ಕರ್ನಾಟಕ

karnataka

ಅಭಿಮಾನಿಗಳೊಂದಿಗೆ ಸ್ವಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಅದ್ಧೂರಿ ಹುಟ್ಟುಹಬ್ಬ

By

Published : Jan 29, 2023, 8:37 AM IST

Updated : Jan 29, 2023, 12:29 PM IST

ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರ 63ನೇ ಜನ್ಮದಿನಾಚರಣೆಯನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

Chief Minister Basavaraj Bommai
ಬೊಮ್ಮಾಯಿ ಅವರ 63ನೇ ಜನ್ಮದಿನಾಚರಣೆಯನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಆಚರಿಸಲಾಯಿತು.

ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಅವರ 63ನೇ ಜನ್ಮದಿನಾಚರಣೆ

ಹಾವೇರಿ:ಸಿಎಂ ಬಸವರಾಜ ಬೊಮ್ಮಾಯಿ ಅವರು ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಶಿಗ್ಗಾಂವಿಯಲ್ಲಿ ಶನಿವಾರ ತಮ್ಮ ಜನ್ಮದಿನ ಆಚರಿಸಿಕೊಂಡರು. ಇಲ್ಲಿನ ಸಂತೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. "ಇಷ್ಟು ದಿನದ ರಾಜಕೀಯ ಜೀವನದಲ್ಲಿ ನಾನೆಂದೂ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಂಡಿಲ್ಲ. ಆದರೆ ಇಂದು ಕ್ಷೇತ್ರದ ಜನರ ಅಭಿಮಾನದಿಂದಾಗಿ ಆಚರಿಸಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸ್ಥಳೀಯ ಮಠಾಧೀಶರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಿಮಾನಿಗಳು ತಂದ 10ಕ್ಕೂ ಅಧಿಕ ಕೆಜಿ ಕೇಕ್‌ಗಳನ್ನು ತುಂಡರಿಸಿ ಸಂಭ್ರಮಿಸಿದರು. ಕ್ಷೇತ್ರದ ಜನರು ಸಿಎಂಗೆ ಕೇಕ್ ತಿನ್ನಿಸಿದರು.

"ನಿಮ್ಮ ಬೆಂಬಲ, ಆಶೀರ್ವಾದ ಮತ್ತು ಪ್ರಾಮಾಣಿಕ ಹಾರೈಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದೀರಿ. ಈ ಮಣ್ಣಿನ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮತ್ತೊಂದು ಜನ್ಮ ಇದ್ದರೆ ಅದು ಶಿಗ್ಗಾಂವಿಯಲ್ಲೇ ಆಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಭಾವುಕರಾದರು.

ನನ್ನ ಜೀವನದ ಅಮೃತ ಗಳಿಗೆ: "ನನ್ನ ಜನ್ಮದಿನ ಆಚರಣೆಯಿಂದ ನೀವು ಪಡುತ್ತಿರುವ ಸಂತಸದಲ್ಲಿ ನಾನು ಸಂತೋಷವಾಗಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ನಿಮ್ಮ ಜೊತೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿಲಿಲ್ಲ. ಈ ನೋವು ನನ್ನಲ್ಲಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ. ಈ ಜನ್ಮದಿನ ಆಚರಣೆ ನನ್ನ ಜೀವನದ ಅಮೃತ ಗಳಿಗೆ. ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿರುವ ನನಗೆ ನಿಮ್ಮ ಆಶೀರ್ವಾದ ಬೇಕು" ಎಂದರು.

ಬಜೆಟ್‌ ಬಗ್ಗೆ..: "ಶಿಗ್ಗಾಂವಿ ಕ್ಷೇತ್ರದ ಜನರ ಬೆಂಬಲದಿಂದ ನಾನು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ರಾಜ್ಯದ ಆರ್ಥಿಕ ಅಭಿವೃದ್ದಿಯಲ್ಲಿ ನಾವು ಬಹಳ ವೇಗ ಪಡೆದಿದ್ದೇವೆ. ಈ ವರ್ಷವೂ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ" ಎಂದು ಬೊಮ್ಮಾಯಿ ತಿಳಿಸಿದರು. "ಈ ಹಿಂದೆ ಸರ್ಕಾರಗಳು ಮಾಡಿರುವ ಸಾಲ ತೀರಿಸುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಅಭಿವೃದ್ಧಿದರದ ಜೊತೆಗೆ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಬೇಕು. ಈ ವರ್ಷದ ಬಜೆಟ್ ರೈತರ, ದೀನದಲಿತರ, ಯುವಕರ, ಮಹಿಳೆಯರ ಪರವಾಗಿರುತ್ತದೆ" ಎಂದು ತಿಳಿಸಿದರು.

ಬೊಮ್ಮಾಯಿ ಜನ್ಮದಿನದ ಅಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗಾಯಕ ವಿಜಯ ಪ್ರಕಾಶ್ ಅವರ ತಂಡ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಗಾಯಕರಾದ ಅನುರಾಧ, ರಾಜೇಶ್ ಕೃಷ್ಣನ್ ಹಾಡಿದರು. ಅಭಿಮಾನಿಗಳು ಸಂಗೀತಕ್ಕೆ ಹೆಜ್ಜೆ ಹಾಕಿ ಖುಷಿಪಟ್ಟರು.

ಇದನ್ನೂ ಓದಿ:ನೆಂಟಸ್ಥಿಕೆ ಬೆಳೆಸಿದ ಶಾಮನೂರು ಹಾಗೂ ಎಂಬಿ ಪಾಟೀಲ್​​ ಕುಟುಂಬ

Last Updated : Jan 29, 2023, 12:29 PM IST

ABOUT THE AUTHOR

...view details