ಮಂಡ್ಯ:ವಿಧಾನಸಭೆ ಚುನಾವಣೆ ಬೆನ್ನಲ್ಲೇ ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರಾ? ಎಂಬ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಮಂಡ್ಯದ ಕರ್ನಾಟಕ ಸಂಘದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸುಮಲತಾ ಬೆಂಬಲಿಗರು ಹಾಗೂ ಕಾರ್ಯಕರ್ತರು ರಾಜ್ಯ ರಾಜಕೀಯಕ್ಕೆ ಬರುವಂತೆ ಅವರನ್ನು ಒತ್ತಾಯಿಸಿದ್ದಾರೆ.
ಅಲ್ಲದೇ ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇಂತಿಷ್ಟು ಜನರು ಸುಮಲತಾ ಕಾಂಗ್ರೆಸ್ ಸೇರಬೇಕೆಂದು ಒತ್ತಾಯಿಸಿದ್ರೆ, ಇನ್ನುಳಿದವರು ಬಿಜೆಪಿ ಪರ ನಿಂತಿದ್ದಾರೆ. ಹೀಗಾಗಿಯೇ ಸುಮಲತಾ ಅಂಬರೀಶ್ ಅವರು ಒಂದು ವೇಳೆ ರಾಜ್ಯ ರಾಜಕಾರಣಕ್ಕೆ ಮರಳಿದರೆ ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ? ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಹಾಗೇನಾದರೂ ಆದರೆ ಸುಮಲತಾ ಅವರ ಆಯ್ಕೆ ಮಂಡ್ಯ ಕ್ಷೇತ್ರ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ಮಂಡ್ಯ ಜಿಲ್ಲೆಯು ಸುಮಲತಾ ಅವರ ಪತಿ ಅಂಬರೀಶ್ ಪ್ರತಿನಿಧಿಸುತ್ತಿದ್ದ ಕ್ಷೇತ್ರವಾಗಿದ್ದು, ಸುಮಾರು 25 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಛಾಪು ಮೂಡಿಸಿದ್ದರು. ಹಾಗಾಗಿ ಈ ಕ್ಷೇತ್ರದಿಂದಲೇ ಸುಮಲತಾ ಕಣಕ್ಕಿಳಿಯುತ್ತಾರೆ ಎನ್ನುವ ಲೆಕ್ಕಾಚಾರವಿದೆ. ಅಲ್ಲದೇ ಸುಮಲತಾ ಕಾಂಗ್ರೆಸ್ ಪಕ್ಷವನ್ನೇ ಆಯ್ದುಕೊಂಡಲ್ಲಿ ಸುಲಭವಾಗಿ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಆದರೆ ಬೆಂಬಲಿಗರ ಸಭೆಯಲ್ಲಿ ಪಕ್ಷದ ನಿರ್ಣಯವನ್ನು ಅಂತಿಮವಾಗಿ ಸುಮಲತಾ ಅವರ ನಿರ್ಧಾರಕ್ಕೆ ಬಿಡಲಾಯಿತು. ಯಾವುದೇ ಪಕ್ಷ ಸೇರ್ಪಡೆಯಾದ್ರೂ ಬೆಂಬಲಿಸುತ್ತೇವೆ ಎಂದು ಎಲ್ಲರೂ ಕೈ ಚಾಚಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ:ನನ್ನ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ.. ಸಂಸದೆಗೆ ಶಾಸಕ ಪುಟ್ಟರಾಜು ತಿರುಗೇಟು