ಕರ್ನಾಟಕ

karnataka

ಲೋಕಸಭಾ ಚುನಾವಣೆ ಬಿಟ್ಟು, ಉಳಿದೆಲ್ಲ ಚುನಾವಣೆಯಲ್ಲಿ ಆಪ್​ ಸ್ವತಂತ್ರ ಸ್ಪರ್ಧೆ: ಮುಖ್ಯಮಂತ್ರಿ ಚಂದ್ರು

By ETV Bharat Karnataka Team

Published : Oct 12, 2023, 10:39 PM IST

Updated : Oct 13, 2023, 1:56 PM IST

ರಾಜ್ಯದಲ್ಲಿನ ಮೂರು ಪಕ್ಷಗಳ ಜನ ವಿರೋಧಿ ನೀತಿಯ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದು ಆಪ್​ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು

ಕೊಪ್ಪಳ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಮ್​​ ಆದ್ಮಿ ಪಕ್ಷ ಇಂಡಿಯಾ ಘಟಬಂಧನ್ ಜತೆ ಗುರುತಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಮೂರು ಪಕ್ಷಗಳ ಜನ ವಿರೋಧಿ ನೀತಿಯ ಬಗ್ಗೆ ತಿಳಿಸಬೇಕಿದೆ. ಉಳಿದೆಲ್ಲ ಚುನಾವಣೆಗಳಲ್ಲಿ ನಾವು ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ನನ್ನ ಆಶಯ ಎಂದು ಆಪ್​ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಸ್ಪರ್ಧಿಸುವ ಬಗ್ಗೆ ಕಾರ್ಯಕರ್ತರಿಗೆ ಗೊಂದಲ ಆಗಬಾರದು. ಅ.14ರಂದು ದೆಹಲಿಗೆ ತೆರಳುತ್ತಿದ್ದು, ವರಿಷ್ಠರೊಂದಿಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳುವೆ. ನಾನೀಗ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಲು ಮುಂದಾಗಿರುವೆ. ನಾಲ್ಕಾರು ಹಳ್ಳಿಗಳ ಜನರನ್ನು ಸೇರಿಸಿ ಅವರ ಬಳಿ ಚರ್ಚಿಸಿ ಮೂರು ಪಕ್ಷಗಳನ್ನು ತಿರಸ್ಕರಿಸುವಂತೆ ಮನವಿ ಮಾಡುತ್ತಿದ್ದೇವೆ. ಜನತೆಗೆ ಪರ್ಯಾಯ ಪಕ್ಷ ಬೇಕೆನಿಸಿದಲ್ಲಿ ನಾವಿದ್ದೇವೆ ಎಂಬ ಸಂದೇಶ ಸಾರುತ್ತಿದ್ದೇವೆ ಎಂದರು.

ಆಪ್​ನಿಂದ ಬದಲಾವಣೆ ಸಾಧ್ಯ:ಉತ್ತರ ಭಾರತದಲ್ಲಿ ಮಾಡಿದಂತೆ ನಾವು ಇಲ್ಲಿ ಸದ್ಯಕ್ಕೆ ಕ್ರಾಂತಿ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಆದರೆ, ಬದಲಾವಣೆ ಮಾಡುತ್ತೇವೆ. ಹಣ, ಜಾತಿ, ಅಧಿಕಾರದಲ್ಲಿ ವಿಪಕ್ಷಗಳಷ್ಟು ನಾವು ಬಲಾಢ್ಯರಿಲ್ಲ. ಹೀಗಾಗಿ ಹಳ್ಳಿಗಳಿಗೆ ತೆರಳಿ ಜನರನ್ನು ಸಂಘಟಿಸುತ್ತಿದ್ದೇವೆ. ಒಂದೊಂದು ದಿನ ಒಂದೊಂದು ಜಿಲ್ಲೆಗೆ ತೆರಳಿ ಪಕ್ಷ ಬಲಪಡಿಸುತ್ತೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಿದ್ಧಾಂತಗಳು ಚೆನ್ನಾಗಿವೆ. ಆದರೆ, ಅವುಗಳ ಅನುಷ್ಠಾನ ಅತ್ಯಂತ ಕೆಟ್ಟದಾಗಿದೆ. ಗ್ಯಾರಂಟಿ ಕಾಂಗ್ರೆಸ್ ಸ್ವಂತ ಯೋಜನೆ ಅಲ್ಲ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಯೋಜನೆಗಳನ್ನು ಕದ್ದು ಜಾರಿ ಮಾಡಿದ್ದಾರೆ. ಆದರೆ, ಅವರಂತೆ ಮುಂದಾಲೋಚನೆ ಇಲ್ಲದೆ ಅನುಷ್ಠಾನಕ್ಕೆ ಮುಂದಾಗಿದ್ದು, ಎಸ್ಸಿ, ಎಸ್ಟಿಗಳ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ರೈತರ ವಿದ್ಯುತ್ ಕಸಿದಿದ್ದಾರೆ ಎಂದು ಹರಿಹಾಯ್ದರು.

ಕಾವೇರಿ ವಿಷಯದಲ್ಲಿ ರಾಜಕಾರಣ ಸಲ್ಲದು:ಕಾವೇರಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದ ಜನರ ಹಿತಕ್ಕಾಗಿ ನ್ಯಾಯಾಧೀಕರಣದ ತೀರ್ಪು ಧಿಕ್ಕರಿಸಲೇ ಬೇಕು. ಏನಾಗುತ್ತದೆ? ಮಹಾ ಅಂದರೆ ಜೈಲಿಗೆ ಹಾಕುತ್ತಾರೆ ಎಂದರು.

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕರ್ನಾಟಕ ಸುವರ್ಣ ಮಹೋತ್ಸವಕ್ಕೆ ಆಸಕ್ತಿ ತೋರುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅನುದಾನ ತಂದು ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿಲ್ಲ. ಅವರಿನ್ನೂ ಮರಳು ದಂಧೆಯಿಂದ ಆಚೆ ಬಂದಂತೆ ಕಾಣುತ್ತಿಲ್ಲ. ಸ್ವಲ್ಪ ಕಲಾವಿದರ ಬಗ್ಗೆ ಗಮನಹರಿಸಿ. ರಾಜ್ಯದಲ್ಲಿ 14 ಅಕಾಡೆಮಿಗಳಿವೆ, 4 ಪ್ರಾಧಿಕಾರಿಗಳು ಕೋಮಾದಲ್ಲಿವೆ, ಶಿವರಾಜ ತಂಗಡಗಿ ಅವರು ಅಧಿಕಾರ ವಹಿಸಿಕೊಂಡು ಮೂರು ತಿಂಗಳಾಯಿತು ಏನು ಮಾಡುತ್ತಿದ್ದಿರಿ? ರಾಜ್ಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮಾಯವಾಗಿವೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:ಲೋಡ್‌ ಶೆಡ್ಡಿಂಗ್‌ ಟೀಕಿಸುವ ಬಿಜೆಪಿ ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಿಸಿತ್ತು?: ಡಿ.ಕೆ.ಶಿವಕುಮಾರ್

Last Updated :Oct 13, 2023, 1:56 PM IST

ABOUT THE AUTHOR

...view details