ಕಲಬುರಗಿ: ನಾವು ಜನರ ಸೇವಕರೇ ಹೊರತು ನಾಯಕರಲ್ಲ. ನಮಗೆ ನಾಯಕ ಪದವಿ ಬೇಡ ಎಂದು 'ಕಾಂಗ್ರೆಸ್ ನಾ ನಾಯಕಿ' ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್. ಅಶೋಕ ಲೇವಡಿ ಮಾಡಿದ್ದಾರೆ. ಕಲಬುರಗಿಯ ಮಳಖೇಡನಲ್ಲಿ ಮಾತನಾಡಿದ ಆರ್. ಅಶೋಕ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಾ ನಾಯಕಿ ಕಾರ್ಯಕ್ರಮ ಕುರಿತು ಗೇಲಿ ಮಾಡಿದರು. ಕಾಂಗ್ರೆಸ್ನವರು ನಾಯಕ, ನಾಯಕಿ ಅಂತಾ ಹೇಳಿಕೊಂಡು ಓಡಾಡಲಿ ನಮಗೆ ಅಂತ ಪಟ್ಟ ಬೇಡಾ ಎಂದು ವಾಗ್ದಾನ ಮಾಡಿದರು.
ಇದೆ ವೇಳೆ ತಾಕತ್ತು, ಧಮ್ ಇದ್ರೆ ಮೋದಿ ಬಳಿ ವಾಪಸ್ ಹೋಗಿದ್ದ ಯೋಜನೆಗಳ ಬಗ್ಗೆ ಬಿಜೆಪಿಗರು ಪ್ರಶ್ನೆ ಮಾಡಲಿ ಎಂದು ಹೇಳಿರುವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದ ಮಾತಿಗೆ ತಿರುಗೇಟು ನೀಡಿದ ಆರ್. ಅಶೋಕ ಅವರು, ಮೊದಲು ಕಾಂಗ್ರೆಸ್ ನವರಿಗೆ ಧಮ್, ತಾಕತ್ ಇದ್ರೆ ಮನಮೋಹನ ಸಿಂಗ್ ಪ್ರಧಾನಿಗಳಿದ್ದಾಗ ಅದೆಷ್ಟೂ ಪರಿಹಾರ ಕೊಟ್ಟಿದ್ದಾರೆ ಅದನ್ನ ಹೇಳಲಿ ಎಂದು ತಿರುಗೇಟು ನೀಡಿದ್ದಾರೆ.
ಮೋದಿ ಅವರು ಪ್ರಧಾನಿ ಆಗಿ 9 ವರ್ಷದಲ್ಲಿ ನೆರೆಹಾವಳಿ, ಅತಿವೃಷ್ಟಿ ಹೀಗೆ ಪ್ರತಿಯೊಂದಕ್ಕೂ ಪರಿಹಾರ ಕೊಟ್ಟಿದ್ದಾರೆ. ರಾಜ್ಯ- ಕೇಂದ್ರ ಸರ್ಕಾರ ಒಗ್ಗೂಡಿ ಒಂದೊಂದು ಜಿಲ್ಲೆಗೆ 200-250 ಕೋಟಿ ಹಣ ಕೊಟ್ಟಿದ್ದಾರೆ. ಬಹಿರಂಗವಾಗಿ ಸವಾಲ್ ಹಾಕ್ತೇನೆ ಕಾಂಗ್ರೆಸ್ನವರು ಚರ್ಚೆಗೆ ಬರಲಿ ನೋಡೋಣ ಎಂದು ಕುಟುಕಿದರು. ರಾಜ್ಯಕ್ಕೆ ಪ್ರಧಾನಿಯವರು ಪದೇ ಪದೆ ಬರ್ತಿದ್ದಾರೆ ಅಂತಾ ಕಾಂಗ್ರೆಸ್ ಪಕ್ಷದವರು ಪ್ರಶ್ನಿಸುತ್ತಿದ್ದಾರೆ. ಯಾಕೆ ಪ್ರಧಾನಿಯವರು ಬರಬಾರದಾ ಹಾಗಾದ್ರೆ?, ನಿಮ್ಮ ಪ್ರಧಾನಿಗಳಿನ್ನೂ ಹಿಂದೆ ನೀವು ಕರೆದುಕೊಂಡು ಬರಬಹುದಿತ್ತು. ನಮ್ಮ ಪ್ರಧಾನಿ ಮೋದಿ ಘರ್ಜಿಸುತ್ತಾ ಬರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನವರಿಗೆ ಭಯ ಆಗ್ತಿದೆ ಎಂದು ಪ್ರತ್ಯುತ್ತರ ನೀಡಿದರು.
ಕಂದಾಯ ಗ್ರಾಮಗಳಾಗಿ ಪರಿವರ್ತನೆ: ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ತಾಂಡಾ, ಆಡಿ, ಕುರುಬರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ಸಬ್ ರಿಜಿಸ್ಟರ್ ನಲ್ಲಿ ನೋಂದಣಿ ಮಾಡಿ ದಾಖಲೆ ಆಗುತ್ತದೆ. ಇದರಿಂದ ತಾಂಡಾ ಕುಟುಂಬಗಳಿಗೂ ನಾಗರಿಕ ಸೌಲಭ್ಯ, ಲೋನ್ ಸೇರಿ ಇತರೆ ಸೌಲಭ್ಯಗಳನ್ನ ಪಡೆಯಲು ಅನುಕೂಲ ಆಗುತ್ತದೆ ಎಂದು ಮಾಹಿತಿ ನೀಡಿದರು.