ಕರ್ನಾಟಕ

karnataka

ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ ಹೊರತು ನಾವಲ್ಲ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

By

Published : Aug 5, 2023, 6:09 PM IST

Updated : Aug 5, 2023, 10:01 PM IST

ಬಿಜೆಪಿಯವರೇ ತಾಕತ್ತಿದ್ದರೆ ನಮ್ಮ ಗ್ಯಾರಂಟಿಗಳನ್ನು ದೇಶದ ಎಲ್ಲೆಡೆ ಜಾರಿಗೆ ತನ್ನಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

ಗೃಹಜ್ಯೋತಿ ಯೋಜ‌ನೆ ಲೋಕಾರ್ಪಣೆ

ಕಲಬುರಗಿ:ಐದು ಗ್ಯಾರಂಟಿ ಕೊಟ್ಟರೆ ಕರ್ನಾಟಕ ದಿವಾಳಿ ಆಗುತ್ತೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ. ಆದರೆ ಈ ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರವೇ ಹೊರತು‌ ನಾವು ಯಾರೂ ಅಲ್ಲ. ಈಗಾಗಲೇ ಉಚಿತ‌ ಅಕ್ಕಿ, ಶಕ್ತಿ ಯೋಜನೆ, ಇಂದು ಗೃಹಜ್ಯೋತಿ ಯೋಜನೆ ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜೊತೆಗೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸಿ ಕರ್ನಾಟಕ‌ದ ಸಮಗ್ರ ಅಭಿವೃದ್ಧಿ ಮಾಡಿ ಮಾದರಿಯಾಗುತ್ತೇವೆ.‌ ಬಿಜೆಪಿಯವರೇ ತಾಕತ್ತಿದ್ದರೆ ನಮ್ಮ ಗ್ಯಾರಂಟಿಗಳನ್ನು ದೇಶದ ಎಲ್ಲೆಡೆ ಜಾರಿಗೆ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ‌.

ನಗರದ ಎನ್ ವಿ‌ ಮೈದಾನದಲ್ಲಿ ಆಯೋಜನೆ ಮಾಡಿದ್ದ ಗೃಹಜ್ಯೋತಿ ಯೋಜ‌ನೆ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ 165 ಭರವಸೆ ಕೊಟ್ಟು 158 ಭರವಸೆ ಈಡೇರಿಸಿ ಹೆಚ್ಚುವರಿ ಇತರೆ 30 ಕಾರ್ಯಕ್ರಮಗಳನ್ನು ನೀಡಿದ್ದೆವು. ನಮ್ಮನ್ನು ನಂಬಿ ಮತ್ತೊಮ್ಮೆ ಗೆಲ್ಲಿಸಿದ ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿರುವ 75 ಭರವಸೆಗಳನ್ನು ಬಜೆಟ್‌ ಮೂಲಕ ಈಡೇರಿಸುತ್ತೇವೆ ಎಂದು‌ ಭರವಸೆ ನೀಡಿದರು.

ಪ್ರಮಾಣವಚನ ಸ್ವಿಕಾರ ಮಾಡಿ ಎರಡೂವರೆ ತಿಂಗಳಲ್ಲಿ ಜನರ ವಿಶ್ವಾಸ ಉಳಿಸಿಕೊಳ್ಳವ ಕೆಲಸ ಮಾಡಿದ್ದೇವೆ. ಐದು ಗ್ಯಾರಂಟಿಗಳಲ್ಲಿ ಜೂನ್​ 11ರಂದು ಶಕ್ತಿ ಯೋಜನೆ ಚಾಲನೆ ನೀಡಿದ್ದೆವು. ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ದೇವಸ್ಥಾನ ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಹೋಗುತ್ತಿದ್ದಾರೆ. ಇದು‌ ಬಿಜೆಪಿ ನಾಯಕರ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದು ಸಿಎಂ ಕಿಡಿಕಾರಿದರು.

ಬಿಜೆಪಿಯವರು ಗ್ಯಾರಂಟಿ ಯೋಜನೆ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ದೇಶದ ಪ್ರಧಾನಿಯವರು ರಾಜಸ್ಥಾನದಲ್ಲಿ ಕರ್ನಾಟಕ ಬಗ್ಗೆ ಮಾತನಾಡ್ತಾರೆ. ಗ್ಯಾರಂಟಿ ಕೊಡುವ ಮೂಲಕ ಕರ್ನಾಟಕ ರಾಜ್ಯ ದಿವಾಳಿ ಆಗಲಿದೆ ಎಂದು ಹೇಳಿದ್ದಾರೆ. ಆದರೆ ಕರ್ನಾಟಕ ರಾಜ್ಯ ಮಾತ್ರವಲ್ಲ, ದೇಶವನ್ನು ದಿವಾಳಿ‌ ಮಾಡಿದ್ದು ನೀವು ನಾವಲ್ಲ ಎಂದು ಮೋದಿಗೆ ಟಾಂಗ್ ನೀಡಿದರು.

ರಾಜ್ಯದ ಸಂಪತ್ತು ಲೂಟಿ ಹೊಡೆದು, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಳ ಮಾಡಿ ಬಡ, ದಲಿತರಿಗೆ, ದಮನಿತರಿಗೆ, ಕೃಷಿಕೃರಿಗೆ ಕಾರ್ಮಿಕರಿಗೆ ಬಿಜೆಪಿ ಅನ್ಯಾಯ ಮಾಡಿದೆ. ನಮ್ಮ ಸರ್ಕಾರ ಆಳಿತದಲ್ಲಿದ್ದಾಗ ಕಲ್ಯಾಣ ಕರ್ನಾಟಕದ 99,600 ಸೇರಿದಂತೆ ರಾಜ್ಯದಲ್ಲಿ 14.52 ಲಕ್ಷ ಮನೆ ಕಟ್ಟಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ 19,000 ಹಾಗೂ ರಾಜ್ಯದಲ್ಲಿ 7 ಲಕ್ಷ ಮನೆ ಕಟ್ಟಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧತೆ ತೋರಿಸಿದೆ ಎಂದು ಹೇಳಿದ ಸಿಎಂ, ಬಿಜೆಪಿ ಸರ್ಕಾರ ಈ ಭಾಗದ ಹೆಸರನ್ನು ಬದಲಾವಣೆ‌ ಮಾಡಿದ್ದೇ ದೊಡ್ಡ ಸಾಧನೆ. ನಾವು ಯಾವುದೇ ಕಾರಣಕ್ಕೂ ಕರ್ನಾಟಕ ದಿವಾಳಿ ಆಗೋದಕ್ಕೆ ಬಿಡಲ್ಲ. ಕರ್ನಾಟಕವನ್ನು ಮಾದರಿ ಮಾಡುತ್ತೇವೆ. ನುಡಿದಂತೆ ನಾವು ನಡೆಯುತ್ತೇವೆ. ವಿರೋಧ ಪಕ್ಷದ ಮಾತುಗಳಿಗೆ ಕಿವಿಕೊಡುವುದು ಬೇಕಿಲ್ಲ ಎಂದರು.

ಅನ್ನಭಾಗ್ಯ ಯೋಜನೆಯ‌ ಜಾರಿಗೆ ವಿಚಾರದಲ್ಲಿ ಅಕ್ಕಿ ನೀಡದ ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಎಫ್​ಸಿಐ ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಆಮೇಲೆ‌ ನಿರಾಕರಿಸಿತು. ಬಿಜೆಪಿಗರು ಈ‌ ವಿಚಾರದಲ್ಲಿ ರಾಜಕೀಯ ಮಾಡಿದರು. ನಿಮಗೆ ನಾಚಿಕೆಯಾಗುವುದಿಲ್ಲವೇ? ಒಂದು ಕೆಜಿಗೆ ಅಕ್ಕಿಗೆ 35 ರೂ. ದಂತೆ 1 ಕೋಟಿ 30 ಲಕ್ಷ ಕುಟುಂಬಗಳಿಗೆ ತಲಾ 170 ಜಮಾ ಮಾಡಿದ್ದೇವೆ. ಆಗಸ್ಟ್​ 24 ರಿಂದ ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ 2 ಸಾವಿರ ಹಣ ಕೂಡಾ ಜಾರಿಗೆ ತರಲಿದ್ದೇವೆ. ಇಂತಹ ಯೋಜನೆಯನ್ನು ದೇಶದ ಯಾವುದೇ ರಾಜ್ಯ‌ ಜಾರಿಗೆ ತಂದಿಲ್ಲ. ನುಡಿದಂತೆ ನಾವು ನಡೆಯುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದರು.

ಇದನ್ನೂ ಓದಿ:ಆರಗ ಜ್ಞಾನೇಂದ್ರರಿಗೆ ಬುದ್ಧಿ ಭ್ರಮಣೆಯಾಗಿದೆ, ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಶಿವರಾಜ ತಂಗಡಗಿ

Last Updated : Aug 5, 2023, 10:01 PM IST

ABOUT THE AUTHOR

...view details