ಗಂಗಾವತಿ(ಕೊಪ್ಪಳ):ತಾಲೂಕಿನ ಶ್ರೀರಾಮನಗರದಲ್ಲಿರುವ ಮಂತ್ರಾಲಯ ಮಠಕ್ಕೆ ಸೇರಿದ 19.30 ಎಕರೆ ಜಮೀನಿನಲ್ಲಿ ಕಳೆದ ಐವತ್ತು ವರ್ಷದಿಂದ ಜನ ವಾಸ ಮಾಡುತ್ತಿದ್ದಾರೆ. ಅವರಿಗೆ ಕಾನೂನು ಬದ್ಧ ಹಕ್ಕು ಪತ್ರ ಕೊಡಿ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ರಫಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು. ಬಳಿಕ ಮಾತನಾಡಿದ ಅವರು, ಮಂತ್ರಾಲಯ ಮಠಕ್ಕೆ ಸೇರಿದ್ದ ಭೂಮಿಯಲ್ಲಿ ಕಳೆದ ಐವತ್ತು ವರ್ಷದಿಂದ ಜನ ವಾಸಿಸುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲ. ಶ್ರೀಮಠದ ಈ ಹಿಂದಿನ ಪೀಠಾಧಿಪತಿ ಸುಶಮೀಂದ್ರ ಸ್ವಾಮೀಜಿಗಳು, ಭೂಮಿಯ ಮೇಲಿನ ಹಕ್ಕು ಬಿಟ್ಟುಕೊಟ್ಟಿರುವ ಬಗ್ಗೆ ಹಾಗೂ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಸಂಬಂಧಿ ಇಲಾಖೆಗೆ ಲಿಖಿತ ಪತ್ರ ನೀಡಿದ್ದಾರೆ.