ಕರ್ನಾಟಕ

karnataka

ಕೌಟುಂಬಿಕ ಕಲಹ: ಪತ್ನಿ ಕೊಂದು ಪೊಲೀಸರಿಗೆ ಶರಣಾದ ಪತಿ

By ETV Bharat Karnataka Team

Published : Dec 13, 2023, 4:47 PM IST

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾರೆ.

ಮಂಡ್ಯ
ಮಂಡ್ಯ

ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಧುಶ್ರೀ (32) ಪತಿಯಿಂದ ಕೊಲೆಯಾದ ಮಹಿಳೆ. ಮಹದೇವ್ (38) ಕೊಲೆ ಮಾಡಿದವರು ಎಂಬುದಾಗಿ ತಿಳಿದು ಬಂದಿದೆ.

ದಂಪತಿ ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ 8 ವರ್ಷ ಹಾಗೂ 6 ವರ್ಷದ ಇಬ್ಬರು ಪುತ್ರಿಯರಿದ್ದಾರೆ. ಮಹದೇವ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮನಸ್ತಾಪದಿಂದ ಆಗಾಗ ದಂಪತಿ ನಡುವೆ ಕಲಹ ನಡೆಯುತ್ತಿತ್ತು. ನಿನ್ನೆ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಪತ್ನಿಗೆ ಕಬ್ಬಿಣದ ರಾಡು ಹಾಗೂ ಕಟ್ಟಿಗೆಯಿಂದ ತಲೆಗೆ ಹಲ್ಲೆ ನಡೆಸಿದ್ದಾರೆ. ಇದರಿಂದ ಮಹಿಳೆ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ಪರಿಣಾಮ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಕೊಲೆ ಮಾಡಿದ ನಂತರ ಆರೋಪಿ ಮಹದೇವ್​ ಕಿರುಗಾವಲು ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆತ್ತ ಅಪ್ಪ- ಅಮ್ಮನನ್ನೇ ಹೊಡೆದು ಕೊಂದ ಮಗ (ಪ್ರತ್ಯೇಕ ಘಟನೆ) : ಹೆಣ್ಣು ಮಕ್ಕಳಿಗೆ ಆಸ್ತಿ ಕೊಡುತ್ತಾರೆ ಎಂಬ ಕೋಪಕ್ಕೆ ಮಗನೇ ಹೆತ್ತವರನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ (ಡಿಸೆಂಬರ್- 11-2023) ಕೇಳಿ ಬಂದಿತ್ತು. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಪ್ರಕರಣ ನಡೆದಿದ್ದು, ವಯೋವೃದ್ಧ ದಂಪತಿಗಳಾದ ರಾಮಕೃಷ್ಣಪ್ಪ (70) ಮುನಿರಾಮಕ್ಕ (65) ಕೊಲೆಯಾಗಿರುವವರು. ಹೆತ್ತವರನ್ನು ಕೊಂದ ಆರೋಪದಲ್ಲಿ ಮಗ ನರಸಿಂಹಮೂರ್ತಿಯನ್ನ ಸೂಲಿಬೆಲೆ ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರಕರಣಕ್ಕೆ ಕಾರಣ : ಕೊಲೆಯಾದ ರಾಮಕೃಷ್ಣಪ್ಪ ಹಾಗೂ ಮುನಿರಾಮಕ್ಕ ದಂಪತಿಗೆ ಐದು ಜನ ಮಕ್ಕಳು. ಐದು ಜನ ಮಕ್ಕಳ‌ ಪೈಕಿ ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಒಬ್ಬನೇ ಗಂಡು ಮಗ. ಆ ಕುಲಪುತ್ರನೇ ಈ ನರಸಿಂಹಮೂರ್ತಿ. ಮದುವೆಯಾದಗಿನಿಂದ‌ ಬೇರೆ ಮನೆಯಲ್ಲಿ ವಾಸವಾಗಿದ್ದ. ಆಸ್ತಿ ಭಾಗ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಮತ್ತು ಹೆತ್ತವರ ನಡುವೆ ಜಗಳವಾಗುತ್ತಿತ್ತು. ಹೆಣ್ಣು ಮಕ್ಕಳಿಗೆಲ್ಲ‌ ಮದುವೆ ಮಾಡಿಕೊಡಲಾಗಿದ್ದು, ಯಾವುದೇ ಆಸ್ತಿಯನ್ನು ಭಾಗ ಮಾಡುವಂತಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ನರಸಿಂಹಮೂರ್ತಿ, ಆಸ್ತಿ ವಿಚಾರಕ್ಕೆ ಹಲವು ವರ್ಷಗಳಿಂದ ತಂದೆ ತಾಯಿಗೆ ಹಿಂಸೆಯನ್ನು ನೀಡುತ್ತಿದ್ದ.

ಆದರೆ, ಹೆಣ್ಣು ಮಕ್ಕಳಿಗೆ ಆಸ್ತಿ ಭಾಗ ನೀಡಬೇಕು ಎಂಬುದು ವೃದ್ಧ ದಂಪತಿಯ ಆಸೆಯಾಗಿತ್ತು. ಇದೇ ವಿಚಾರವಾಗಿ ತಂದೆ ತಾಯಿ ವಾಸವಿದ್ದ ಮನೆಗೆ ಹೋಗಿದ್ದ ನರಸಿಂಹಮೂರ್ತಿ, ಹೆತ್ತವರೊಂದಿಗೆ ಜಗಳ ಮಾಡಿ, ತಂದೆ ರಾಮಕೃಷ್ಣಪ್ಪ ಮತ್ತು ತಾಯಿ ಮುನಿರಾಮಕ್ಕ ತಲೆಗೆ ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದ.

ಇದನ್ನೂ ಓದಿ:ಆಸ್ತಿ ಕಲಹ: ಹೆತ್ತ ಅಪ್ಪ-ಅಮ್ಮನನ್ನೇ ಹೊಡೆದು ಕೊಂದ ಮಗ

ABOUT THE AUTHOR

...view details