ಹಾಸನ:ನಾವು ಹಿಂಬಾಗಿಲ ರಾಜಕೀಯ ಮಾಡುತ್ತಿಲ್ಲ. ನೇರವಾಗಿ ಜನರ ಬಳಿ ಹೋಗಿ ಮತಯಾಚಿಸುತ್ತಿದ್ದೇವೆ’ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಭವಾನಿ ರೇವಣ್ಣ ಹೇಳಿದರು.
ನಗರದ ಜ್ಞಾನಕ್ಷಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು,‘ಶಾಸಕರ ಪತ್ನಿಯಾಗಿ ಹೇಗೆ ಇದ್ದೇನೋ, ಹಾಗೆಯೇ ಸಂಸದನ ತಾಯಿಯಾಗಿ ಇರುವೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಪ್ರಜ್ವಲ್ ಗೊತ್ತಿಲ್ಲದೆ ಏನಾದರೂ ಮಾತನಾಡಿದ್ದರೆ ಯಾರು ಅನ್ಯತಾ ಭಾವಿಸಬಾರದು. ಆತ, ತನ್ನ ತಂದೆ, ತಾತ, ಚಿಕ್ಕಪ್ಪರಂತೆ ಕೆಲಸ ಮಾಡುವ ಮಹತ್ವಕಾಂಕ್ಷೆ ಹೊಂದಿದ್ದಾನೆ’ ಎಂದು ತಿಳಿಸಿದರು.
ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಎಂಟು ವರ್ಷದ ಹಿಂದೆ ರಾಜಕಾರಣಕ್ಕೆ ಬಂದೆ. ದೇವೇಗೌಡರು ಮಹಿಳೆಯರ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಸಣ್ಣ ಸಮುದಾಯ ಹೆಣ್ಣು ಮಕ್ಕಳಿಗೆ ರಾಜಕೀಯ ಶಕ್ತಿ ನೀಡಲಾಗುವುದು. ಮತಯಾಚನೆಗಾಗಿ ಮಹಿಳಾ ಸಮಾವೇಶ ನಡೆಸುತ್ತಿಲ್ಲ. ದೇಶದ ಭದ್ರತೆ ಮತ್ತು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಸಮಾವೇಶ ನಡೆಸಲಾಗುತ್ತಿದೆ. ತಾಯಂದಿರ ಆಶೀರ್ವಾದ ಯುವಕರಿಗೆ ಇರಬೇಕು’ ಎಂದು ಹೇಳಿದರು.