ಕರ್ನಾಟಕ

karnataka

ಸಿಸಿಟಿವಿ ಹಾಕಿಸದಿದ್ದರೆ ಬೀಳುತ್ತೆ ದುಬಾರಿ ದಂಡ: ಹಾಸನ ವ್ಯಾಪಾರಿಗಳೇ ಎಚ್ಚರ

By

Published : Oct 5, 2021, 9:37 AM IST

Updated : Oct 5, 2021, 9:50 AM IST

ಹಾಸನ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಮತ್ತು ಅಪರಾಧ ಮಾಡಿದವರನ್ನು ಪತ್ತೆ ಮಾಡಲು ಸುಳಿವು ನೀಡಲು ಸಹಕಾರಿಯಾಗಲೆಂದು ಎಲ್ಲಾ ಮಳಿಗೆ ಮಾಲೀಕರು, ವ್ಯಾಪಾರಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡುವಂತೆ ಹಾಸನ ಎಸ್​ಪಿ ಶ್ರೀನಿವಾಸ್ ಗೌಡ ಕಡ್ಡಾಯ ಸೂಚನೆ ನೀಡಿದ್ದಾರೆ.

hassan
ಹಾಸನ ಎಸ್​ಪಿ ಶ್ರೀನಿವಾಸ್ ಗೌಡ

ಹಾಸನ:ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಹತ್ತಿಕ್ಕಬೇಕು ಎಂದು ಹಾಸನ ಎಸ್​ಪಿ ಶ್ರೀನಿವಾಸ್ ಪಣ ತೊಟ್ಟಿದ್ದಾರೆ.

ಸೆಪ್ಟಂಬರ್ 8 ರಂದು ಗ್ರಾನೈಟ್ ಉದ್ಯಮಿ ರಘು ಅವರ ಮನೆಯಲ್ಲಿ ಸುಮಾರು 5 ಕೋಟಿ ರೂ ಮೌಲ್ಯದ ಒಡವೆ, ನಗದು ಕಳ್ಳತನವಾಗಿತ್ತು. ಈ ಪ್ರಕರಣದಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣ ನಡೆದ ಮನೆಗೆ ಖುದ್ದಾಗಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಸಿಸಿಟಿವಿ ಹಾಕಿಸದಿದ್ದರೆ ಬೀಳುತ್ತೆ ದುಬಾರಿ ದಂಡ

ಹಾಸನ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಬ್ರೇಕ್ ಹಾಕಲು ಮತ್ತು ಅಪರಾಧ ಪ್ರಕರಣ ಮಾಡಿದವರನ್ನು ಪತ್ತೆ ಮಾಡಲು ಸುಳಿವು ನೀಡಲು ಸಹಕಾರಿಯಾಗಲೆಂದು ಹಾಸನ ಎಸ್​ಪಿ ಶ್ರೀನಿವಾಸ್ ಗೌಡ, ಎಲ್ಲಾ ಮಳಿಗೆ ಮಾಲೀಕರು, ವ್ಯಾಪಾರಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದು ಕಡ್ಡಾಯ ಆದೇಶ ಮಾಡಿದ್ದಾರೆ. ಹಲವು ಪ್ರಕರಣಗಳಲ್ಲಿ ಸಿಸಿ ಕ್ಯಾಮೆರಾ ಹಾಕದೆ ನಿರ್ಲಕ್ಷ್ಯ ಮಾಡಿ ಸಾಕಷ್ಟು ಕಳ್ಳತನಕ್ಕೆ ಅನುಕೂಲ ಆಗಿರೋದು ಕಂಡುಬಂದಿದೆ. ಗ್ರಾನೈಟ್ ಉದ್ಯಮಿ ರಘು ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಈ ವಿಚಾರ ಸಾಬೀತಾಗಿದೆ.

ನಗರದ ಮಳಿಗೆ ಮಾಲೀಕರು ಮತ್ತು ವ್ಯಾಪಾರಿಗಳು ಸಿಸಿ ಕ್ಯಾಮೆರಾ ಅಳವಡಿಸದಿದ್ದರೆ ಅಂತಹವರ ವಿರುದ್ಧ 5 ಸಾವಿರ ರೂ. ದಂಡ ವಿಧಿಸಲಾಗುವುದು. ಅದಕ್ಕೂ ಸ್ಪಂದಿಸಲಿಲ್ಲ ಎಂದಾದರೆ ನಗರಸಭೆ ವತಿಯಿಂದ ಮಳಿಗೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಮಾಡಲಾಗುವುದು ಎಂದಿದ್ದಾರೆ. ಹಾಗಂತ ಕಡಿಮೆ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸುವಂತಿಲ್ಲ. ಬದಲಿಗೆ ಉತ್ತಮ ಗುಣಮಟ್ಟದ ಕ್ಯಾಮೆರಾವನ್ನ ವ್ಯಾಪಾರಿಗಳು ಅಳವಡಿಸಬೇಕೆಂದು ತಿಳಿಸಿದ್ದಾರೆ.

ಈಗಾಗಲೇ ಮಳಿಗೆಗಳಿಗೆ ನೋಟೀಸ್ ನೀಡಲಾಗಿದೆ. ಇದಕ್ಕಾಗಿಯೇ ಹಾಸನ ನಗರಸಭೆ ಅಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಒಳಗೊಂಡಂತೆ ಒಂದು ಕಮಿಟಿ ಕೂಡ ರಚಿಸಲಾಗಿದೆ ಎಂದು ಹಾಸನ ಎಸ್​ಪಿ ಶ್ರೀನಿವಾಸ್ ಗೌಡ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವಾಗಿ ಹಾಗೂ ವ್ಯಾಪಾರವಿಲ್ಲದೇ ಕಂಗಾಲಾಗಿರುವಾಗ ಇಷ್ಟೊಂದು ದುಬಾರಿ ವೆಚ್ಚದ ಸಿಸಿ ಕ್ಯಾಮರಾವನ್ನು ಅಳವಡಿಸಬೇಕೆಂದು ಖಡಕ್ ಆದೇಶ ಮಾಡಿರುವುದು ವ್ಯಾಪಾರಸ್ಥರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

Last Updated : Oct 5, 2021, 9:50 AM IST

ABOUT THE AUTHOR

...view details