ಗದಗ: ಜಿಲ್ಲಾದ್ಯಂತ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳಿಸಿದ್ದಲ್ಲದೇ, ಸಾಕಷ್ಟು ಅವಾಂತರ ಉಂಟಾಗಿವೆ. ಅಕಾಲಿಕ ಮಳೆ ಜನರ ಜೀವಕ್ಕೆ ಕುತ್ತು ತರುತ್ತಿದೆ.
ಉಪ್ಪಿನ ಬೆಟಗೇರಿಯಯಲ್ಲಿ ಕನ್ಯೆ ನೋಡಿ ಮರಳಿ ಊರಿಗೆ ಬರುತ್ತಿದ್ದ ಮುಂಡರಗಿ ತಾಲೂಕಿನ ಯಕ್ಲಾಸಪುರ ಗ್ರಾಮದ ಟಿಪ್ಪುಸುಲ್ತಾನ್ (26) ಎಂಬ ಯುವಕ ಹಳ್ಳ ದಾಟುವ ವೇಳೆ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿ ಸಾವಿಗೀಡಾಗಿದ್ದಾನೆ. ಟಿಪ್ಪುಸುಲ್ತಾನ್ ಗುರುವಾರ ಕನ್ಯೆ ನೋಡಲು ಉಪ್ಪಿನ ಬೆಟಗೇರಿಗೆ ಹೋಗಿದ್ದ. ಕನ್ಯೆ ನೋಡಿ ವಾಪಸ್ ಬರುವಷ್ಟೊತ್ತಿಗೆ ಸಂಜೆಯಾಗಿದೆ.
ಹಾಗಾಗಿ ಉಪ್ಪಿನ ಬೆಟಗೇರಿಯಿಂದ ಮುಂಡರಗಿವರೆಗೆ ಬಂದು ಯಕ್ಲಾಸಪುರದಲ್ಲಿ ಮಳೆ ಬರುತ್ತಿರುವ ಬಗ್ಗೆ ತಂದೆಗೆ ಕರೆ ಮಾಡಿ ಕೇಳಿದ್ದನಂತೆ . ಆಗ ಟಿಪ್ಪು ತಂದೆ ಇಲ್ಲಿ ತುಂಬಾ ಮಳೆ ಬರುತ್ತಿದೆ. ಇವತ್ತು ಬರಬೇಡ, ಇವತ್ತೊಂದಿನ ಮುಂಡರಗಿಯಲ್ಲಿದ್ದು, ಶುಕ್ರವಾರ ಬೆಳಗ್ಗೆ ಎದ್ದು ಬಾ ಎಂದು ಹೇಳಿದ್ದರಂತೆ.