ಕರ್ನಾಟಕ

karnataka

ಗಂಗಾವತಿ: ಅದ್ಧೂರಿಯಾಗಿ ನೆರವೇರಿದ ವೆಂಕಟೇಶ ಮಾದರಿ ಗಣಪತಿ ನಿಮಜ್ಜನ ಮೆರವಣಿಗೆ

By ETV Bharat Karnataka Team

Published : Oct 4, 2023, 9:10 PM IST

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಇಲ್ಲಿನ ಗಾಂಧಿ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣಪನ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಶಾಸಕ ಜನಾರ್ದನ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು.

ganapathi-nimajjana-procession-at-gangavathi
ಗಂಗಾವತಿ : ಅದ್ಧೂರಿಯಾಗಿ ನಡೆದ ವೆಂಕಟೇಶ ಮಾದರಿ ಗಣಪತಿ ನಿಮಜ್ಜನ ಮೆರವಣಿಗೆ

ಗಂಗಾವತಿ (ಕೊಪ್ಪಳ): ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಇಲ್ಲಿನ ಗಾಂಧಿವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವೆಂಟಕೇಶ ಮಾದರಿ ವಿನಾಯಕನ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಇದಕ್ಕೂ ಮೊದಲು ಗಣಪನಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಜಿ. ಜನಾರ್ದನ ರೆಡ್ಡಿ ಗೋಧೂಳಿ ಮುಹೂರ್ತದಲ್ಲಿ ನಿಮಜ್ಜನ ಮೆರವಣಿಗೆಗೆ ಚಾಲನೆ ಕೊಟ್ಟರು. ನೂರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, "ಯಾವುದೇ ಧರ್ಮದ ಹಬ್ಬಗಳು ಪರಸ್ಪರ ಸಮುದಾಯಗಳನ್ನು ಪ್ರೀತಿಯಿಂದ ಬೆಸೆಯುವಂತೆ ಮಾಡುತ್ತವೆ. ಹಬ್ಬ-ಹರಿದಿನಗಳನ್ನು ಎಲ್ಲರೂ ಸಂತಸದಿಂದ ಆಚರಿಸಬೇಕು. ಪರಸ್ಪರ ಸಮುದಾಯಗಳು ಭಾಗಿಯಾಗುವಂತೆ ಪ್ರೇರೇಪಿಸಬೇಕು. ಮುಖ್ಯವಾಗಿ ಯಾವುದೇ ಆಚರಣೆಗಳಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಾವು ಎಚ್ಚರಿಕೆ ವಹಿಸಬೇಕು" ಎಂದು ಸಲಹೆ ನೀಡಿದರು.

"ಇದೇ ಮೊದಲ ಬಾರಿಗೆ ಗಂಗಾವತಿ ನಗರದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ವಿನಾಯಕನ ಪ್ರತಿಷ್ಠಾಪನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಹಬ್ಬದ ಆಚರಣೆಗೆ ಯೋಜನೆ ರೂಪಿಸಲಾಗುವುದು" ಎಂದರು. ಈ ಸಂದರ್ಭದಲ್ಲಿ ಕಿಷ್ಕಿಂಧಾ ಕಲ್ಯಾಣ ಗಜಾನನ ಸಮಿತಿಯಿಂದ ಸಾರ್ವಜನಿಕರಿಗೆ ವಿತರಿಸುವ ಉದ್ದೇಶದಿಂದ ತಯಾರಿಸಲಾಗಿದ್ದ 25 ಸಾವಿರ ಲಡ್ಡುಗಳನ್ನು ರೆಡ್ಡಿ ಸಾರ್ವಜನಿಕರಿಗೆ ವಿತರಣೆ ಮಾಡಿದರು.

ಗಾಂಧಿವೃತ್ತದಲ್ಲಿ ಎರಡು ಗಂಟೆಗಳ ಕಾಲ ಮಹಿಳೆಯರ ಮತ್ತು ಮಕ್ಕಳ ಕಾರ್ಯಕ್ರಮ ನಡೆಯಿತು. ಬಳಿಕ ನಗರದ ಪ್ರಮುಖ ವೃತ್ತ, ರಸ್ತೆಗಳ ಮೂಲಕ ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ದಾಸನಾಳದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿಮಜ್ಜನ ಮಾಡಲಾಯಿತು.

ಸೌಹಾರ್ದತೆ ಮೆರೆದ ಮುಸ್ಲಿಮರು: ನಗರದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಮುಸ್ಲಿಮರು ಇಲ್ಲಿನ ಗಾಂಧಿವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನಿಗೆ ಪೂಜೆ ಸಲ್ಲಿಸಿದರು. ನಗರಸಭೆಯ ಮಾಜಿ ಸದಸ್ಯ ಶೇಖನಭಿಸಾಬ, ತಾಜುದ್ದೀನ್, ಅನ್ವರ್ ತಾರೀಖ್, ಆಯೂಬ್ ಸಗರಿ, ಯಸೂಫ್ ಸೇರಿದಂತೆ ಹಲವರು ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಶೇಖನಭಿ, ನಮ್ಮ ಗಂಗಾವತಿ ನಗರ ಭಾವೈಕ್ಯತೆಗೆ ಹೆಸರು ಮಾಡಿದ ನಗರ. ಇತ್ತೀಚಿನ ವರ್ಷದಲ್ಲಿ ಕೋಮು ಸಾಮರಸ್ಯ ಕದಡುವ ಕೆಲಸ ನಡೆಯುತ್ತಿದ್ದು, ಇದೆಲ್ಲವೂ ನಿವಾರಣೆಯಾಗಿ ಎಲ್ಲ ಸಮುದಾಯಗಳು ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕುವಂತಾಗಬೇಕು. ಮುಖ್ಯವಾಗಿ ಇಡೀ ರಾಜ್ಯಕ್ಕೆ ಬರದ ಛಾಯೆ ಆವರಿಸಿದ್ದು, ಗಣೇಶನ ಮಹಿಮೆಯಿಂದ ನಾಡಿನಾದ್ಯಂತ ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯುವಂತಾಗಬೇಕು. ಈ ಸಂಬಂಧ ವಿಘ್ನ ನಿವಾರಕ ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸಿದ್ದಾಗಿ ಹೇಳಿದರು.

ಇದನ್ನೂ ಓದಿ :4ನೇ ಬಾರಿಗೆ ಚಿನ್ನದ ಅಂಬಾರಿ ಹೊರಲು ರೆಡಿಯಾಗುತ್ತಿರುವ ಕ್ಯಾಪ್ಟನ್​ ಅಭಿಮನ್ಯು: ವಿಡಿಯೋ

ABOUT THE AUTHOR

...view details