ಕರ್ನಾಟಕ

karnataka

ಕಲಬುರಗಿಯಲ್ಲಿ ಮಳೆಯ ಅಬ್ಬರ: ಹರಿಯುವ ನೀರಿನಲ್ಲಿ ಸೇತುವೆ ದಾಟುವ ಹರಸಾಹಸ

By

Published : Sep 8, 2022, 1:07 PM IST

ಕಲಬುರಗಿ ಜಿಲ್ಲೆಯಲ್ಲಿ ಸುರಿದ ಜಡಿಮಳೆಗೆ ಹಲವು ಗ್ರಾಮಗಳ ನಡುವಿನ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಅನಿವಾರ್ಯ ಕಾರ್ಯಗಳಿಂದ ಅಲ್ಲಿಯ ಜನ ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.

Kalaburagi people are facing problem due to heavy rain
ಹರಿಯುವ ನೀರಿನಲ್ಲಿ ಸೇತುವೆ ದಾಟುತ್ತಿರುವುದು

ಕಲಬುರಗಿ : ಜಿಲ್ಲೆಯ ಹಲವಡೆ ಕಳೆದರೆಡು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಪರಿಣಾಮ ಹಲವಡೆ ಸಂಪರ್ಕ ಕಡಿತಗೊಂಡಿವೆ. ಗ್ರಾಮಸ್ಥರು ತುಂಬಿ ಹರಿಯುವ ನೀರಿನಲ್ಲಿಯೇ ದಾಟುವ ಹರಸಾಹಸ ಮಾಡುತ್ತಿದ್ದಾರೆ. ಮತ್ತೊಂದಡೆ ಸೇತುವೆ ಕಿತ್ತುಹೋದ ಪರಿಣಾಮ ಹೊಲಗಳಿಗೂ ಹೋಗಲು ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ.

ಹರಿಯುವ ನೀರಿನಲ್ಲಿ ಸೇತುವೆ ದಾಟುತ್ತಿರುವುದು

ಹೌದು, ವರುಣನ ಅಬ್ಬರದಿಂದ ಬಿಸಿಲೂರು ಕಲಬುರಗಿ ಜಿಲ್ಲೆಯ ಹಲವು ಗ್ರಾಮಸ್ಥರ ಜೀವನ ಅಕ್ಷರಶಃ ದುಸ್ಥರವಾಗಿದೆ. ಧಾರಾಕಾರ ಮಳೆಯಿಂದ ಅಫಜಲಪುರ ತಾಲೂಕಿನ ರೇವೂರ (ಬಿ) ಗ್ರಾಮದ ಹಳ್ಳದ ನೀರು ಸೇತುವೆ ಮೇಲೆ ತುಂಬಿ ರಭಸವಾಗಿ ಹರಿಯುತ್ತಿದೆ. ರೇವೂರ (ಬಿ) - ಸಿದನೂರ ಗ್ರಾಮದ ನಡುವಿನ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ತುಂಬಿ ರಭಸವಾಗಿ ಹರಿಯುತ್ತಿರುವ ಹಳ್ಳದಲ್ಲೇ ನಡೆದುಕೊಂಡು ಸೇತುವೆ ದಾಟುವ ಹರಸಾಹಸ ಜನರು ಮಾಡುತ್ತಿದ್ದಾರೆ‌. ಕೊಂಚ ಯಾಮಾರಿದರೂ ನೀರಿನಲ್ಲಿ‌ ಕೊಚ್ಚಿಕೊಂಡು ಹೋಗುವ ಆತಂಕ ಇದೆ.

ಹರಿಯುವ ನೀರಿನಲ್ಲಿ ಸೇತುವೆ ದಾಟುತ್ತಿರುವುದು

ಇನ್ನು ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದ ಸೇತುವೆ ಕೊಚ್ಚಿಕೊಂಡುಹೋದ ಪರಿಣಾಮ ಸಂಪರ್ಕ ಕಡಿತಗೊಂಡಿದೆ. ಎರಡು ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಭೀಮಳ್ಳಿ- ಕೆರೆಬೋಸಗಾ ಗ್ರಾಮಕ್ಕೆ‌ ಸಂಪರ್ಕ‌ ಕಲ್ಪಿಸುವ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಪರಿಣಾಮ ಸುಮಾರು 10 ಕಿಲೋ ಮೀಟರ್ ದೂರ ಸುತ್ತಾಕಿ ಗ್ರಾಮಸ್ಥರು ತೆರಳುತ್ತಿದ್ದಾರೆ. ಎರಡು ಗ್ರಾಮದ ಮಧ್ಯದಲ್ಲಿರುವ ಜಮೀನಿಗೆ ಹೋಗಲು ರೈತರು ಪಡಬಾರದ ಕಷ್ಟ ಪಡುತ್ತಿದ್ದಾರೆ‌. ಜೀವ ಕೈಯಲ್ಲಿ ಹಿಡಿದು ಕಿತ್ತುಹೋದ ಸೇತುವೆಯಲ್ಲಿ ದಾಟುತ್ತಿದ್ದಾರೆ. ಹಳೆ ಸೇತುವೆ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹರಿಯುವ ನೀರಿನಲ್ಲಿ ಸೇತುವೆ ದಾಟುತ್ತಿರುವುದು

ಆದರೂ, ಮಳೆಯ ಕಾರಣದಿಂದಾಗಿ ಕಾಮಗಾರಿಗೆ ತೊಡಕುಂಟಾಗುತ್ತಿದೆ. ಮಳೆ ನಿಂತ ಮೇಲೆ ಶೀಘ್ರವಾಗಿ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಪ್ರವಾಹದಲ್ಲಿ ಸಿಲುಕಿದವರ ರಕ್ಷಿಸಲು ಹೋದ ಅಗ್ನಿಶಾಮಕ ಸಿಬ್ಬಂದಿ ಬೋಟ್​ ಪಲ್ಟಿ

ABOUT THE AUTHOR

...view details