ಕೋಲಾರ: ಶಾಸಕ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಕಾಂಗ್ರೆಸ್ನ ಶಾಸಕರು ಇರುವುದು ನಿಜ. ಅವರು ಪ್ರಭಾವಿ ವ್ಯಕ್ತಿ, ಅವರ ಮಾತನ್ನು ತೆಗೆದು ಹಾಕಲು ಆಗುವುದಿಲ್ಲ ಎಂದು ಕೋಲಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿಕೆ ನೀಡಿದ್ದಾರೆ.
ಇಂದು ಕೋಲಾರದಲ್ಲಿ 73ನೇ ಗಣರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನ 16 ಶಾಸಕರು ನನ್ನ ಸಂಪರ್ಕದಲ್ಲಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿದರೆ ಅವರನ್ನೆಲ್ಲಾ ಬಿಜೆಪಿಗೆ ಕರೆತರುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ಅವರು ಹಿರಿಯರಾಗಿದ್ದು, ಅವರು ಯಾವುದೇ ಬೇಜವಾಬ್ದಾರಿತನದ ಮಾತುಗಳನ್ನು ಹೇಳುವುದಿಲ್ಲ. ಅವರ ಸಂಪರ್ಕದಲ್ಲಿ ಕಾಂಗ್ರೆಸ್ ಶಾಸಕರಿರುವ ಮಾತನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಸಚಿವ ಮುನಿರತ್ನ ಮಾತನಾಡಿರುವುದು.. ಕೋಲಾರ ಜಿಲ್ಲೆಯ ಉಸ್ತುವಾರಿ ಸ್ಥಾನದಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ. ನನಗೆ ಕೊಟ್ಟಿರುವ ಕೆಲಸವನ್ನು ನಾನು ಮಾಡುವೆ. ತವರು ಜಿಲ್ಲೆಯ ರೀತಿಯಲ್ಲಿ ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಲು ನನಗೆ ಅಸಮಾಧಾನವಿಲ್ಲ. ಸಾರ್ವಜನಿಕರ ಕೆಲಸ ಮಾಡಲು ನಾನು ಸಿದ್ಧ, ಸಾರ್ವಜನಿಕ ಕೆಲಸ ಮಾಡಲು ಯಾವ ಜಿಲ್ಲೆಯಾದರೇನು ಎಂದು ಹೇಳಿದರು.
ಪಕ್ಷದ ತೀರ್ಮಾನಕ್ಕೆ ಬದ್ಧ :ಸಚಿವ ಸಂಪುಟ ಪುನಾರಚನೆ ಪಕ್ಷದ ತೀರ್ಮಾನ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ, ಎಲ್ಲರೂ ಬದ್ಧರಾಗಿರಬೇಕು. ಈಶ್ವರಪ್ಪ ಸೇರಿದಂತೆ ಎಲ್ಲರೂ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರಬೇಕೆಂದರು.
ನಾವು ಹೋದರೆ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಇರುವುದಿಲ್ಲ:ನಾನು ಸೇರಿದಂತೆ ನಮ್ಮ ಸ್ನೇಹಿತರು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ನಾವು ಹೋದರೆ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದಲ್ಲಿ ಇರುವುದಿಲ್ಲ. ವಿಧಾನಸೌಧದಲ್ಲಿ ಸಿದ್ದರಾಮಯ್ಯ ಈ ಹಿಂದೆಯೇ ಹೇಳಿದ್ದಾರೆ, ಹೋಗಿರುವ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳವುದಿಲ್ಲ, ಅಂತಹ ಪರಿಸ್ಥಿತಿ ಯಾವತ್ತೂ ಬರುವುದಿಲ್ಲವೆಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಪಕ್ಷ ಬಿಡುವ ಪ್ರಶ್ನೆಯಿಲ್ಲ :ಇನ್ನು ನಮಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಅನಿವಾರ್ಯತೆ ಇಲ್ಲ. ಬಿಜೆಪಿ ಪಕ್ಷ ನಮ್ಮನ್ನು ಗೌರವದಿಂದ ನಡೆಸಿಕೊಂಡಿದೆ. ಪಕ್ಷ ಬಿಡುವ ಪ್ರಶ್ನೆಯಿಲ್ಲ ಎಂದು ತಿಳಿಸಿದ್ರು. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಹೋದರೆ ರಮೇಶ್ ಕುಮಾರ್ ಮತ್ತು ಸಿದ್ದರಾಮಯ್ಯ ಪಕ್ಷ ಬಿಡಿವುದರಲ್ಲಿ ಮೊದಲಿಗರಾಗಿರುತ್ತಾರೆ ಎಂದರು.
ಇದನ್ನೂ ಓದಿ:ಹೈಕಮಾಂಡ್ ಒಪ್ಪಿದ್ರೆ ಕಾಂಗ್ರೆಸ್ನ 16 ಶಾಸಕರನ್ನು ಬಿಜೆಪಿಗೆ ಕರೆತರುತ್ತೇನೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್!
ಕೋಲಾರ ನಗರದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್, ಗೋವಿಂದರಾಜು, ಜಿಲ್ಲಾಧಿಕಾರಿ ವೆಂಕಟರಾಜು, ಎಸ್ಪಿ ದೇವರಾಜ್ ಸೇರಿ ಅಧಿಕಾರಿಗಳು ಭಾಗಿಯಾಗಿದ್ರು.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ