ಕರ್ನಾಟಕ

karnataka

ಗುಂಡಿಗಳಿಂದ ಕೂಡಿದ ರಸ್ತೆಗಳು: ಬಸ್​ ಸಂಚಾರದಲ್ಲಿ ವ್ಯತ್ಯಯ, ವಿದ್ಯಾರ್ಥಿಗಳ ಪರದಾಟ

By

Published : Oct 24, 2022, 7:58 AM IST

ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದೆ. ಅಧಿಕ ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳೆಲ್ಲಾ ಹಾಳಾಗಿದ್ದು, ಎಲ್ಲೆಂದರಲ್ಲಿ ಗುಂಡಿಗಳಾಗಿವೆ. ಇದರಿಂದ ಸರಿಯಾದ ಸಮಯಕ್ಕೆ ಸಾರಿಗೆ ಬಸ್‌ಗಳು ಬರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಸ್​ ಸಂಚಾರದಲ್ಲಿ ವ್ಯತ್ಯಯ
ಬಸ್​ ಸಂಚಾರದಲ್ಲಿ ವ್ಯತ್ಯಯ

ಹಾವೇರಿ: ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್​ಗಳು ಬರುತ್ತಿಲ್ಲ. ಅಷ್ಟೇ ಅಲ್ಲದೇ ನಿಯಮಿತ ದೂರಕ್ಕೆ ಈ ಮೊದಲು ಬಳಸಲಾಗುತ್ತಿದ್ದ ಇಂಧನಕ್ಕಿಂತ ಈಗ ಅತಿ ಹೆಚ್ಚು ಬೇಕಾಗುತ್ತಿದೆ. ಅಲ್ಲದೇ ಬಸ್​ಗಳು ಪದೇ ಪದೆ ರಿಪೇರಿಗೆ ಬರುತ್ತಿದ್ದು, ಸಾರಿಗೆ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂ ಸವಣೂರು ವಿಭಾಗದಲ್ಲಂತೂ ಇನ್ನಿಲ್ಲದ ನಷ್ಟ ಅನುಭವಿಸುವಂತಾಗಿದೆ.

ಬಸ್​ ಸಂಚಾರದಲ್ಲಿ ವ್ಯತ್ಯಯ, ವಿದ್ಯಾರ್ಥಿಗಳ ಪರದಾಟ

ಸವಣೂರು ಲಕ್ಷ್ಮೇಶ್ವರ, ಸವಣೂರು ಹೊಸರಿತ್ತಿ, ಸವಣೂರು ಇಚ್ಚಂಗಿ, ಸವಣೂರಿನಿಂದ ಸಂಚರಿಸುವ ಹಲವು ಮಾರ್ಗಗಳಲ್ಲಿ ರಸ್ತೆಗಳು ಹಾಳಾಗಿವೆ. ಹೀಗಾಗಿ ಸಾರಿಗೆ ಇಲಾಖೆ ಈ ಭಾಗಗಳಿಗೆ ಈಗ ಬಸ್‌ಗಳ ಒಡಾಟ ಕಡಿಮೆ ಮಾಡಿದೆ. ನಿತ್ಯ ಸಂಚರಿಸುವ ನಾಲ್ಕು ಸಂಚಾರಗಳಲ್ಲಿ ಎರಡು ಸಂಚಾರ ರದ್ದಾಗಿದೆ. ಮುಂಜಾನೆ ಮತ್ತು ಸಂಜೆ ಮಾತ್ರ ಎರಡು ಬಾರಿ ಬಸ್​ಗಳು ಸಂಚರಿಸುತ್ತಿವೆ. ಇದರಿಂದ ಗ್ರಾಮಾಂತರ ಪ್ರದೇಶಗಳಿಂದ ಸವಣೂರಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಕೊರತೆ ಉಂಟಾಗಿದೆ.

ಗ್ರಾಮೀಣ ಪ್ರದೇಶಗಳಿಂದ ಮುಂಜಾನೆ ಒಂದು ಬಾರಿ ಮತ್ತು ಸಂಜೆ ಒಂದು ಬಾರಿ ಮಾತ್ರ ನಗರಕ್ಕೆ ಬಸ್ ಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು ಮುಂಜಾನೆ ವಿದ್ಯಾಭ್ಯಾಸಕ್ಕೆ ನಗರಕ್ಕೆ ಆಗಮಿಸಿದರೆ, ಮತ್ತೆ ಗ್ರಾಮಕ್ಕೆ ಸಂಜೆಯೇ ಮರಳುತ್ತಾರೆ. ಉಳಿದ ಸಮಯವನ್ನು ಈ ಮಕ್ಕಳು ಬಸ್ ನಿಲ್ದಾಣದಲ್ಲಿ ಕಳೆಯುವ ಪರಿಸ್ಥಿತಿ ಉಂಟಾಗಿದೆ.

ಇದನ್ನೂ ಓದಿ:ರಸ್ತೆ ಗುಂಡಿ ಸಮೀಪ ಕುಳಿತು ನಿವೃತ್ತ ಸರ್ಕಾರಿ ನೌಕರನಿಂದ ಏಕಾಂಗಿ ಪ್ರತಿಭಟನೆ

ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್​ಗೆ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಆದಷ್ಟು ಬೇಗ ಈ ಕಡೆ ಗಮನ ಹರಿಸಿ ಸರಿಯಾದ ರಸ್ತೆ ನಿರ್ಮಿಸುವಂತೆ ವಿದ್ಯಾರ್ಥಿಗಳು, ಶಿಕ್ಷಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details