹಾಗೂ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಿತು.

ಅರಮನೆಯಲ್ಲಿ ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಶರನ್ನವರಾತ್ರಿಯ ಪೂಜೆಗಳು ಆರಂಭವಾದವು. 6ರಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಗಣಪತಿ ಹೋಮ ಸೇರಿದಂತೆ ಹಲವು ಹೋಮಗಳು ನೆರವೇರಿದವು. 7.05ರಿಂದ 07.45ರ ನಡುವೆ ಯದುವೀರ್ ಒಡೆಯರ್ ಹಾಗೂ ರಿಷಿಕಾ ಒಡೆಯರ್ ಅವರಿಗೆ ಕಂಕಣ ಧಾರಣೆಯಾಯಿತು. ಇದಕ್ಕೂ ಮೊದಲು ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿಗೆ ಆನೆ ಬಾಗಿಲಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ನವರಾತ್ರಿಯ ಪೂಜೆಗಳು ರಾಜ ಪರಂಪರೆಯಂತೆ ನೆರವೇರಿದವು.

ಇದನ್ನೂ ಓದಿ:ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ: ರತ್ನಖಚಿತ ಸಿಂಹಾಸನದಲ್ಲಿ ಯದುವೀರ್ ಖಾಸಗಿ ದರ್ಬಾರ್

ABOUT THE AUTHOR

...view details