ಹಾವೇರಿ:ಹಾವೇರಿ ತಾಲೂಕು ಹೊಸರಿತ್ತಿ ಪಟ್ಟಣದಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಅಕ್ಕೂರು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಳೆದ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಗ್ರಾಮಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮೇಲೆ ಮನವಿ ಸಲ್ಲಿಸಿ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿದ್ದರು. ಇದರ ಪರಿಣಾಮ ಹೊಸರಿತ್ತಿಯಿಂದ ಅಕ್ಕೂರು ಗ್ರಾಮ ಸಂಪರ್ಕಿಸುವ ಮೂರು ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಅನುಮತಿ ಸಿಕ್ಕಿತ್ತು. ಆದರೆ ಈಗ ಆ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿದ್ದಾರೆ.
ಹೊಸರಿತ್ತಿಯಿಂದ ಅಕ್ಕೂರಿನವರೆಗೆ ಗುತ್ತಿಗೆದಾರರು ರಸ್ತೆಗೆ ಡಾಂಬರು ಕಾಮಗಾರಿ ನೆರವೇರಿಸಿದ್ದಾರೆ. ಕಳಪೆ ಕಾಮಗಾರಿಗೆ ಕೋಪಗೊಂಡಿರುವ ಜನರು ಗುತ್ತಿಗೆದಾರರು ಸರಿಯಾದ ಪ್ರಮಾಣದಲ್ಲಿ ಡಾಂಬರು ಬಳಸಿಲ್ಲಾ ಎಂದು ದೂರಿದ್ದಾರೆ. ಈ ಹಿಂದೆ ಇದ್ದ ರಸ್ತೆ ಮೇಲಿನ ದೂಳು ಕೂಡ ತೆಗೆಯದೆ ಅದರ ಮೇಲೆಯೇ ಡಾಂಬರು ಹಾಕಿದ್ದಾರೆ. ಹೀಗಾಗಿ ಡಾಂಬರು ಕೈಯಿಂದ ಕಿತ್ತರೆ ಕಿತ್ತು ಬರುತ್ತಿದೆ ಎನ್ನುತ್ತಿದ್ದಾರೆ.
ಡಾಂಬರೀಕರಣ ಮಾಡಿದ ಮೂರೇ ದಿನಗಳಲ್ಲಿ ಈ ರೀತಿಯಾದರೆ ಮಳೆಗಾಲದಲ್ಲಿ ರಸ್ತೆ ಹೇಗೆ ಇರಬಹುದು ಎಂದು ಊಹಿಸಿಕೊಳ್ಳಿ ಅಂತಿದ್ದಾರೆ ಸ್ಥಳೀಯರು. ಡಾಂಬರೀಕರಣದ ವೇಳೆ ಕೆಲಸಗಾರರನ್ನು ಕೇಳಿದರೆ ಡಾಂಬರು ಹಾಕಿದ ನಂತರ ಹೀಟ್ ಮಾಡಿದ ಮೇಲೆ ರಸ್ತೆ ಸರಿಯಾಗುತ್ತದೆ ಎಂದು ತಿಳಿಸಿದ್ದರು. ಆದರೆ ಹೀಟ್ ಮಾಡಿದರೂ ಸಹ ಡಾಂಬರು ಕಿತ್ತುಬರುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.