ಕರ್ನಾಟಕ

karnataka

ಪ್ರತ್ಯೇಕ ಘಟನೆ: KSRTC ಬಸ್​ಗೆ ಬಾಲಕ ಬಲಿ.. ಕಾರು ಗುದ್ದಿ ಅಪರಿಚಿತ ವ್ಯಕ್ತಿ ಸಾವು

By

Published : Jun 15, 2023, 4:06 PM IST

ಸೈಕಲ್​ನಲ್ಲಿ ತೆರಳುತ್ತಿದ್ದ ಬಾಲಕನಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

two-killed-in-separate-road-accidents-in-mandya
ಪ್ರತ್ಯೇಕ ಘಟನೆ...KSRTC ಬಸ್​ಗೆ ಬಾಲಕ ಬಲಿ : ಕಾರು ಗುದ್ದಿ ಅಪರಿಚಿತ ವ್ಯಕ್ತಿ ಸಾವು

ಮಂಡ್ಯ: ಸೈಕಲ್​​ನಲ್ಲಿ ತೆರಳುತ್ತಿದ್ದ ಬಾಲಕನಿಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದ ಕನಕಪುರ ರಸ್ತೆಯಲ್ಲಿ ಇಂದು ನಡೆದಿದೆ. ಮಳವಳ್ಳಿಯ ವಿನುಶ್ ಗೌಡ(10) ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಪೊಲೀಸರು ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಳವಳ್ಳಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌‌‌‌ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿ ಸಾವು :ಕಾರು ಡಿಕ್ಕಿಯಾಗಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯ ಮದ್ದೂರು ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಕಳೆದ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯ ಮೃತದೇಹ ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಮದ್ದೂರು ಪಟ್ಟಣದ ಕೆ. ಕೋಡಿಹಳ್ಳಿ ಗ್ರಾಮದ ಬಳಿ ರಾತ್ರಿ 10.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಬೈಪಾಸ್ ರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ಮೈಸೂರಿನಿಂದ ಬೆಂಗಳೂರಿಗೆ ವೇಗವಾಗಿ ತೆರಳುತ್ತಿದ್ದ ಕಾರು ಡಿಕ್ಕಿ ವ್ಯಕ್ತಿಗೆ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿ ಕಾರಿನ ಮೇಲೆ ಬಿದ್ದಿದ್ದು, ಬಳಿಕ ಹೆದ್ದಾರಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.

ಈ ವೇಳೆ ವೇಗವಾಗಿ ಬಂದ ಇತರ ವಾಹನಗಳು ವ್ಯಕ್ತಿಯ ಮೃತದೇಹದ ಮೇಲೆ ಹರಿದ ಪರಿಣಾಮ ದೇಹದ ಭಾಗಗಳು ಚಲ್ಲಾಪಿಲ್ಲಿಯಾಗಿ ಹೆದ್ದಾರಿಯಲ್ಲಿ ಹರಡಿಕೊಂಡಿದೆ. ಇದರಿಂದಾಗಿ ಶವದ ಗುರುತನ್ನು ಪತ್ತೆ ಹಚ್ಚಲು ಕಷ್ಟವಾಗಿದೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಹಾಗೂ ಸಂಚಾರಿ ಠಾಣಾ ಪೊಲೀಸರು ದೇಹದ ಭಾಗಗಳನ್ನು ಹೆದ್ದಾರಿಯಿಂದ ತೆರವುಗೊಳಿಸಿ ಮಂಡ್ಯ ಮಿಮ್ಸ್ ನ ಶವಾಗಾರಕ್ಕೆ ರವಾನಿಸಿದ್ದಾರೆ.

ಈ ಪ್ರಕರಣ ಸಂಬಂಧ ಸಂಚಾರಿ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೊತೆಗೆ ಕಾರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಮಂಡ್ಯ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಯಾರಾದರೂ ಕಾಣೆಯಾಗಿದ್ದರೆ ಅಥವಾ ದೂರು ದಾಖಲಾಗಿದ್ದರೆ, ಸಂಬಂಧ ಪಟ್ಟವರು ಇಲ್ಲಿಗೆ ಬಂದು ಪರಿಶೀಲನೆ ಮಾಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ :ರಸ್ತೆ ಬದಿ ನಿಂತಿದ್ದ ಕ್ಯಾಂಟರ್​ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿ , ಓರ್ವ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದ ಘಟನೆ ಜೂನ್​ 13 ರಂದು ಕೊಪ್ಪಳ ಜಿಲ್ಲೆ ವಣಗೇರಿ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿತ್ತು. ಅಪಘಾತದಲ್ಲಿ ವಿಜಯಪುರ ಮೂಲದ, ಕಲ್ಲೂರಿನ ಭೋಜಪ್ಪ ಚವ್ಹಾಣ (27), ಬಿದರಕುಂದಿಯ ಗೌರಮ್ಮ ಕನ್ನೂರ(43), ಸುರೇಶ ಹಂಡರಗಲ್( 60) ಮೃತಪಟ್ಟಿದ್ದರು. ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಿಸಿದ ಹಿನ್ನೆಲೆ ಅಪಘಾತ ಸಂಭವಿಸಿರುವುದಾಗಿ ಹೇಳಲಾಗಿತ್ತು. ಈ ಸಂಬಂಧ ಕುಷ್ಟಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಶಿವಮೊಗ್ಗದಲ್ಲಿ ಮಾರಾಕಾಸ್ತ್ರದಿಂದ ಕೊಚ್ಚಿ ಯುವಕನ‌‌ ಕೊಲೆ: ಪ್ರಮುಖ ಆರೋಪಿ ಬಂಧನ

ABOUT THE AUTHOR

...view details