ಕರ್ನಾಟಕ

karnataka

ಹಾವೇರಿ ಪೊಲೀಸರ ಭರ್ಜರಿ ಬೇಟೆ : ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್​ಪಿ

By

Published : Jun 3, 2022, 8:41 AM IST

Updated : Jun 3, 2022, 8:57 AM IST

ಬುಧವಾರ ಸಂಜೆ ಶಿಗ್ಗಾವಿಯಲ್ಲಿ ಚಿನ್ನಿದಾಂಡು ಆಟದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪ್ರಕರಣವನ್ನ ಸಹ ಬೇಧಿಸಿರುವ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ..

ಎಸ್​ಪಿ ಹನುಮಂತರಾಯ
ಎಸ್​ಪಿ ಹನುಮಂತರಾಯ

ಹಾವೇರಿ: ಜಿಲ್ಲಾ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಜಿಲ್ಲೆಯಲ್ಲಿ ನಡೆದ ಅಪರಾಧ ಕೃತ್ಯಗಳ ಆರೋಪಿಗಳನ್ನ ಬಂಧಿಸಿದ್ದಾರೆ. ಏ.19ರಂದು ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ನಡೆದ ಫೈರಿಂಗ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸ್ತೂಲ್, ಗುಂಡುಗಳನ್ನು ತಯಾರಿಸಿ ಕೊಟ್ಟಿದ್ದ ಮೂವರನ್ನ ಬಂಧಿಸಲಾಗಿದೆ. ಬಿಹಾರದ ಮುಂಗೇರ ಜಿಲ್ಲೆಯ ಮಿರ್ಜಾಪುರ ಬರದಾದಲ್ಲಿ ಬಂಧಿಸಿ, ಆರೋಪಿಗಳನ್ನ ಹಾವೇರಿಗೆ ಕರೆತರಲಾಗುತ್ತಿದೆ.

ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್​ಪಿ ಹನುಮಂತರಾಯ

ಬುಧವಾರ ಸಂಜೆ ಶಿಗ್ಗಾವಿಯಲ್ಲಿ ಚಿನ್ನಿದಾಂಡು ಆಟದಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ಪ್ರಕರಣವನ್ನ ಸಹ ಬೇಧಿಸಿರುವ ಪೊಲೀಸರು ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಜೊತೆಗೆ ಹಾನಗಲ್ ತಾಲೂಕಿನ ತಿಳುವಳ್ಳಿಯಲ್ಲಿ ಮೇ 31ರಂದು ಸಂಜೆ ನಡೆದಿದ್ದ ವಿಕಲಚೇತನ ಯುವತಿ ಮೇಲಿನ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನ ಸಹ ಅರೆಸ್ಟ್​ ಮಾಡಲಾಗಿದೆ.

ಇದನ್ನೂ ಓದಿ:ಶಿಗ್ಗಾವಿಯಲ್ಲಿ ಚಿನ್ನಿದಾಂಡು ಆಟದ ವೇಳೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

ವರದಕ್ಷಿಣೆ ಹಣವನ್ನು ತೆಗೆದುಕೊಂಡು ಬಾ ಎಂದು ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟು, ಕುತ್ತಿಗೆ ಹಿಸುಕಿ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿ ರಾಜೇಶ್ ಎಂಬಾತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹಾವೇರಿ ತಾಲೂಕಿನ ದಿಡಗೂರ ಗ್ರಾಮದ ಆರೋಪಿ ರಾಜೇಶ್, ಹಾನಗಲ್‌ನ ಗಂಗಾನಗರದ ಪಾರ್ವತಿ ಅವರನ್ನು ಪ್ರೀತಿಸಿ 2021ರಲ್ಲಿ ವಿವಾಹವಾಗಿದ್ದ. ನಂತರ ಪಾರ್ವತಿ ಹೆಸರಿನಲ್ಲಿ ₹2 ಲಕ್ಷ ಲೋನ್‌ ಮಾಡಿ ಹಣವನ್ನು ತೆಗೆದುಕೊಂಡಿದ್ದ. ಪತಿಯ ಕಿರುಕುಳದಿಂದ ಮನನೊಂದ ಪಾರ್ವತಿ ತಂಗಿ ಮನೆಯಲ್ಲಿ ವಾಸವಾಗಿದ್ದರು.

ಮಗಳಿಗೆ ಆದ ಅನ್ಯಾಯದಿಂದ ಮನನೊಂದ ಪಾರ್ವತಿಯ ತಂದೆ 10 ದಿನಗಳ ಹಿಂದೆ ಮರಣ ಹೊಂದಿದರು. ಇಷ್ಟಾದರೂ ರಾಜೇಶ್ ಪಾರ್ವತಿಯೊಂದಿಗೆ ಜಗಳ ನಡೆಸಿ, ಕೊಲೆ ಮಾಡಿದ್ದ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ನಾಟಕ ಮಾಡಿದ್ದ. ಹಾನಗಲ್ ಠಾಣೆ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಶಿಗ್ಗಾಂವಿ ಚಿತ್ರಮಂದಿರದಲ್ಲಿ ಶೂಟೌಟ್ ಪ್ರಕರಣ: ಮೂವರು ಆರೋಪಿಗಳು ಪೊಲೀಸ್​​ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ₹4.10 ಲಕ್ಷ ಮೌಲ್ಯದ ವಿವಿಧ ಕಂಪನಿಯ 82 ಮೊಬೈಲ್‌ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾನಗಲ್‌ ತಾಲೂಕು ಹುಲಗಿನಕೊಪ್ಪದ ಆನಂದ ದೊಡ್ಡಮನಿ ಬಂಧಿತ ಆರೋಪಿ.

ಈತ ಕಳ್ಳತನ ಮಾಡಿದ ಮೊಬೈಲ್‌ಗಳನ್ನು ಶಿಗ್ಗಾವಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಸಾಗಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಪ್ರಕರಣವನ್ನು ಬೇಧಿಸಿದ್ದಾರೆ.

ಈ ಎಲ್ಲಾ ಪ್ರಕರಣಗಳನ್ನ ಬೇಧಿಸಿರುವ ಪೊಲೀಸ್ ತಂಡಗಳಿಗೆ ಪೂರ್ವ ವಲಯದ ಐಜಿ ಡಿಜಿಪಿ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದು, ಸಿಬ್ಬಂದಿ ಕಾರ್ಯಕ್ಕೆ ಎಸ್​ಪಿ ಹನುಮಂತರಾಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Jun 3, 2022, 8:57 AM IST

ABOUT THE AUTHOR

...view details