ಕರ್ನಾಟಕ

karnataka

ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವಕ್ಕೆ ಚಾಲನೆ ನೀಡಿದ ರಾಜ ವಂಶಸ್ಥರು

By ETV Bharat Karnataka Team

Published : Oct 26, 2023, 1:53 PM IST

Updated : Oct 26, 2023, 2:27 PM IST

ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ದತ್ತ ಒಡೆಯರ್​ ಚಾಲನೆ ನೀಡಿದರು.

ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವ
ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವ

ಚಾಮುಂಡೇಶ್ವರಿ ವಾರ್ಷಿಕ ರಥೋತ್ಸವ

ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ವಾರ್ಷಿಕ ರಥೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥರಾದ ಯದುವೀರ ಒಡೆಯರ್ ಚಾಲನೆ ನೀಡಿದರು. ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿದ್ದವು. ಬೆ.7:50 ರಿಂದ 8:10 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ರಾಜವಂಶಸ್ಥರಾದ ಯದುವೀರ ಒಡೆಯರ್ ರಥೋತ್ಸವಕ್ಕೆ ಚಾಲನೆ ನೀಡಿದರು.

ನವರಾತ್ರಿ ನಂತರ ಬರುವ ಹಾಗೂ ವಿಜಯದಶಮಿಯ ಜಂಬೂಸವಾರಿಯ ಶುಭ ಮುಹೂರ್ತದಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಯ ರಥೋತ್ಸವ ಇದಾಗಿದೆ. ರಥೋತ್ಸವಕ್ಕೂ ಮುನ್ನ ಚಾಮುಂಡಿ ಬೆಟ್ಟದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು. ನಂತರ ರಥೋತ್ಸವ ನಡೆಯಿತು. ರಥ ಚಾಮುಂಡಿ ಬೆಟ್ಟದ ಸುತ್ತಲೂ ಒಂದು ಸುತ್ತು ಸುತ್ತುವ ವೇಳೆ 21 ಸುತ್ತು ಸಿಡಿ ಮದ್ದನ್ನ ಸಿಡಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಇದಾದ ಬಳಿಕ ರಥಕ್ಕೆ ಭಕ್ತರು ಹಣ್ಣು ಜವನ ಎಸೆದು ಚಾಮುಂಡೇಶ್ವರಿ ತಾಯಿಗೆ ಜೈ ಕಾರ ಹಾಕಿ ರಥವನ್ನು ಎಳೆದು ಪುನೀತರಾದರು. ಆ ಬಳಿಕ ಚಾಮುಂಡೇಶ್ವರಿ ತಾಯಿಯ ಮೂಲ ಮೂರ್ತಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿ ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಮಾತೆ ಪ್ರಮೋದ ದೇವಿ ಒಡೆಯರ್, ಚಾಮುಂಡೇಶ್ವರಿ ಅಮ್ಮನವರ ರಥೋತ್ಸವದ ದಿನ ಅಮ್ಮನವರ ದರ್ಶನ ಪಡೆದರೆ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿಂದ ದೇಶದ ಎಲ್ಲ ಭಾಗಗಳಿಂದಲೂ ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆಯುತ್ತಾರೆ. ನಾವು ಸಹ ರಥೋತ್ಸವದಲ್ಲಿ ಭಾಗಿಯಾಗಿ ನಮ್ಮ ನಾಡು ಸುಭಿಕ್ಷವಾಗಲಿ ಎಂದು ಬೇಡಿಕೊಂಡಿದ್ದೇವೆ. ಜೊತೆಗೆ ಮಳೆ, ಬೆಳೆ ಮುಂದೆಯಾದರು ಆಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಪ್ರಮೋದಾ ದೇವಿ ಒಡೆಯರ್ ಹೇಳಿದರು.

ಈ ಸಂದರ್ಭದಲ್ಲಿ ಚಾಮುಂಡೇಶ್ವರಿಯವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ರಾಜವಂಶ ಯದುವೀರ್ ಒಡೆಯರ್, ಇಂದು ಅಮ್ಮನವರ ವಾರ್ಷಿಕ ರಥೋತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾಂಪ್ರದಾಯದ ರೀತಿಯಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದಿದ್ದು ಎಲ್ಲ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಗಿದೆ. ನಾಡಿನ ಜನರಿಗೆ ಆಯುರ್​​​- ಆರೋಗ್ಯ, ಆಯುಷ್ಯ ನೀಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದರು.

ಮೊನ್ನೆಯಷ್ಟೇ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಅದ್ದೂರಿಯಾಗಿ ನಡೆದಿತ್ತು, ಇದರಲ್ಲಿ ರಾಜ್ಯ ಹೊರ ರಾಜ್ಯ ಸೇರಿದಂತೆ ಹಲವಾರು ಭಕ್ತರು ಭಾಗಿಯಾಗಿದ್ದರು.

ಇದನ್ನೂ ಓದಿ:ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆದ 'ಚಂದ್ರಯಾನ-3' ಕಲಾಕೃತಿ: ವಿಡಿಯೋ

Last Updated :Oct 26, 2023, 2:27 PM IST

ABOUT THE AUTHOR

...view details