ಕರ್ನಾಟಕ

karnataka

ಮೂರನೇ ಬಾರಿಯೂ ಅಜಯ್​ ಸಿಂಗ್​ಗೆ ತಪ್ಪಿದ ಸಚಿವ ಸ್ಥಾನ

By

Published : May 27, 2023, 11:37 AM IST

ಜೇವರ್ಗಿ ಶಾಸಕ ಡಾ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಲಭಿಸದ ಹಿನ್ನೆಲೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ.

Ajay Singh
ಅಜಯ್​ ಸಿಂಗ್

ಕಲಬುರಗಿ: ಮಾಜಿ ಸಿಎಂ ಧರ್ಮಸಿಂಗ್ ಪುತ್ರ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದೆ. ಮೂರು ಬಾರಿ ಗೆದ್ದರೂ ಮಂತ್ರಿ ಭಾಗ್ಯ ಒಲಿಯದೆ ಇರುವುದರಿಂದ ಅಭಿಮಾನಿ ಬಳಗಕ್ಕೆ ಭಾರಿ ನಿರಾಶೆ ಮೂಡಿಸಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ರೂ ಸಚಿವ ಸ್ಥಾನ ಮಾತ್ರ ಕೈಗೆಟುಕುತ್ತಿಲ್ಲ. ಕಲಬುರಗಿ ಜಿಲ್ಲೆಯವರಾದ ಇಬ್ಬರು‌ ವೈದ್ಯರ ಮಧ್ಯೆ ಸಚಿವ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿತ್ತು. ಆದ್ರೆ ಸಿಎಂ ಸಿದ್ದರಾಮಯ್ಯ ಆಪ್ತರಾಗಿರೋ ಡಾ. ಅಜಯ್ ಸಿಂಗ್ ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತರಾಗಿರುವ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ್​ಗೆ ಮಂತ್ರಿಗಿರಿ ಒಲಿದು ಬಂದಿದೆ.

ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ‌ ಮತ್ತು‌ ಅಜಯ್ ಸಿಂಗ್ ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿದ್ದಾರೆ. ಇಬ್ಬರು ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಆದ್ರೆ, ಪ್ರಿಯಾಂಕ್ ಖರ್ಗೆ ಮೂರು ಬಾರಿ ಮಂತ್ರಿಯಾದ್ರೆ ಅಜಯ್ ಸಿಂಗ್​ಗೆ ಒಂದು ಬಾರಿಯೂ ಸಚಿವ ಸ್ಥಾನ ಒಲಿಯದಿರುವುದು ಕ್ಷೇತ್ರದ ಜನತೆಗೆ‌ ಬಾರಿ‌ ನಿರಾಸೆ ತಂದಿದೆ. ಕಳೆದ ಬಾರಿಯೇ ಮಂತ್ರಿ ಆಗಬಹುದು‌ ಎಂಬ ನೀರಿಕ್ಷೆ ಇತ್ತು, ಕೊನೆಗೆ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿತ್ತು‌. ಈ ಬಾರಿ‌ ಖಂಡಿತ ಸಚಿವರಾಗ್ತಾರೆ ಅನ್ನೋ ಬೆಂಬಲಿಗರ ಭಾರೀ ನಿರೀಕ್ಷೆ ಹುಸಿಯಾಗಿದೆ.

ಇದನ್ನೂ ಓದಿ :ಖರ್ಗೆ ತವರಿನಲ್ಲಿ ಕಾಂಗ್ರೆಸ್ ಕಮಾಲ್.. ಕಲಬುರಗಿಯ 9 ರಲ್ಲಿ 7 ಕ್ಷೇತ್ರ ತೆಕ್ಕೆಗೆ ಪಡೆದ ಕೈಪಡೆ

ಜೇವರ್ಗಿಯ ಶಾಸಕ ಅಜಯ್​ ಸಿಂಗ್ ನೂತನ ಸರ್ಕಾರದಲ್ಲಿ ಸಚಿವರಾಗಲಿ ಎಂದು ಪ್ರಾರ್ಥಿಸಿ ಶಕ್ತಿ ದೈವ ಎಂದು ಕರೆಸಿಕೊಳ್ಳುವ ಜೇವರ್ಗಿ ತಾಲೂಕಿನ ನೇಲೋಗಿ ಗ್ರಾಮದ ಬಲಭೀಮೇಶ್ವರ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದರು. ಜನಪರ ಕೆಲಸ ಮಾಡಿಕೊಂಡು ಬಂದಿರುವ ಅವರಿಗೆ ಇನ್ನಷ್ಟು ಶಕ್ತಿ ನೀಡಲಿ, ಸರ್ಕಾರದಲ್ಲಿ ಪ್ರಮುಖ ಸಚಿವ ಸ್ಥಾನ ಲಭಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದರು.

ಇದನ್ನೂ ಓದಿ :ಶಾಸಕರುಗಳಿಗೆ ಬಿಸಿ ಮುಟ್ಟಿಸಿದ ಮತದಾರರು: ಶಾಸಕ ಅಜಯ್ ಸಿಂಗ್, ಮತ್ತಿಮೂಡಗೆ ಇರಿಸು-ಮುರಿಸು

ವಿಧಾನಸಭಾ ಚುನಾವಣೆ 2023 ರಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲಿನ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಕಲಬುರಗಿ ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಮತ್ತು ಚಿತ್ತಾಪುರ ಕ್ಷೇತ್ರ ಸೇರಿದಂತೆ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹುರಿಯಾಳುಗಳು ಭರ್ಜರಿ ಜಯ ಗಳಿಸಿದ್ರು. ಕಲಬುರಗಿ ಗ್ರಾಮೀಣ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಶಾಸಕರು ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ :ಶಾಸಕ ಅಜಯ್​ ಸಿಂಗ್​ಗೆ ಮೂರನೇ ಬಾರಿಗೆ ಕೊರೊನಾ ಪಾಸಿಟಿವ್​​

ABOUT THE AUTHOR

...view details